ಮೂಡಲಗಿ: ‘ಸಂತ ಶಿವರಾಮದಾದಾ ಗೋಕಾಕ ಅವರ ಕುರಿತಾಗಿ ಕೃತಿ ರಚಿಸಿರುವ ಸಂತ ಮಾಯಪ್ಪ ರಾಜಾಪುರ ಅವರ ಕಾರ್ಯವು ಶ್ಲಾಘನೀಯವಾಗಿದೆ’ ಎಂದು ಪಂಢರಪುರದ ರಾಣು ದೇವವೃತ ವಾಸ್ಕರ್ ಮಾಹಾರಾಜರು ಹೇಳಿದರು.
ಮೂಡಲಗಿಯ ಸಂತ ಸಂಸ್ಕೃತಿ ಪ್ರಕಾಶನ ಹಾಗೂ ಸಪ್ತಸಾಗರ ಗಡ್ಡೆ (ಬನ) ಸಂಯುಕ್ತಾ ಆಶ್ರಯದಲ್ಲಿ ಸಂತ ಮಾಯಪ್ಪಾ ರಾಜಾಪುರ ಅವರು ರಚಿಸಿರುವ ಸಂತ ಶಿವರಾಮದಾದಾ ಗೋಕಾಕ ಅವರ ಸಂಪೂರ್ಣ ಚರಿತಾಮೃತ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಚರಿತಾಮೃತ ರಚನೆಯಲ್ಲಿ ಸಂತ ಮಾಯಪ್ಪಾ ಅವರ ಶ್ರದ್ಧೆ, ಭಕ್ತಿ, ತಪಸ್ಸಿನ ಕಾರ್ಯವು ಸ್ಮರಣೀಯವಾಗಿದೆ ಎಂದರು.
ಶಿವಾರಾಮದಾದಾ ಚರಿತಾಮೃತ ಕೃತಿ ಮೂಲಕ ಸಂತ ಸಮೂಹಕ್ಕೆ ದಾದಾ ಅವರನ್ನು ಭಕ್ತ ಸಮೂಹಕ್ಕೆ ದರ್ಶನ ಮಾಡಿರುವ ಕಾರ್ಯವನ್ನು ಮಾಯಪ್ಪ ಸಂತರು ಮಾಡಿದ್ದಾರೆ ಎಂದರು.
ಕೃತಿ ಪರಿಚಯಿಸಿದ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿ, ಶಿವಾರಾಮದಾದಾ ಚರಿತಾಮೃತ ಕೃತಿಯು ಸಂತ ಸಂಸ್ಕೃತಿಗೆ ಮೌಲ್ಯಯುಕ್ತವಾದ ಗ್ರಂಥವಾಗಿದೆ. ಸಂತ ಮಾಯಪ್ಪ ಅವರು ದಾದಾ ಅವರ ಪರಿಚಯ, ಅವರ ಅಭಂಗಗಳು ಹೀಗೆ ಅವರ ಕುರಿತು ಶ್ರಮವಹಿಸಿ ಮಾಡಿರುವ ಕ್ಷೇತ್ರ ಕಾರ್ಯವು ತಲಸ್ಪರ್ಶಿಯಾಗಿದೆ ಎಂದರು.
ವಿಶ್ವವಿದ್ಯಾಲಯದಲ್ಲಿ ಸಂಶೋಧಕರು ಮಾಡುವ ಕಾರ್ಯವನ್ನು ಸಂತ ಸರಳ ಜೀವಿ ಮಾಯಪ್ಪ ಅವರು ಮಾಡಿದ್ದಾರೆ. ಶಿವರಾಮದಾದಾ ಅವರ ಚರಿತಾಮೃತವು ಸಂತ ಪರಂಪರೆಗೆ ಆಕರ ಗ್ರಂಥವಾಗಿ ಶಾಶ್ವತವಾಗಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಡಾ. ಪದ್ಮಜೀತ ನಾಡಗೌಡ ಪಾಟೀಲ, ಬಾಲಶೇಖರ ಬಂದಿ, ಪಾರಿಜಾತ ಹಿರಿಯ ಕಲಾವಿದ ಸಪ್ತಸಾಗರದ ಬಾಬಾಲಾಲ ನದಾಫ, ರಾಮಚಂದ್ರ ಪಾಟೀಲ, ಬ್ರಹ್ಮಾನಂದ ತೇಲಿ, ಪರಶುರಾಮ ಕೆಲೆಕರ, ಎಸ್.ಎಂ. ಹವಾಲ್ದಾರ, ಶಿವಬಸು ಮಂಗಿ, ಭೀಮಶಿ ಹಂಜಿ ಭಾಗವಹಿಸಿದರು.
ಅಶೋಕ ಐಗಳಿ ನಿರೂಪಿಸಿ, ವಂದಿಸಿದರು.