ಬಸವನಲಿ ಬುದ್ಧನಲಿ ಕ್ರಿಸ್ತನಲಿ ಕೃಷ್ಣನಲಿ
ನಾನಕ ಮಹಾವೀರ ಮಹಮದರಲಿ
ಬೇಡಿದರೆ ನೀಡುವರು ಭಕ್ತಿಭಿಕ್ಷಾನ್ನವನು
ತಿರಿದುಂಡು ಸುಖಿಯಾಗು – ಎಮ್ಮೆತಮ್ಮ
ಶಬ್ಧಾರ್ಥ
ತಿರಿ = ಭಿಕ್ಷೆಬೇಡು
ತಾತ್ಪರ್ಯ
ಬಸವಣ್ಣನರ ವಚನಗಳನ್ನು, ಬುದ್ಧನ ತ್ರಿಪಿಟಿಕಗಳನ್ನು, ಕ್ರಿಸ್ತನ
ಬೈಬಲ್ಲನ್ನು, ಕೃಷ್ಣನ ಭಗವದ್ಗೀತೆಯನ್ನು, ನಾನಕರ ಗುರುಗ್ರಂಥ
ಸಾಹೇಬನ್ನು, ಮಹಾವೀರರ ತತ್ತ್ವಗ್ರಂಥವನ್ನು ಮತ್ತು
ಮಹಮ್ಮದ್ ಪೈಗಂಬರರ ಕುರಾನನ್ನು ಓದಬೇಕು. ಅದರಲ್ಲಿ
ಹೇಳಿರುವ ತತ್ತ್ವಗಳನ್ನು ಗ್ರಹಿಸಿ ಜೀವನದಲ್ಲಿ ಆಚರಣೆಗೆ
ತರಬೇಕು. ಒಬ್ಬೊಬ್ಬರಿಂದ ಒಂದೊಂದು ಉತ್ತಮ ಗುಣ
ವಿಚಾರಗಳನ್ನು ತಿಳಿದುಕೊಳ್ಳಬೇಕು. ಎಲ್ಲರಿಂದ ಭಕ್ತಿಯ
ಭಿಕ್ಷೆಯನ್ನು ಬೇಡಿ ರುಚಿಕರವಾದ ಅನುಭಾವದ ಅನ್ನವನ್ನು
ಸವಿದು ಸುಖಸಂತೋಷಪಡಬೇಕು. ಸರ್ವರೊಳಗೊಂದು
ನುಡಿಗಲಿತು ಜ್ಞಾನದ ಪರ್ವತವಾಗಬೇಕು. ಎಲ್ಲ ಧರ್ಮಗಳ
ಗ್ರಂಥಗಳನ್ನು ಓದುವುದರದ ಜ್ಞಾನ ವಿಸ್ತಾರವಾಗುತ್ತದೆ.
ಸಂಕುಚಿತ ಭಾವನೆ ಹೊರಟುಹೋಗಿ ವಿಶಾಲ ಮನೋಭಾವ
ಮೂಡುತ್ತದೆ. ಗ್ರಂಥಗಳ ಪಠಣದಿಂದ ಜ್ಞಾನ ಧ್ಯಾನ ಮೌನ
ಉಂಟಾಗಿ ತಾನಾರೆಂದು ಅರಿವು ಉಂಟಾಗುತ್ತದೆ. ಅರಿದು
ಶರಣನಾಗಬೇಕೆ ಹೊರತು ಮರೆತು ಮಾನವನಾಗಬಾರದು.
ಆ ಗ್ರಂಥಗಳು ಮಾನವನು ಮಹಾದೇವನಾಗುವ ದಾರಿಯನ್ನು ತೋರಿಸುತ್ತವೆ. ಮಹಾತ್ಮರ ನುಡಿಗಡಣಕಿಂತ ದೊಡ್ಡ ಸಂಪತ್ತು ಯಾವುದಿಲ್ಲ. ಅದನ್ನು ಅವರಿಂದ ಪಡೆದು ಸುಖಿಗಳಾಗಬೇಕು ಮತ್ತು ಸದ್ಗತಿಯ ಪಡೆಯಬೇಕು.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ