“ನೀವು ಭಾರತವನ್ನು ಅರಿಯಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ. ಅವರಲ್ಲಿ ಎಲ್ಲವೂ ರಚನಾತ್ಮಕವಾದುದು, ನೇತ್ಯಾತ್ಮಕವಾದುದು ಯಾವುದೂ ಇಲ್ಲ” ಎಂದು ರವೀಂದ್ರನಾಥ ಠಾಕೂರರು ಸ್ವಾಮಿ ವಿವೇಕಾನಂದರ ಬಗ್ಗೆ ಹೇಳಿದ್ದಾರೆ.
ಇಂತಹ ವಿವೇಕ ,ವೀರರ ಕನಸಿನ ಭಾರತ ಸಾಕಾರಗೊಳ್ಳಬೇಕೆಂಬುದು ನಮ್ಮೆಲ್ಲರ ಆಸೆ ಅಲ್ಲವೇ.
ಸ್ವಾಮಿ ವಿವೇಕಾನಂದರು ೧೮೯೩ರ ಸೆಪ್ಟೆಂಬರ್ ೧೧ ರಂದು ಸಾವಿರಾರು ಕಿ.ಮೀ ದೂರದ ಅಮೆರಿಕಾದ ಚಿಕಾಗೋದಲ್ಲಿ ಮಾಡಿದ ಐತಿಹಾಸಿಕ ಭಾಷಣ ಭಾರತದ ಇತಿಹಾಸದ ಪುಟಗಳಲ್ಲಿನ ಮರೆಯಲಾಗದ ಕ್ಷಣ. ಅಂತಹ ಪುಣ್ಯಾತ್ಮ, ವೀರ ಸನ್ಯಾಸಿ, ಸಿಡಿಲ ಮರಿ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾರತದ ಭವ್ಯ ಪರಂಪರೆ, ಆಧ್ಯಾತ್ಮಿಕ ನೆಲೆಗಟ್ಟಿನ ದೇಶಭಕ್ತಿ, ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ಮಹಾತ್ಮ ಸ್ವಾಮಿ ವಿವೇಕಾನಂದರು ಸೆಪ್ಟೆಂಬರ್ ೧೧, ೧೮೯೩ ರಂದು ಮಾಡಿದ ಆ ಭಾಷಣ ಮರೆಯಲಾಗದು ಅಲ್ವೇ..
ರಾಷ್ಟ್ರಭಕ್ತಿಯ ವಿವೇಕ ಮತಿಗಳೇ ನಮಸ್ಕಾರ..
ಜಗತ್ತಿನ ದೊಡ್ಡಣ್ಣನೆಂದು ಖ್ಯಾತವಾಗಿರುವ ಅಮೇರಿಕಾದಲ್ಲಿ ಕೊಲಂಬಸನು ಅಮೇರಿಕಾ ಕಂಡುಹಿಡಿದು ನಾಲ್ಕು ಶತಮಾನಗಳಲ್ಲಿ ಕೈಗಾರಿಕಾ ಕ್ಷೇತ್ರದ ಪ್ರಗತಿಯನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನವಾಗಿ ಅಮೇರಿಕನ್ನರು ವಿಶ್ವಧರ್ಮ ಸಮ್ಮೇಳನವನ್ನು ಆಯೋಜನೆ ಮಾಡಿದ್ದರಂತೆ. ಅವರ ಉದ್ದೇಶ ಕ್ರಿಶ್ಚಿಯನ್ ಪಂಥವೇ ಎಲ್ಲರಿಗಿಂತ ಶ್ರೇಷ್ಠವೆಂದು ಸಾರುವುದಾಗಿತ್ತಂತೆ. ಇರಲಿ, ಒಟ್ಟಿನಲ್ಲಿ ನಮ್ಮ ದೇಶದಿಂದ ಒಲ್ಲದ ಮನಸ್ಸಿನಲ್ಲಿ ಸ್ವಾಮಿ ವಿವೇಕಾನಂದರು ಅಲ್ಲಿಗೆ ಹೋದರು. ಅಮೇರಿಕಾದ ಸಹೋದರಿಯರೇ ಮತ್ತು ಸಹೋದರರೇ,ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬೌದ್ದಧರ್ಮ, ಜೈನಧರ್ಮಗಳೆರಡೂ ಯಾವುದರ ಶಾಖೆಗಳ ಮಾತ್ರವೋ ಅಂತಹ ಸಕಲ ಧರ್ಮಗಳ ಮಾತೆಯಾದ ಹಿಂದೂ ಧರ್ಮದ ಪರವಾಗಿ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಮತ್ತು ವಿವಿಧ ಜಾತಿ ಮತಗಳಿಗೆ ಸೇರಿದ ಕೋಟ್ಯಂತರ ಹಿಂದೂಗಳ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅಲ್ಲದೆ ‘ಇಲ್ಲಿ ಕಂಡುಬರುತ್ತಿರುವ ಸಹಿಷ್ಣುತಾ ಭಾವವನ್ನು ದೂರದೂರದ ದೇಶಗಳಿಂದ ಬಂದಿರುವ ಈ ಪ್ರತಿನಿಧಿಗಳು ತಮ್ಮೊಂದಿಗೆ ಒಯ್ದು ಪ್ರಸಾರ ಮಾಡುತ್ತಾರೆ’ ಎಂದು ಸಾರಿದ ಈ ವೇದಿಕೆಯ ಮೇಲಿನ ಕೆಲವು ಭಾಷಣಕಾರರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’. ( ಸ್ವಾಮಿ ಪುರುಷೋತ್ತಮಾನಂದರ ವಿಶ್ವವಿಜೇತ ವಿವೇಕಾನಂದ ಪುಸ್ತಕದಿಂದಾಯ್ದ ತುಣುಕು). ಇಡೀ ಜನಸಮೂಹ ಸಭಿಕರೆಲ್ಲ ಸಭಾಸೀನರಾದಿಯಾಗಿ ಎಲ್ಲರೂ ಅವರಾಡಿದ ವಿಶ್ವ ಭ್ರಾತೃತ್ವದ ಮಾತುಗಳು ಹೃದಯ ತಟ್ಟಿ ಮಂತ್ರಮುಗ್ದರನ್ನಾಗಿಸಿತ್ತು. ಈ ಸಮ್ಮೇಳನ ನಡೆದ ಮರುದಿನ ಅಲ್ಲಿನ ಪತ್ರಿಕೆಯೊಂದು ‘ ಈ ಸಮ್ಮೇಳನದ ನಿಜವಾದ ಹೀರೋ ಸ್ವಾಮಿ ವಿವೇಕಾನಂದರು’ ಎಂದು ಬರೆದಿದ್ದರೆ ಮತ್ತೊಂದು ಪತ್ರಿಕೆ ತನ್ನ ಪ್ರಕಟಣೆಯಲ್ಲಿ ಭಾರತಕ್ಕೆ ಮಿಶನರಿಗಳನ್ನು ಕಳಿಸಿಕೊಡುವದಿರಲಿ, ನಾವೇ ಭಾರತದಿಂದ ಇಂತಹವರನ್ನು ಕರೆಸಿಕೊಂಡು ಪಾಠ ಕಲಿಯಬೇಕೆಂದು ಹೇಳಿತ್ತು.
ಹೀಗೆ ದಿಢೀರಾಗಿ ಪ್ರಸಿದ್ಧಿಯಾದರು. ಕ್ರಿಶ್ಚಿಯನ್ನರಿಗೆ ತುಂಬಲಾರದ ನಷ್ಟವಾಯಿತು. ಅಂತಹ ಧೀಮಂತ ಹಿಂದೂ ಕಣಜವಾದ ವಜ್ರ ಶರೀರವುಳ್ಳ, ಗಟ್ಟಿಮುಟ್ಟಾದ ತರುಣ ನಮ್ಮ ಜನತೆಗೆ ದೇಶಾಭಿಮಾನದ ವಿವೇಕವನ್ನು ಕಲ್ಪಿಸಿ, ವಿವೇಕಾನಂದರಾಗಿ ಮಲಗಿರುವ ಆತ್ಮಗಳಿಗೆ ಏಳಿ! ಎದ್ದೇಳಿ!! ಗುರಿ ಮುಟ್ಟುವವರೆಗೆ ನಿಲ್ಲಿದಿರಿ!!! ಎಂದು ಘೋಷಿಸಿದರು. ಭವ್ಯ ಭಾರತದ ಚೈತನ್ಯಮೂರ್ತಿಯಾಗಿ ಇಂದಿಗೂ ಆಲಸ್ಯದ ವಿರೋಧಿಯಾಗಿ, ಚೈತನ್ಯ ಚಿಲುಮೆಯಾಗಿ ಫೊಟೊದಲ್ಲಿ ರಾರಾಜಿಸುತ್ತಿದ್ದಾರೆ… ಇದು ನಿಮಗೆಲ್ಲ ಗೊತ್ತಿರುವ ವಿಷಯವೇ ಸರಿ. ಕೆಲವರಿಗೆ ಗೊತ್ತಿರಲಿಕ್ಕೂ ಇಲ್ಲ. ಇರಲಿ, ನಾನು ಸ್ವಾಮಿ ವಿವೇಕಾನಂದರನ್ನು ಯಾಕೆ ನೆನಪಿಸಿಕೊಂಡೆನೆಂದರೆ ಅವರ ರಾಷ್ಟ್ರೀಯ ಮನೋಧರ್ಮ, ದೇಶಭಕ್ತಿ, ಅಖಂಡ ಹಿಂದೂಸ್ತಾನದ ಪ್ರಾತಿನಿಧ್ಯ ತುಂಬಾ ಪ್ರಮುಖವಾಗಿದೆ.
ಎಲ್ಲ ದೇವರನ್ನೂ ತಾಯಿ ಭಾರತಿಯಲ್ಲಿ ಸಮೀಕರಿಸಿದ ಅವತಾರ ಪುರುಷ ಸ್ವಾಮಿ ವಿವೇಕಾನಂದರು. ಒಂದು ಕಾಲದಲ್ಲಿ ಹಿಂದೂ ಧರ್ಮದ ಓರೆ ಕೋರೆಗಳಿಂದ ಬೇಸತ್ತು ದಾರಿ ಬದಲಿಸುವದೇ ಸರಿಯೆಂದುಕೊಂಡಿದ್ದ ಭಾವನೆಗಳಿಗೆ ಪರಿವರ್ತನೆ ತಂದು, ಈ ಧರ್ಮದ ಶ್ರೇಷ್ಠತೆಗಳ ಅರಿವು ಮೂಡಿಸಿದ್ದು ಸ್ವಾಮಿ ವಿವೇಕಾನಂದರು. ಇಂತಹ ಆಧ್ಯಾತ್ಮ ದೇವ ಮಾನವನ ಕೃತಿ ಶ್ರೇಣಿಗೆ ಒಗ್ಗಿದ ನಮ್ಮ ರಾಷ್ಟ್ರಕವಿ ಕುವೆಂಪುರವರು ವಿಶ್ವ ಮಾನವ ಸಂದೇಶ ಸಾರಿದ್ದು ಸ್ವಾಮಿ ವಿವೇಕಾನಂದರ ಪ್ರಭಾವದಿಂದಲೇ ಅಲ್ವೇ. ವೇದಾಂತದ ಡಿಂಡಿಮವನ್ನು ಜಗತ್ತಿನೆದುರು ಬಾರಿಸಿ ಕ್ರೈಸ್ತ ಸಮುದಾಯ ಬೆಕ್ಕಸ ಬೆರಗಾಗುವಂತೆ ಮಾಡಿದವರು ಸ್ವಾಮಿ ವಿವೇಕಾನಂದರು. ವಿವೇಕಾನಂದರು ಕುವೆಂಪುರವರ ನರ ನಾಡಿಗಳಲ್ಲಿ ಪ್ರವಹಿಸುತ್ತಿದ್ದುದರಿಂದಲೆ ತಮ್ಮ ವ್ಯಕ್ತಿತ್ವಕ್ಕೆ ವಿಶೇಷ ಮೆರುಗು ಇತ್ತು.
ಹೀಗೆ ವಿಶ್ವ ಮಾನವತೆಯ ಸಾಕಾರ ಮೂರ್ತಿಯಾಗಿದ್ದರು ಸ್ವಾಮಿ ವಿವೇಕಾನಂದರು. ಇವರ ವಾಣಿ ಯುವಕರಲ್ಲಿ ಸಂಚಲನವನ್ನುಂಟುಮಾಡುತ್ತಿತ್ತು. ಜಡ್ಡು ಹಿಡಿದಿದ್ದ ಭಾರತೀಯರಲ್ಲಿ ಮಿಂಚು ಹರಿಸುವಂತಿತ್ತು. ಇಂತಹ ಅಪ್ರತಿಮ ಸಮಾಜವಾದದ ವಾಗ್ಮಿ, ಸಂತ, ವೀರ ಸನ್ಯಾಸಿಯಾದ ಇವರು ರಾಷ್ಟ್ರಪ್ರಜ್ಞೆಯನ್ನು ಆಧ್ಯಾತ್ಮದೊಂದಿಗೆ ಸೆಳೆದು, ಯುವಕರಿಗೆ ಕೆಚ್ಚೆದೆಯ ವೀರರೇ, ಕೆಚ್ಚೆದೆಯ ಸಿಂಹಗಳೇ ಎಂದು ಸಂಬೋಧಿಸಿ, ಬದಲಾವಣೆಯ ಹಿಂದೆ ‘ಯುವಶಕ್ತಿ’ ಅಡಗಿದೆ. ದೌರ್ಬಲ್ಯವಾಗಿರುವ ಭಾರತಕ್ಕೆ ಶಕ್ತಿ ಬೇಕಾಗಿದೆ. ಹಾಗಾಗಿ ಶಾಸ್ತ್ರ ಪುರಾಣಕ್ಕಿಂತ ‘ಕಾಯಕದ ಕರ್ಮಯೋಗಿ’ ಗಳಾಗಲು ಕರೆ ನೀಡಿದರು. ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಸಮಾಜೋದ್ಧಾರದ ಶಿಕ್ಷಣ ಇಂದು ಬೇಕಾಗಿದೆ ಎಂದು ಸಾರಿದರು.
ಹೀಗೆ ಹಿಂದೂಸ್ತಾನ ಸಂಪೂರ್ಣ ಒಡೆದು ಹೋಗುವ ಸ್ಥಿತಿಯಲ್ಲಿದ್ದಾಗ ಅದಕ್ಕೆ ಜೀವತುಂಬಿ ಪೋಷಿಸಿ, ಭದ್ರ ಬುನಾದಿ ಹಾಕಿ ಜಗತ್ತಿಗೆ ಮಾದರಿ ಮಾಡಿದ ಸ್ವಾಮಿ ವಿವೇಕಾನಂದರು “ಯುವ ಜನತೆ” ಮೇಲೆ ಅಪಾರ ವಿಶ್ವಾಸ ಇಟ್ಟಿದ್ದರು. ಹಾಗಾಗಿಯೇ ಅವರ ಜನ್ಮದಿನ ಜನವರಿ ೧೨ ನ್ನು ಇಂದು ನಾವು “ಯುವ ದಿನಾಚರಣೆ” ಯಾಗಿ ಆಚರಿಸುತ್ತಿದ್ದೇವೆ. ಸ್ವಾರ್ಥ, ವಂಚನೆ, ಆಲಸ್ಯ, ಅಸಡ್ಡೆಗಳೆಲ್ಲ ತೊಲಗಿ ವಿವೇಕದಿಂದ ರಾಷ್ಟ್ರಕಟ್ಟುವ ಕಾರ್ಯದಲ್ಲಿ ಭಾಗಿಯಾಗಿ, ರಾಷ್ಟ್ರ ಭಕ್ತಿಯ ವಿವೇಕ ಮತಿಗಳಾಗೋಣವೇ..
ಒಟ್ಟಿನಲ್ಲಿ ಏನೆಲ್ಲಾ ಎಡರು ತೊಡರುಗಳಿದ್ದಾಗಿಯೂ ದೇಶ ಕಟ್ಟುವಲ್ಲಿ ನಾವು ಎಡವಬಾರದು. ಅಪ್ಪಟ ದೇಶಭಕ್ತಿ, ಹಿಂದುತ್ವ, ಆಧ್ಯಾತ್ಮದೊಂದಿಗೆ ಸಮ್ಮಿಳಿತ ರಾಷ್ಟ್ರಪ್ರಜ್ಞೆ ಇವೆಲ್ಲ ನಮಗೆ ಸದಾ ಜಾಗೃತವಾಗಿರಬೇಕೆಂದು ವಿವೇಕಾನಂದರು ಸಾರಿ ಹೇಳಿದ್ದಾರೆ. ಅವರ ಕನಸಿನ ಭಾರತ ನಿರ್ಮಾಣ ಮಾಡುವಲ್ಲಿ ನಾವೆಲ್ಲರೂ ಸ್ವಾರ್ಥ ತ್ಯಜಿಸಿ, ಯುವಶಕ್ತಿ ಮಂತ್ರ ಪಠಿಸಿದಾಗ ಮಾತ್ರ ಭವ್ಯ ಭಾರತ ಕಟ್ಟಿ ಬೆಳೆಸಲು ಸಾಧ್ಯವೆಂದು ಹೇಳಬಹುದು. ಇಂತಹ ವಿವೇಕ ವೀರ ಭಾರತ ನಮ್ಮದಾಗಬೇಕಿದೆ ಏನಂತೀರಾ..
ಸ್ವಾಮಿ ವಿವೇಕಾನಂದರ ಪ್ರಕಾರ ಯುವಕರು ಎಂದರೆ ಹೀಗಿರಬೇಕು !
- ಮುಖದಲ್ಲಿ ತೇಜಸ್ಸು ಇರಬೇಕು
- ದೇಹದಲ್ಲಿ ಶಕ್ತಿ ಇರಬೇಕು
- ಮನಸ್ಸಿನಲ್ಲಿ ಉತ್ಸಾಹ ಇರಬೇಕು
- ಬುದ್ಧಿಯಲ್ಲಿ ವಿವೇಕ ಇರಬೇಕು
- ಹೃದಯದಲ್ಲಿ ಕರುಣೆ ಇರಬೇಕು
- ಮಾತೃಭೂಮಿಯ ಮೇಲೆ ಪ್ರೇಮ ಇರಬೇಕು
- ಇಂದ್ರಿಯಗಳ ಮೇಲೆ ಸಂಯಮ ಇರಬೇಕು
- ಮನಸ್ಸು ಸ್ಥಿರವಾಗಿರಬೇಕು
- ದೃಢವಾದ ಆತ್ಮವಿಶ್ವಾಸ ಇರಬೇಕು
- ಪ್ರಬಲವಾದ ಇಚ್ಛಾಶಕ್ತಿ ಇರಬೇಕು
- ಸಿಂಹದಂತೆ ನಿರ್ಭಯವಾಗಿರಬೇಕು
- ಅವನ ಧ್ಯೇಯ ಉಚ್ಚವಾಗಿರಬೇಕು
- ಈಶ್ವರನಂತೆ ಅನಂತವಾಗಿರಬೇಕು
- ವ್ಯಸನದಿಂದ ಮುಕ್ತನಾಗಿರಬೇಕ
- ಜೀವನದಲ್ಲಿ ಶಿಸ್ತು ಇರಬೇಕು
- ಗುರುಗಳಿಗೆ ಆದರವಾಗಿರಬೇಕು
- ದೀನ ದುರ್ಬಲರಿಗೆ ಮಿತ್ರನಾಗಿರಬೇಕು
- ಸೇವೆಯಲ್ಲಿ ತತ್ಪರರಾಗಿರಬೇಕು
- ದೇವರ ಮೇಲೆ ಭಕ್ತಿ ಇರಬೇಕು
- ಜೀವನದಲ್ಲಿ ನೀತಿ ಇರಬೇಕು
- ಚಾರಿತ್ರ ಶುದ್ಧವಾಗಿರಬೇಕು
- ಅವನೇ ಆದರ್ಶ ಯುವಕನಾಗಿರಬೇಕು.
ಸ್ವಾಮಿವಿವೇಕಾನಂದ ರ ಜಯಂತಿಯ ಶುಭಾಶಯಗಳು.
ಜೈ ಗುರುದೇವ
ಶ್ರೀ ಸಂತೋಷ್ ಬಿದರಗಡ್ಡೆ
ಶಿಕ್ಷಕ,ಸಾಹಿತಿ. ಹಾನಗಲ್ಲ.