Homeಸುದ್ದಿಗಳುಶರಣರ ವಚನ ಸಾರ ಮೈಗೂಡಿಸಿಕೊಂಡರೆ ಜೀವನ ಸಾರ್ಥಕ: ಹಂಗರಗಿ

ಶರಣರ ವಚನ ಸಾರ ಮೈಗೂಡಿಸಿಕೊಂಡರೆ ಜೀವನ ಸಾರ್ಥಕ: ಹಂಗರಗಿ

ಸಿಂದಗಿ: 12ನೇ ಶತಮಾನದಲ್ಲಿ ಮಹಾಶರಣ ಶರಣೆಯರು ಅನೇಕ ಸಂದೇಶಗಳನ್ನು ನೀಡಿ ಅಳಿದು ಹೋಗಿದ್ದಾರೆ ಆದರೆ ಅವರು ಬಿಟ್ಟು ಹೋದ ವಚನಗಳ ಸಾರವನ್ನು ನಾವೆಲ್ಲರೂ ಮೈಗೂಡಿಸಿಕೊಂಡಿದ್ದಾದರೆ ಜೀವನ ಸಾರ್ಥಕವಾಗುತ್ತದೆ ಎಂದು  ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ ಹೇಳಿದರು.

ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದ ಆವರಣದಲ್ಲಿ ಐಕ್ಯ ಮಂಟಪದ ಶಿಲಾನ್ಯಾಸವನ್ನು ನೆರವೇರಿಸಿ ಅವರು ಮಾತನಾಡಿ, ಹರ ಮುನಿದರೆ ಗುರು ಕಾಯುವನು ಎಂಬಂತೆ ನಾವೆಲ್ಲರು ಬಸವ ತತ್ವಗಳನ್ನು ಪ್ರತಿ ಮನೆ ಮನೆಗಳಿಗೆ ರವಾನಿಸುವದರಿಂದ ಜಗತ್ತಿನಲ್ಲಿ ನಡೆಯುತ್ತಿರುವ ಅಂಧಕಾರಗಳನ್ನು ದೂರ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಬಸವದಳದ ಮಾಜಿ ಅಧ್ಯಕ್ಷ ಗುರುಪಾದ ತಾರಾಪುರ ಮಾತನಾಡಿ, ಹಿಂದೂ ಎನ್ನುವುದು ಧರ್ಮವಲ್ಲ. ಲಿಂಗಾಯತ ಎನ್ನುವುದು ಧರ್ಮವಾಗಿದೆ. ಯಾರು ಲಿಂಗವನ್ನು ಧರಿಸುತ್ತಾರೆ ಅವರೇ ಲಿಂಗಾಯತರು ಈ ಪದಕ್ಕೆ ಯಾವುದೇ ಜಾತಿಯ ನಿರ್ಬಂಧವಿಲ್ಲ. ಅಂತೇಯೇ 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಮಹಾಮಂಟಪವನ್ನು ನಿರ್ಮಾಣ ಮಾಡಿ ಸಮಾನತೆಯ ಸಂದೇಶವನ್ನು ನೀಡಿದ್ದಾರೆ ಅದಕ್ಕೆ ಬಸವ ತತ್ವಗಳ ಪ್ರಚಾರದ ಕೊರತೆಯಿಂದ ಜಗತ್ತಿನಲ್ಲಿ ಮೌಢ್ಯತೆ ಹೆಚ್ಚಾಗುತ್ತಿದ್ದು ಅದನ್ನು ಅಳಿಸಬೇಕಾದರೆ ಬಸವಣ್ಣನವರ ಸಂದೇಶಗಳು ಪ್ರತಿ ಮನೆಗಳಿಗೆ ಮುಟ್ಟಬೇಕು ಅಂದಾಗ ಮಾತ್ರ ಜಗತ್ತಿನ ಅಂಧಕಾರ ಅಳಿಸಲು ಸಾಧ್ಯ ಎಂದರು.

ಕಾರ್ಯಕ್ರಮಕ್ಕೂ ಮುನ್ನ ತಡವಲಗಾ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಚಂದ್ರಶೇಖರ ರೂಗಿಯವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ತಡವಲಗಾ ಗ್ರಾಮದ ಮರುಳಸಿದ್ದ ಸಂಸ್ಥಾನದ ಚೇರಮನ್ ತಮ್ಮಣ್ಣ ಪೂಜಾರಿ  ಮಾತನಾಡಿ, ಮಠ-ಮಂದಿರಗಳಲ್ಲಿ ನಡೆಯುವ ತತ್ವ ಭೋಧನೆಯಿಂದ ಜನರಲ್ಲಿ ಸಂಸ್ಕಾರ ಬೆಳೆಯುತ್ತದೆ ಆ ಕಾರಣಕ್ಕೆ ಪ್ರತಿ ವರ್ಷದ ಸುಗ್ಗಿಕಾಲ ಮುಗಿದ ಬಳಿಗ ಶರಣರ ಮಹಾಂತರ ಪುರಾಣ-ಪ್ರವಚನಗಳು ನಡೆಯುತ್ತಿರುವುದು ಸರ್ವೇಸಾಮಾನ್ಯವಾಗಿದೆ ಅಲ್ಲದೆ ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮವಾಗಿದ್ದು ದುರ್ಬಲರಿಗೆ ಅಲ್ಲಿಗೆ ಹೋಗಿ ದರ್ಶನ ಪಡೆಯಲು ಸಾಧ್ಯವಿಲ್ಲ ಅದೇ ರೂಪದಲ್ಲಿ ಐಕ್ಯ ಮಂಟಪ ನಿರ್ಮಿಸುತ್ತಿರುವುದರಿಂದ ಈ ಭಾಗದಲ್ಲಿ ಕಲ್ಯಾಣದ ಅನುಭವ ಹಂಚಿದಂತಾಗಿದೆ ಕಾರಣ ಗುರುಗಳ ಸಂಕಲ್ಪದಂತೆ ಐಕ್ಯ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆದಿದ್ದು ಐಕ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಬಸವಣ್ಣನವರ ಮೂರ್ತಿಯ ವೆಚ್ಚವನ್ನು ಪ್ರಥಮ ದರ್ಜೆ ಗುತ್ತಿಗೆದಾರ ಚಂದ್ರಶೇಖರ ರೂಗಿಯವರು ಭರಿಸುವ ವಾಗ್ದಾನ ಮಾಡಿದ್ದು ಹರ್ಷ ತಂದಿದೆ ಎಂದು ಹೇಳಿದರು.

ಲಿಂಗಾಯತ ಮಹಾಮಠದ ಪೀಠಾಧಿಪತಿ ಪ್ರಭು ದೇವರು ಆಶಿರ್ವಚನ ನೀಡಿ, ದಾನ-ಜ್ಞಾನ ಒಬ್ಬರಲ್ಲಿ ಇರುವುದು ವಿರಳ ಇವೆರಡು ಸಮರ್ಥವಿದ್ದವರು ಮಹಾಶರಣ ತತ್ವ ಪ್ರಚಾರಕರಲ್ಲಿ ಮಾತ್ರ ಇರುತ್ತದೆ ಅಂತವರ ಸಾಲಲ್ಲಿ ತಡವಲಗಾದ ಗುತ್ತಿಗೆದಾರರಲ್ಲಿ ಇದೆ ಎಂದರು.

ಈ ಸಂದರ್ಭದಲ್ಲಿ ಅಶೋಕ ಮಿರ್ಜಿ, ಮಾಜಿ ಸೈನಿಕ ಚಂದ್ರಕಾಂತ ಸಣ್ಣಮನಿ, ಕಸಾಪ ಅಧ್ಯಕ್ಷ ಶಿವಾನಂದ ಬಡಾನೂರ, ನಿವೃತ್ತ ಶಿಕ್ಷಕ ಆರ್.ಕೆ.ಕುಲಕರ್ಣಿ, ಸಂಗಣ್ಣ ಬ್ಯಾಕೋಡ, ಸಿದ್ದು ಸುಂಠಿ ಕೊರಳ್ಳಿ, ನಾಗೂ ಬಿರಾದಾರ, ಶಿವಣ್ಣ ಖಜೂರ್ಗಿ, ಅಣ್ಣು ಮದರಿ, ಎಂ.ಎಸ್.ಬಿರಾದಾರ ನಾಗರಳ್ಳಿ, ಆನಂದ ಶಾಬಾದಿ, ಪಂಡಿತ ಯಂಪೂರೆ, ಶಾಂತೂ ರಾಣಾಗೋಳ ಸೇರಿದಂತೆ ಅನೇಕರಿದ್ದರು. 

ನಿವೃತ್ತ ಶಿಕ್ಷಕ ಎಂ.ಜಿ.ತಳವಾರ, ನಿರೂಪಿಸಿದರು. ಶಿವಕುಮಾರ ಶಿವಶಿಂಪಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group