Homeಸುದ್ದಿಗಳುಲೋಕ ಚುನಾವಣಾ ವೆಚ್ಚದಲ್ಲಿ ಅವ್ಯವಹಾರ; ದುಡ್ಡಿನ ಜೊತೆ ದಾಖಲೆಯನ್ನೂ ಹೊತ್ತೊಯ್ದ  ತಹಶಿಲ್ದಾರ ಪರಮಾನಂದ

ಲೋಕ ಚುನಾವಣಾ ವೆಚ್ಚದಲ್ಲಿ ಅವ್ಯವಹಾರ; ದುಡ್ಡಿನ ಜೊತೆ ದಾಖಲೆಯನ್ನೂ ಹೊತ್ತೊಯ್ದ  ತಹಶಿಲ್ದಾರ ಪರಮಾನಂದ

ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಪ್ರತಿಯೊಂದು ಮತಗಟ್ಟೆಗೂ ಖರ್ಚು ವೆಚ್ಚಕ್ಕೆಂದು ರಾಜ್ಯ ಸರ್ಕಾರ ರೂ. ೩೦ ಸಾವಿರ ಬಿಡುಗಡೆ ಮಾಡಿದ್ದು ಅದರ ಮೊತ್ತ ಸುಮಾರು ಒಂದು ಕೋಟಿ ಆರು ಲಕ್ಷ ರೂ. ಗಳು. ಈ ಹಣದ ಪೈಕಿ ಖರ್ಚಾಗಿ ಉಳಿದ ಹಣವನ್ನು ಅದರ ಜೊತೆಗೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಕೂಡ ಆಗ ಕರ್ತವ್ಯ ನಿರ್ವಹಿಸಿದ್ದ, ಈಗ ದಾಂಡೇಲಿಯ ತಹಶೀಲ್ದಾರರಾಗಿರುವ ಶ್ರೀಮಾನ್ ಶೈಲೇಶ್ ಪರಮಾನಂದ ಅವರು ಹೊತ್ತೊಯ್ದಿದ್ದಾರೆ ಎಂಬ ಗುಮಾನಿ ಎದ್ದಿದೆ.

ಮಾಹಿತಿ ಹಕ್ಕಿನಡಿ ಸಲ್ಲಿಸಲಾದ ಅರ್ಜಿಯೊಂದಕ್ಕೆ ಈ ಮಾಹಿತಿ ದೊರಕಿದ್ದು ವಿವರ ಕೇಳಿದರೆ ತಹಶೀಲ್ದಾರ ಸಾಹೇಬರು ಯಾವ ಉತ್ತರವನ್ನೂ ಕೊಡದೇ ಮೌನವೃತ ಪಾಲಿಸುತ್ತಿದ್ದಾರೆ ಎನ್ನಲಾಗಿದೆ.

ಅಸಲಿ ವಿಷಯವೇನೆಂದರೆ, ಸರ್ಕಾರವು ಲೋಕಸಭಾ ಚುನಾವಣೆಯ ಕಾಲಕ್ಕೆ ವೆಚ್ಚಕ್ಕಾಗಿ ಪ್ರತಿಯೊಂದು ಮತಗಟ್ಟೆಗೆ ರೂ. ೩೦ ಸಾವಿರದಂತೆ ಜಿಲ್ಲೆಯ ೩೫೩ ಮತಗಟ್ಟೆಗಳಿಗೆ ರೂ. ೧,೦೫,೯೦,೦೦೦/- ಗಳನ್ನು ದಿ. ೧೨.೦೪.೨೧ ರಂದು ಬಿಡುಗಡೆ ಮಾಡಿದೆ. ಆ ಹಣವನ್ನು ಖರ್ಚು ಮಾಡಿ ಲೆಕ್ಕಪತ್ರವನ್ನು ಸರ್ಕಾರಕ್ಕೆ ತೋರಿಸಬೇಕು. ಆದರೆ ಆಗ ಪ್ರಭಾರಿಯಾಗಿ ಬೆಳಗಾವಿಯಲ್ಲಿದ್ದ ತಹಶಿಲ್ದಾರರು ಮಾಡಿದ್ದೇನು ? ಜಿಲ್ಲಾಡಳಿತ ಬಿಡುಗಡೆ ಮಾಡಿದ ಹಣ ಖರ್ಚು ವೆಚ್ಚದ ದಾಖಲೆ ಹಾಗೂ ಅದರಲ್ಲಿ ಉಳಿದ ಹಣದ ಸಮೇತ ಸದ್ಯಕ್ಕೆ ಉ.ಕ.ಜಿಲ್ಲೆಯ ದಾಂಡೇಲಿಯಲ್ಲಿ ತಮ್ಮ ಅಖಂಡ ಸೇವೆ ಸಲ್ಲಿಸುತ್ತಿದ್ದಾರೆ !

ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಈ ವಿಷಯವನ್ನು ಬಹಿರಂಗಪಡಿಸಿದ್ದು ಸದರಿ ತಹಶೀಲ್ದಾರರನ್ನು ಬೆಳಗಾವಿಗೆ ಕರೆಸುವ ಕೆಲಸವಾಗಬೇಕಾಗಿದೆ. ಇನ್ನೊಂದು ವಿಷಯವೆಂದರೆ, ಚುನಾವಣಾ ಪ್ರಭಾರಿಯಾಗಿದ್ದ ಈ ತಹಶೀಲ್ದಾರರು ಮಾಡಿದ ಘನ ಕಾರ್ಯದ ಬಗ್ಗೆ ಗೊತ್ತಿದ್ದೂ ಮೌನವಾಗಿದ್ದ ಇನ್ನೊಬ್ಬ ದಂಡಾಧಿಕಾರಿಯ ವಿರುದ್ಧವೂ ದಂಡ ಪ್ರಯೋಗ ಆಗಬೇಕೆಂದು ಗಡಾದ ಆಗ್ರಹಿಸುತ್ತಾರೆ.

ಭ್ರಷ್ಟಾಚಾರಕ್ಕೆ ಹಲವು ಮುಖಗಳಿವೆಯೆನ್ನುತ್ತಾರೆ. ಅವುಗಳಲ್ಲಿ ಇದೂ ಒಂದು ಮುಖ. ಜನತೆಯ ಉಪಯೋಗಕ್ಕಾಗಿ ಸರ್ಕಾರ ಕೋಟ್ಯಂತರ ಹಣ ಬಿಡುಗಡೆ ಮಾಡುತ್ತದೆ. ಅದು ಜನಸಾಮಾನ್ಯರ ತೆರಿಗೆ ಹಣ. ಅದನ್ನು ಮತ್ತೆ ಜನರಿಗಾಗಿ ಖರ್ಚು ಮಾಡಬೇಕು. ಆದರೆ ಭ್ರಷ್ಟರು ನಡುವೆಯೇ ಗುಳುಂ ಮಾಡಿಬಿಡುತ್ತಾರೆ. ಜೀವಮಾನ ಪರ್ಯಂತ ಪಡೆದ ಸಂಬಳಕ್ಕಿಂತಲೂ ಹತ್ತಾರು ಪಟ್ಟು ಹೆಚ್ಚು ಅಕ್ರಮ ಸಂಪಾದನೆ ಮಾಡುತ್ತಾರೆ ಇದಕ್ಕೆ ಇತ್ತೀಚಿನ ಎಸಿಬಿ ದಾಳಿಯಲ್ಲಿ ಬಲೆಗೆ ಬಿದ್ದ ತಿಮಿಂಗಲಗಳೇ ಸಾಕ್ಷಿ.

ಇದೇ ರೀತಿ ಪ್ರಸಕ್ತ ದಾಂಡೇಲಿಯ ತಹಶೀಲ್ದಾರ ರ ವಿರುದ್ಧವೂ ತನಿಖೆಯಾಗಬೇಕು. ವೆಚ್ಚಕ್ಕಾಗಿ ನೀಡಿದ ಹಣದಲ್ಲಿ ಉಳಿಕೆ ಮಾಡಿಕೊಂಡಿದ್ದಲ್ಲದೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡ ಒಯ್ದಿರುವ ತಹಶೀಲ್ದಾರ ಸಾಹೇಬರು ಒಂದು ದಾಖಲೆಯನ್ನೇ ನಿರ್ಮಿಸಿದ್ದಾರೆಯೆನ್ನಬೇಕು. ಈ ಮಹಾಶಯನಿಗೆ ಸಹಕರಿಸಿದ ಎಲ್ಲರಿಗೂ ದಂಡಾಸ್ತ್ರ ಪ್ರಯೋಗ ಈಗ ಅನಿವಾರ್ಯ ವಾಗಿದೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಗಳು ಕಣ್ತೆರೆಯಬೇಕು.


ವರದಿ: ಉಮೇಶ ಬೆಳಕೂಡ,ಮೂಡಲಗಿ

RELATED ARTICLES

Most Popular

error: Content is protected !!
Join WhatsApp Group