ಬೈಲಹೊಂಗಲ: 15 ನೆಯ ಶತಮಾನದ ಸಂತ ಶ್ರೇಷ್ಠ ಕನಕದಾಸರ ಜೀವನ ತತ್ವ ಮನುಕುಲಕ್ಕೆ ಮಾದರಿಯಾದುದು ಎಂದು ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಹೇಳಿದರು. ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಕನಕ ಜಯಂತಿ ಹಾಗೂ ರಾಷ್ಟ್ರೀಯ ಶಿಕ್ಷಣ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನಕದಾಸರು ಕೀರ್ತನೆಗಳ ಮೂಲಕ ಸಾಮಾಜಿಕ ಸಮಾನತೆಯನ್ನು ಸಾರಿ ಕನ್ನಡ ಸಾಹಿತ್ಯಕ್ಕೂ ಅಪರೂಪದ ಕೊಡುಗೆ ನೀಡಿದ್ದಾರೆ ಎಂದರು. ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಮಂತ್ರಿಗಳಾದ ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಜನ್ಮದಿನದ ಅಂಗವಾಗಿ ಭಾರತದ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದ್ದು ಉತ್ತಮ ಬದುಕು ರೂಪಿಸಿಕೊಳ್ಳಲು ಉತ್ತಮ ಶಿಕ್ಷಣದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಾದ ಐಶ್ವರ್ಯ ಕುಲಕರ್ಣಿ, ಸುನಿತಾ ಚಿಲಮೂರ, ಸಂಜು ಸೊಗಲದ, ಗಜೇಂದ್ರ ಹಿರೇಮಠ ಕನಕದಾಸರು ಹಾಗೂ ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಬಗ್ಗೆ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ವಿನಾಯಕ ಬಡಿಗೇರ, ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಸುನೀಲ ಭಜಂತ್ರಿ, ಶ್ರೀಪಾಲ ಚೌಗಲಾ, ಶಿವಾನಂದ ಬಳಿಗಾರ, ವಿರೇಂದ್ರ ಪಾಟೀಲ, ರೇಖಾ ಸೊರಟೂರ ಉಪಸ್ಥಿತರಿದ್ದರು. ಸಾವಿತ್ರಿ ಹೊಂಗಲ ಸ್ವಾಗತಿಸಿದರು. ಚೈತ್ರಾ ಸೊಗಲದ ನಿರೂಪಿಸಿದರು. ಐಶ್ವರ್ಯ ಕುಲಕರ್ಣಿ ವಂದಿಸಿದರು.