ಸಿಂದಗಿ– ಸಿಂದಗಿ ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಒಳಗೊಂಡಿದೆ. ಒಂದು ವೇಳೆ ಜಿಲ್ಲೆ ವಿಭಜನೆಯಾದಲ್ಲಿ ಸಿಂದಗಿಯನ್ನೆ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಸಿಂದಗಿ ಪಟ್ಟಣ ಅರ್ಬನ್ ಬ್ಯಾಂಕ್ ನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ಒಕ್ಕೊರಲಿನಿಂದ ರಾಜ್ಯದ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ತಹಶೀಲ್ದಾರ ಅವರ ಮೂಲಕ ಶುಕ್ರವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕ ಶರಣಪ್ಪ ವಾರದ ಮಾತನಾಡಿ, ಸಿಂದಗಿ ತಾಲೂಕು 3 ತಾಲೂಕುಗಳಾಗಿ ವಿಭಜನೆಯಾಗಿದೆ. ಜಿಲ್ಲೆಯಲ್ಲಿಯೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಹಾಗೂ ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ಕೇಂದ್ರವಾಗಿದೆ. ಸುತ್ತಮುತ್ತಲಿನ ಕಲಬುರಗಿ, ರಾಯಚೂರ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗೆ ಹೆಚ್ಚಿನ ಸಂಪರ್ಕವಿದೆ. ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಆದಾಯವನ್ನು ಸಿಂದಗಿ ತಾಲೂಕಿನಿಂದ ಸಂಗ್ರಹವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ-50 ಸಿಂದಗಿ ನಗರದಿಂದೊಂದಿಗೆ ಸಂಪರ್ಕ ಬೆಸೆದಿದ್ದು, ಸಾರಿಗೆ ಸಂಪರ್ಕಕ್ಕೆ ಉತ್ತಮ ನಿರ್ದೇಶನವಾಗಿದೆ. ಬರುವ ದಿನಮಾನಗಳಲ್ಲಿ ರೇಲ್ವೇ ಮಾರ್ಗ ಸೃಷ್ಟಿಯಾಗುವ ಲಕ್ಷಣಗಳಿವೆ. ಪೂರ್ವ ದಿಕ್ಕಿನಲ್ಲಿ ಕಲಬುರಗಿ, ಪಶ್ಚಿಮದಲ್ಲಿ ವಿಜಯಪೂರ ಜಿಲ್ಲೆಯ ವಿಮಾನ ನಿಲ್ದಾಣಗಳಿದ್ದು ರಾಜ್ಯದ ರಾಜಧಾನಿ ಸಂಪರ್ಕಿಸಲು ಅತಿ ಹೆಚ್ಚು ಅನುಕೂಲವಾಗುತ್ತದೆ. ಈಗಾಗಲೇ ಸಿಂದಗಿಯಲ್ಲಿ 2 ಕ್ರಿಮಿನಲ್ ಮತ್ತು 4 ಸಿವಿಲ್ ಕೋರ್ಟಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ ಮಿನಿ ವಿಧಾನಸೌಧ ನಿರ್ಮಾಣದ ಹಂತದಲ್ಲಿದೆ. ಉತ್ತಮ ಕೈಗಾರೀಕರಣ ವಲಯವಾಗಿ ಪರಿವರ್ತಿಸಲು ಕೇಂದ್ರ ಸ್ಥಾನದಲ್ಲಿದೆ. ಭೌಗೋಳಿಕ ವಯಲದಲ್ಲಿ ವ್ಯಾಪಕವಾಗಿದ್ದು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಿಂದಗಿ ತಾಲೂಕು ಜಿಲ್ಲೆಯಲ್ಲಿಯೆ ಅಗ್ರವಾಗಿದೆ. ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳ ಮಕ್ಕಳು ಸಿಂದಗಿ ನಗರಕ್ಕೆ ವಿದ್ಯಾಭ್ಯಾಸ ಮಾಡಲು ಆಗಮಿಸುತ್ತಾರೆ. ಹೀಗೆ ಎಲ್ಲ ಅನುಕೂಲಗಳು ಇರುವ ಸಿಂದಗಿಯನ್ನು ಜಿಲ್ಲೆಮಾಡುವಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಷಣ್ಮುಖಪ್ಪ ಸಂಗಮ ಉಪಾಧ್ಯಕ್ಷ ಪ್ರಕಾಶ ಕೋರಿ, ನಿರ್ದೇಶಕರಾದ ಸುರೇಶಬಾಬು ಜೋಗೂರ, ಎಮ್.ಸಿ.ಪಟ್ಟಣಶೆಟ್ಟಿ, ರವಿ ನಾಗೂರ, ನೀಲಕಂಠ ಗುಣಾರಿ, ವ್ಯವಸ್ಥಾಪಕ ಮುರಗೇಶ ಬಮ್ಮಣ್ಣಿ, ಬಸವರಾಜ ದೇವೂರ, ಉಮೇಶ ಮರ್ತೂರ, ಶರಣಬಸಪ್ಪ ಅಡಗಲ್ಲ, ಸಲೀಂ ಬಳಗಾನೂರ, ಸುನೀಲ ಘಟೋಳೆ, ಶೈಲಾ ಪಟ್ಟಣಶೆಟ್ಟಿ, ವೀರೇಂದ್ರ ಕುಮಟಗಿ, ಅನುಪಮಾ ಕತ್ತಿ, ಅನಿಲ ನಾಕಮನ, ಶಾಂತೇಶ ಪೂಜಾರಿ, ಕಿರಣ ಮೇಲಿನಮನಿ, ದಾನಪ್ಪ ಬಂದೆ ಸೇರಿದಂತೆ ಬ್ಯಾಂಕಿನ ಸರ್ವ ಸಿಬ್ಬಂದಿಗಳು ಹಾಜರಿದ್ದರು.