ಚಂದ್ರಹಾಸನಿಗೆಷ್ಟು ಕೇಡುಗಳ ಬಗೆದನೋ
ದುರ್ಮಂತ್ರಿಗಷ್ಟಷ್ಟು ಕೇಡಾಯಿತು
ತಿಮ್ಮ ಸಾಯೆಂದವನ ತಮ್ಮನೇ ಸಾಯುವನು
ಕೇಡಾರ್ಗೆ ಬಗೆಯದಿರು – ಎಮ್ಮೆತಮ್ಮ
ತಾತ್ಪರ್ಯ
ಕೇರಳದ ರಾಜನಿಗೆ ಮೂಲನಕ್ಷತ್ರದಲ್ಲಿ ಚಂದ್ರಹಾಸ ಜನಿಸಿದಕ್ಕೆ ಶತ್ರುರಾಜರ ಆಕ್ರಮಣದಿಂದ ರಾಜರಾಣಿಯರು ಸಾಯುತ್ತಾರೆ. ಅವನನ್ನು ದಾದಿ ಕುಂತಳನಗರಕ್ಕೆ ಕರೆದೊಯ್ದು ಸಾಕಿ ಸಲುಹುತ್ತ ರೋಗ ಬಂದು ಸಾಯುತ್ತಾಳೆ.ಅನಾಥನಾಗಿ ಸಿಕ್ಕ ಸಾಲಿಗ್ರಾಮವನ್ಮು ಸದಾ ಬಾಯಲ್ಲಿಟ್ಟುಕೊಂಡು ಅವನು ಹುಡುಗರೊಡನೆ ಆಡುತ್ತಿರುತ್ತಾನೆ. ದುಷ್ಟಬುದ್ಧಿ ಮಂತ್ರಿಯ ಮನೆಗೆ ಬಂದಿದ್ದ ಬ್ರಾಹ್ಮಣರು ಈ ಹುಡುಗನು ಈ ನಗರದ ರಾಜನಾಗುತ್ತಾನೆ ಎಂದು ಭವಿಷ್ಯ ನುಡಿಯುತ್ತಾರೆ. ಮಂತ್ರಿ ಅವನನ್ನು ಚಂಡಾಲರಿಗೊಪ್ಪಿಸಿ ಕೊಲ್ಲಲು ಕಳಿಸುತ್ತಾನೆ. ಕೊಲ್ಲದೆ ಎಡ ಕಾಲಿನಲ್ಲಿಯ ಹೆಚ್ಚಿನ ಬೆರಳುಕೊಯ್ದು ತಂದು ತೋರಿಸುತ್ತಾರೆ.
ಕಾಡಿಗೆ ಬೇಟೆಗೆ ಬಂದಿದ್ದ ಕುಳಿಂದ ರಾಜ ಅವನನ್ನು ಕರೆದೊಯ್ದು ಸಾಕುತ್ತಾನೆ. ಇದನ್ನರಿತ ಮಂತ್ರಿ ಅಲ್ಲಿಗೆ ಹೋಗಿ ಒಂದುಪತ್ರ ಬರೆದು ಮಗ ಮದನನಿಗೆ ಕೊಡಲು ಕಳಿಸುತ್ತಾನೆ. ಬಂದು ಉದ್ಯಾನದಲ್ಲಿ ಮಲಗಿರಲು ಪತ್ರ ಓದಿ ವಿಷವ ಕೊಡು ಬದಲಿಗೆ ವಿಷಯೆ ಕೊಡು ಎಂದು ಮಂತ್ರಿ ಮಗಳು ತಿದ್ದಿಬಿಡುತ್ತಾಳೆ.ಅವನು ವಿಷಯೆ ಕೊಟ್ಟು ಮದುವೆಮಾಡುತ್ತಾನೆ. ಮಂತ್ರಿ ಮತ್ತೆ ದೇವಿಗುಡಿಗೆ ಕಳಿಸಿ ಕೊಲ್ಲಲು ಚಾಂಡಾಲರನ್ನು ಕಳಿಸುತ್ತಾನೆ. ರಾಜ ಕರೆದಿದ್ದಾನೆ ಹೋಗು ಎಂದು ಚಂದ್ರಹಾಸನನ್ನು ಮದನನು ಕಳಿಸಿ ತಾನು ಗುಡಿಗೆ ಹೋಗುತ್ತಾನೆ. ಮಂತ್ರಿಯ ಮಗ ಮದನನ ರುಂಡ ರುಂಡ ಕತ್ತರಿಸಿ ಹಾಕುತ್ತಾರೆ ಅದನ್ನು ಕಂಡ ದುಷ್ಟಬುದ್ಧಿ ಸಾವನ್ನಪ್ಪುತ್ತಾನೆ.
ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬುದು ಈ ಕಥೆಯಿಂದ ಗೊತ್ತಾಗುತ್ತದೆ. ಆದಕಾರಣ ಪಕ್ಕದ ಮನೆಯ ತಿಮ್ಮ ಸಾಯಲಿ ಎಂದರೆ ತನ್ನ ತಮ್ಮನೆ ಸಾಯುತ್ತಾನೆ. ನಾವು ಬೇರೆಯವರಿಗೆ ಕೇಡು ಬಗೆದರೆ ಅದು ಹಿಂತಿರುಗಿ ನಮಗೆ ಕೇಡಾಗುತ್ತದೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ ಮೊ. 9449030990