ಮೂಡಲಗಿ – ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಜನರು ಸಾಹಿತ್ಯಿಕ ಹಾಗೂ ಸಂಗೀತ ಪ್ರಪಂಚದಿಂದ ವಿಮುಖರಾದಂತೆ ಆಗಿತ್ತು ಆ ವಾತಾವರಣ ಮತ್ತೆ ಮರುಕಳಿಸುವಂತೆ ಮಾಡಲು ‘ ಭಾವದೀವಿಗೆ ‘ ಎಂಬ ಸುಗಮ ಸಂಗೀತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. ೨೩ ರಂದು ಇಂಡಿಯನ್ ಮ್ಯೂಜಿಕ್ ಅಸೋಸಿಯೇಶನ್, ಬೆಂಗಳೂರು ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ “ಭಾವದೀವಿಗೆ” ಸುಗಮ ಸಂಗೀತೋತ್ಸವ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇವಲ ಲಯನ್ಸ್ ಕ್ಲಬ್ ಮಾತ್ರ ಇಲ್ಲ ನಮ್ಮ ಜೊತೆ ಕಸಾಪ ತಾಲೂಕಾ ಘಟಕದವರು, ಮೂಡಲಗಿ ತಾಲೂಕಾ ಪತ್ರಕರ್ತರ ಬಳಗದವರು, ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರ ಹಾಗೂ ಕರುನಾಡು ಸೈನಿಕ ತರಬೇತಿ ಕೇಂದ್ರದವರು ಇದ್ದಾರೆ. ಇದರ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಬಂದಿ ಹೇಳಿದರು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಮೃತ್ಯುಂಜಯ ದೊಡ್ಡವಾಡ ಮಾಡುವರು. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಮೂಡಲಗಿ ಅಧ್ಯಕ್ಷ ಬಾಲಶೇಖರ ಬಂದಿ ವಹಿಸುವರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಡಿಜಿ ಮಹಾತ್,ಪುರಸಭಾ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ಶ್ರೀಮತಿ ರೇಣುಕಾ ಹಾದಿಮನಿ, ಬಿಇಓ ಅಜಿತ್ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ, ಮುಖ್ಯಾಧಿಕಾರಿ ದೀಪಕ ಹರ್ದಿ, ಪಿಎಸ್ಐ ಹಾಲಪ್ಪ ಬಾಲದಂಡಿ, ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಕಸಾಪ ತಾಲೂಕಾ ಅಧ್ಯಕ್ಷ ಡಾ.ಸಂಜಯ ಸಿಂಧಿಹಟ್ಟಿ ಹಾಗೂ ಹಿರಿಯ ಕಲಾವಿದ ಮಹಾದೇವ ಬಂಗಿ ಆಗಮಿಸುವರು.
ನಂತರ ನಡೆಯವ ಭಾವದೀವಿಗೆ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಮೃತ್ಯುಂಜಯ ದೊಡ್ಡವಾಡ ಅಲ್ಲದೆ ಹಿನ್ನೆಲೆ ಗಾಯಕಿ ಶ್ವೇತಾ ಪ್ರಭು, ಗಾಯಕ ಬಸವರಾಜ ಮುಗಳಖೋಡ, ಜಾನಪದ ಗಾಯಕ ಶಬ್ಬೀರ ಡಾಂಗೆ, ಹಿಂದೂಸ್ಥಾನಿ ಶಾಸ್ತ್ರೀಯ ಗಾಯಕ ರವೀಂದ್ರ ಸೋರಗಾಂವಿ, ಓಂಕಾರ ಪತ್ತಾರ, ಹೊಂಬೇಗೌಡ ಎಚ್, ಬಸವಲಿಂಗಯ್ಯ ಹಿಡಕಲ್, ಶ್ರೀಕಾಂತ ನಾಯಕ, ಐಶ್ವರ್ಯ ತಳವಾರ, ಶಿವಾನಂದ ಬಿದರಿ ಹಾಗೂ ಮೇಘಾ ಸೋರಗಾಂವಿ ಇವರೆಲ್ಲರ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಡಾ. ಸಂಜಯ ಶಿಂಧಿಹಟ್ಟಿ, ವೆಂಕಟೇಶ ಸೋನವಾಲಕರ, ಸುಪ್ರೀತ್ ಸೋನವಾಲಕರ, ನಿಂಗಪ್ಪ ಫಿರೋಜಿ, ಸಂಜಯ ಮೊಖಾಶಿ ಇದ್ದರು.