ವರದಿ: ಪಂಡಿತ ಯಂಪೂರೆ.
ಸಿಂದಗಿ: ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ, ದಿನ ನಿತ್ಯ ಕನ್ನಡ ಬಳಸಿ, ಉಳಿಸಿ ಎಂದು ಎಲ್ಲೆಡೆ ಹೇಳಲಾಗುತ್ತಿದ್ದರೂ ರಾಜ್ಯದಲ್ಲಿ ನಿತ್ಯ ವಕ್ಕರಿಸಿಕೊಳ್ಳುತ್ತಿರುವ ಅನ್ಯ ಭಾಷಿಕರಿಂದ ಕನ್ನಡದ ಉಳಿವಿಗೆ ಕನ್ನಡಪರ ಸಂಘಟನೆಗಳು ಕನ್ನಡ ಹೋರಾಟಗಾರರು ನಿತ್ಯ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಅಲ್ಲದೆ ಸರ್ಕಾರ ಕೂಡ ಕನ್ನಡ ಉಳಿವಿಗಾಗಿ ಅನೇಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿದೆ ಆದರೆ ತಾಲೂಕಿನ ಉಪನೋಂದಣಿ ಕಚೇರಿಯಲ್ಲಿ ಜನರ ಆಸ್ತಿಗಳ ಮೂಲ ದಾಖಲಾತಿ (ಋಣಭಾರ ಪತ್ರ) ಯಲ್ಲಿ ಸರಕಾರಿ ಆದೇಶವನ್ನು ಗಾಳಿಗೆ ತೂರಿ ಕನ್ನಡದ ಕಗ್ಗೊಲೆ ಮಾಡಲಾಗುತ್ತಿದೆ ಇದರಿಂದ ನ್ಯಾಯಾಲಯದಲ್ಲಿ ನಡೆಯುತ್ತಿರುವ ವ್ಯಾಜ್ಯಗಳಿಗೆ ಸರಿಯಾದ ದಾಖಲೆಗಳು ಲಭ್ಯವಾಗದಿರುವ ಕಾರಣ ವ್ಯಾಜ್ಯಗಳು ಬಿದ್ದು ಹೋಗಿ ಕಕ್ಷಿಗಾರ ಇಲಾಖೆಯನ್ನು ದೂಷಿಸುವ ಪ್ರಸಂಗ ಬಂದೊದಗಿದೆ.
ಹೌದು, ಸಿಂದಗಿಯ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಆಸ್ತಿ ಇದ್ದವರಿಗೆ ನೀಡುತ್ತಿರುವ ಋಣಭಾರ ಪ್ರಮಾಣ (ಎನ್ ಕಂಬರೆನ್ಸ್) ಪತ್ರದಲ್ಲಿ ಕರ್ನಾಟಕ ಸರ್ಕಾರ ಎಂದು ಬರೆಯುವ ಬದಲು ಕನಾಟಕ ಸಕಾರ, ಸಿಂದಗಿ ಪದವನ್ನು ಸಿಧಗಿ, ಸಂಖ್ಯೆ ಬದಲಾಗಿ ಸಖ್ಯೆ, ವರ್ಷ ಪದವನ್ನು ವಷ, ಸಂಬಂಧದಲ್ಲಿ ಬದಲಾಗಿ ಸಭದದಲ್ಲಿ, ಅರ್ಜಿ ಪದವನ್ನು ಅಜಿ, ಸಂಪುಟ ಪದವನ್ನು ಸಪುಟ ಎಂದು ತಪ್ಪಾಗಿ ಮುದ್ರಿಸುವ ಮೂಲಕ ಕನ್ನಡ ನಾಡಿನ ಸರ್ಕಾರಿ ಕಚೇರಿಯಲ್ಲೇ ಕನ್ನಡಕ್ಕೆ ಅಪಮಾನ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಜ್ಞಾವಂತರು ದೂರುತ್ತಿದ್ದಾಗ್ಯೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಉಡಾಫೆ ಉತ್ತರ ನೀಡುತ್ತ ನುಣುಚಿಕೊಳ್ಳುತ್ತಿರುವುದು ವಿಪರ್ಯಾಸಕರ.
ಆಗ್ರಹ: ಅಧಿಕಾರಿಗಳ ನಿರ್ಲಕ್ಷ್ಯದಿಂದ ಸುಮಾರು 45 ಕ್ಕೂ ಹೆಚ್ಚು ಪದಗಳನ್ನು ದಿನಂಪ್ರತಿ ತಪ್ಪಾಗಿ ಮುದ್ರಿಸಿ ಅರ್ಜಿದಾರರಿಗೆ ನೀಡುತ್ತಿದ್ದಾರೆ. ಈ ಪ್ರಮಾದ ನಡೆಯುತ್ತಿರುವ ಬಗ್ಗೆ ರೈತರು, ಪ್ರಗತಿಪರ ಸಂಘಟನೆಗಳ ಮುಖಂಡರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಕೂಡಾ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಅಲ್ಲದೆ ಅದನ್ನು ಸರಿಪಡಿಸುವ ಕಾರ್ಯಕ್ಕೂ ಮುಂದಾಗದೇ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದರಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾರಣ ಇಂತಹ ಕನ್ನಡ ವಿರೋಧಿ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.
ಇದು ತಾಂತ್ರಿಕ ದೋಷವಾಗಿದ್ದರಿಂದ ಕನ್ನಡ ಭಾಷೆಯ ಪದಗಳು ತಪ್ಪಾಗಿವೆ. ಅದನ್ನು ಈಗಲೇ ಇಂಜನೀಯರರನ್ನು ಕರೆಯಿಸಿ ಸರಿಪಡಿಸುವ ಕಾರ್ಯಕ್ಕೆ ಮುಂದಾಗುತ್ತೇನೆ ಮುಂದಿನ ದಿನಗಳಲ್ಲಿ ಇಂತಹ ಪ್ರಮಾದ ನಡೆಯದ ಹಾಗೆ ನೋಡಿಕೊಳ್ಳುತ್ತೇನೆ.
ಎಂ.ಆರ್.ಪಾಟೀಲ
ಉಪ ನೋಂದಣಿ ಅಧಿಕಾರಿಗಳು,
ಸಿಂದಗಿ
ಅನ್ಯ ಭಾಷಿಕರಿಂದ ಕನ್ನಡ ಭಾಷೆಗೆ ಅಪಮಾನವಾಗುತ್ತಿದೆ ಎನ್ನುವ ಕೂಗು ಎಲ್ಲೆಡೆ ಕೇಳುತ್ತಿದ್ದರೆ ಕನ್ನಡಕ್ಕೆ ಬೇರೆಯವರಿಂದ ಅವಮಾನವಾಗುತ್ತಿಲ್ಲ. ಕರ್ನಾಟಕದಲ್ಲಿಯೇ ಇಂತಹ ಕನ್ನಡದ ಅರಿವಿಲ್ಲದ ಅಧಿಕಾರಿಗಳಿಂದ ಅನ್ಯಾಯವಾಗುತ್ತಿದೆ ಎಂದು ಇದರಿಂದ ಗೊತ್ತಾಗುತ್ತಿದೆ ದುಷ್ಮನ್ ಕಹಾಂ ಹೈ ಅಂದರೆ ಇಲ್ಲೆ ಹೈ ಎನ್ನುವಂತಾಗಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ಎಲ್ಲರೂ ಮುಂದಾಗಬೇಕಲ್ಲದೆ ಅಧಿಕಾರಿಗಳು ಕೂಡಲೇ ಸರಿಪಡಿಸಿಕೊಳ್ಳಬೇಕು ಇಲ್ಲದಿದ್ದರೆ ಕನ್ನಡದ ಉಳಿವಿಗೆ ಹೋರಾಟಕ್ಕೂ ಸಿದ್ಧ.
ರಾಜಶೇಖರ ಕೂಚಬಾಳ
ಕಸಾಪ ಅಧ್ಯಕ್ಷರು, ಸಿಂದಗಿ
ಇಡೀ ರಾಜ್ಯದ ತತ್ರಾಂಶದಲ್ಲಿ ದೋಷವಿದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇದೇ ರೀತಿಯಾಗಿ ಮುದ್ರಣವಾಗುತ್ತಿದೆ ನಮ್ಮದೇನು ತಪ್ಪಿಲ್ಲ. ಇದರ ಬಗ್ಗೆ ಕಳೆದ ವಾರದಲ್ಲಿ ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ ನಾವೇನೂ ಮಾಡುವುದಕ್ಕೆ ಬರುವುದಿಲ್ಲ.
ಸಚೀನ ಖೈನೂರ.
ಎಸ್ಡಿಎ ಉಪನೊಂದಣಿ ಇಲಾಖೆ
ಕನ್ನಡ ಅನಕ್ಷರಸ್ಥರಿಂದ ಹಾಳಾಗುತ್ತಿಲ್ಲ ಅಕ್ಷರವಂತರಿಂದ ಹಾಳಾಗುತ್ತಿದೆ ಎನ್ನುವಂತೆ ಕನ್ನಡ ರಕ್ಷಣೆ ಮಾಡುವ ಅಧಿಕಾರಿಗಳಿಂದಲೇ ಕನ್ನಡ ಮಾತೆಗೆ ಅವಮಾನವಾಗುತ್ತಿದೆ. ಎಲ್ಲ ಇಲಾಖೆಗಳಲ್ಲಿ ವಿದ್ಯುನ್ಮಾನ ಅಳವಡಿಕೆಯಾಗಿದೆ ಆದರೆ ಬಳಕೆ ಮಾಡುವ ಕೈಗಳು ಸರಿ ಇರದಿದ್ದರೆ ವಿದ್ಯುನ್ಮಾನಕ್ಕೆ ಬೈಯುವುದಲ್ಲ ಅದನ್ನು ಕೂಡಲೇ ಸರಿಪಡಿಸಿಕೊಳ್ಳಿ ಇಲ್ಲವಾದಲ್ಲಿ ಕನ್ನಡಪರ ಸಂಘಟನೆಗಳಿಂದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ
ಸದ್ದಾಮ ಆಲಗೂರ
ಕನ್ನಡಪರ ಹೋರಾಟಗಾರ, ಸಿಂದಗಿ.