ಮೂಡಲಗಿ: ಇಂದಿನ ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಪಠ್ಯ ವಿಷಯದ ಜೊತೆಗೆ ನೈತಿಕ ಶಿಕ್ಷಣ ಕೊಡುವದು ಕೂಡ ತುಂಬಾ ಮುಖ್ಯವಾಗಿದೆ ಎಂದು ಮೂಡಲಗಿ ದಿವಾಣಿ ಹಾಗೂ ಜೆ.ಎಮ್.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಜ್ಯೋತಿ ಪಾಟೀಲ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಕ್ಕಾನಟ್ಟಿ ಹಾಗೂ ಸುತ್ತಮುತ್ತಲಿನ ಮತ್ತು ಮೂಡಲಗಿ, ಬೆಳಗಾವಿ ಜಿಲ್ಲೆಗಳ ಗಡಿ ಭಾಗದಲ್ಲಿ ಬಾಲ್ಯ ವಿವಾಹಗಳು ಬಹಳ ನಡೆಯುತ್ತಿರುವದು ನಮ್ಮ ಗಮನಕ್ಕೆ ಬಂದಿದೆ ಇದರಿಂದ ಎಷ್ಟೋ ಬಾಲಕಿಯರ ಜೀವನ ಹಾಗೂ ಪ್ರತಿಭೆ ಕಮರಿ ಹೋಗುತ್ತಿದೆ. ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಜೊತೆಗೆ ನೈತಿಕ ಹಾಗೂ ವ್ಯವಹಾರಿಕ ಜ್ಞಾನವನ್ನು ಕಲಿಸಿಕೊಡಬೇಕಾಗುತ್ತದೆ, ತುಕ್ಕಾನಟ್ಟಿ ಸರಕಾರಿ ಶಾಲೆಯಲ್ಲಿ ೧ ರಿಂದ ೮ ನೇ ತರಗತಿಗಳು ನಡೆಯುತ್ತಿರುವುದರಿಂದ ಹಾಗೂ ಮಕ್ಕಳ ಸಂಖ್ಯೆ ಅಧಿಕ ಇರುವದರಿಂದ ಮುಂದಿನ ಶಿಕ್ಷಣಕ್ಕೆ ಇವರಿಗೆ ಪ್ರೌಢ ಶಾಲೆಯ ಅವಶ್ಯಕತೆಯಿದೆ ಎಂದರು.
ಪಾಲಕರ ಅಲಕ್ಷ್ಯತನದಿಂದ ಇಲ್ಲವೇ ಮಕ್ಕಳು ದೂರದ ಊರಿಗೆ ಹೋಗ ಬೇಕಾಗಿರುವದರಿಂದ ಮಧ್ಯದಲ್ಲಿಯೇ ಶಾಲೆಯನ್ನು ಬಿಟ್ಟು ಬಾಲ್ಯ ವಿವಾಹಕ್ಕೆ ಒಳಗಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ತುಕ್ಕಾನಟ್ಟಿಯಲ್ಲಿ ಸರಕಾರಿ ಪ್ರೌಢಶಾಲೆಯ ಅವಶ್ಯಕತೆಯಿದೆ ಇದರಿಂದ ಬಾಲ್ಯ ವಿವಾಹ ಸ್ವಲ್ಪವಾದರೂ ತಡೆಗಟ್ಟುವುದರ ಜೊತೆಗೆ ಆ ಹೆಣ್ಣು ಮಗುವಿಗೆ ಒಳ್ಳೆಯ ಭವಿಷ್ಯವನ್ನು ಕಲ್ಪಿಸಿ ಕೊಟ್ಟಂತಾಗುತ್ತದೆ. ಈ ಮಹಿಳಾ ದಿನಾಚರಣೆಗೆ ನಾವು ಹೆಣ್ಣು ಮಕ್ಕಳಿಗೆ ಪ್ರೌಢ ಶಾಲೆ ಒದಗಿಸಿಕೊಡುವದೇ ನಿಜವಾದ ಕಾಣಿಕೆ ಎಂದ ಅವರು, ಸಮಾಜದಲ್ಲಿ ಆಗುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಹೆಣ್ಣು ಮಕ್ಕಳಿಗೆ ಶಿಕ್ಷಕರು ತಿಳಿವಳಿಕೆ ನೀಡಬೇಕಲ್ಲದೇ ಪ್ರತಿಭಟಿಸುವುದನ್ನು ಕಲಿಸಿಕೊಡಬೇಕು ಇದರಲ್ಲಿ ಶಿಕ್ಷಕರ ಪ್ರಜ್ಞಾವಂತ ನಾಗರಿಕರ ಪಾತ್ರ ತುಂಬಾ ಮಹತ್ವದ್ದಾಗಿದೆ ಎಂದರು.
ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಭಾಗವಹಿಸುವುದರ ಜೊತೆಗೆ ತಾನು ಸಬಲೆ ಎಂಬುದನ್ನು ಸಾಬೀತುಪಡಿಸಿದ್ದಾಳೆ. ಎಲ್ಲ ಗ್ರಾಮೀಣ ಪ್ರದೇಶದ ಪಾಲಕರು ಕೂಡ ತಮ್ಮ ಹೆಣ್ಣು ಮಗುವಿಗೆ ಉತ್ತಮ ಶಿಕ್ಷಣ ಕೊಡಿಸಿ ಒಳ್ಳೆಯ ಭವಿಷ್ಯ ಕಲ್ಪಿಸಿಕೊಡಬೇಕೆಂದರಲ್ಲದೇ ನಮ್ಮ ಅರಭಾಂವಿ ಕ್ಷೇತ್ರದ ಶಾಸಕರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ಕೊಡುವದರ ಜೊತೆಗೆ ಇತ್ತೀಚೆಗೆ ಮೂಡಲಗಿ ವಲಯದ ಎಲ್ಲ ಸರಕಾರಿ ಶಾಲೆಯ ಸುಮಾರು ೩೨೦೦೦ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸಾಕ್ಷರತಾ ಮಿಷನ್ವತಿಯಿಂದ ಸಮವಸ್ತ್ರ, ಶಾಲಾ ಬ್ಯಾಗ್ ಸ್ವೆಟರಗಳನ್ನು ನೀಡುವುದರ ಜೊತೆಗೆ ತಮ್ಮ ಶೈಕ್ಷಣಿಕ ಕಾಳಜಿಯನ್ನು ತೋರಿಸಿರುವದನ್ನು ಪಾಲಕರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಗ್ರಾಮ ಪಂಚಾಯತ ಅಧ್ಯಕ್ಷೆ ಗಾಯತ್ರಿ ಬಾಗೇವಾಡಿ, ಉಪಾದ್ಯಕ್ಷೆ ಸುನಂದಾ ಭಜಂತ್ರಿ ಮಾತನಾಡಿ, ತುಕ್ಕಾನಟ್ಟಿಯಲ್ಲಿ ಸರಕಾರಿ ಪ್ರೌಢಶಾಲೆಯ ಮಹತ್ವವನ್ನು ಒತ್ತಿ ಹೇಳಿದರು.
ಈ ಶೈಕ್ಷಣಿಕ ವರ್ಷ ಸರಕಾರಿ ಪ್ರೌಢಶಾಲೆ ಆಗಲೇಬೇಕೆಂದು ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಶುಕ್ರವಾರ ಸಂಜೆ ಎಂಬ ಶಾಲಾ ಕಾರ್ಯಕ್ರಮದಲ್ಲಿ ರಸಪ್ರಶ್ನೆ ವಿಭಾಗದಲ್ಲಿ ೧ ರಿಂದ ೮ ನೇ ತರಗತಿಯ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನಗುರು ಎ.ವ್ಹಿ ಗಿರೆಣ್ಣವರ, ಎಮ್.ಡಿ. ಗೋಮಾಡಿ, ವಿಮಲಾಕ್ಷಿ ತೋರಗಲ್, ಲಕ್ಷ್ಮಿ ಹೆಬ್ಬಾಳ, ಪುಷ್ಪಾ ಭರಮದೆ, ರೂಪಾ ಹೂಲಿಕಟ್ಟಿ, ಪ್ರಿಯಾಂಕಾ ಡಿ.ಕೆ. ಸುಜಾತಾ ಕೋಳಿ, ವಾಸಂತಿ ಬೋರಗುಂಡಿ, ಮಹಾದೇವ ಗೋಮಾಡಿ, ಬಸವರಾಜ ನಾಯಿಕ, ಸೋಮಶೇಖರ ವಾಯ್.ಆರ್. ಚನ್ನಬಸಪ್ಪ ಸೀರಿ, ಹೊಳೆಪ್ಪಾ ಗದಾಡಿ, ಶಿವಲೀಲಾ ಹಣಮಣ್ಣವರ, ಖಾತೂನ್ ನದಾಫ, ಅಣ್ಣಪೂರ್ಣಾ ಹುಲಕುಂದ, ಯಮುನಾ ಹಮ್ಮನವರ, ಪವಿತ್ರಾ ಬಡಿಗೇರ ಮತ್ತಿತರರು ಉಪಸ್ಥಿತರಿದ್ದರು.