ದೇಶದ ಗಡಿ ಕಾಯುವ ಸೈನಿಕರ ಕೊಡುಗೆ ಎಂದಿಗೂ ಅಪಾರ. ನಾವು ಇಂದು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದೇವೆ ಎಂಬುದಕ್ಕೆ ಕಾರಣವೇ ಈ ಸೈನಿಕರು. ಇವರು ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಕಾರಣವೇ ನಾವು ಇಂದು ಸುಖವಾಗಿ ನಿದ್ರೆ ಮಾಡುವಂತಾಗಿದೆ. ನಮ್ಮ ದೇಶ ಮಾತ್ರವಲ್ಲ, ಇತರ ಎಲ್ಲಾ ದೇಶಗಳಲ್ಲೂ ಸೇನೆ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ.
ನಮ್ಮ ದೇಶದಲ್ಲಿ ಈ ಸೇನಾಪಡೆ ಹಲವಾರು ಯುದ್ಧಗಳಲ್ಲಿ ಭಾಗವಹಿಸಿ ನಮ್ಮ ದೇಶವನ್ನು ರಕ್ಷಿಸಿದೆ. ಹಲವಾರು ಪ್ರಕೃತಿ ವಿಕೋಪಗಳಲ್ಲಿ ಜನರನ್ನು ಕಾಪಾಡಿದೆ. ಇಂಥ ಸೇನೆಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಭಾರತದಲ್ಲಿ ಈ ಸೈನಿಕರಿಗಾಗಿಯೇ ಒಂದು ದಿನವನ್ನು ಮೀಸಲಾಗಿರಿಸಲಾಗಿದೆ. ಅದುವೇ ಜನವರಿ 15. ಈ ದಿನವನ್ನು ಪ್ರತಿವರ್ಷ ಆರ್ಮಿ ಡೇ ಅಥವಾ ಸೇನಾ ದಿನ ವನ್ನಾಗಿ ಆಚರಿಸಲಾಗುತ್ತದೆ.
ಮೂಲತಃ ಈ ದಿನವನ್ನು ಇದೇ ದಿನಾಂಕದಂದು ಆಚರಿಸಲು ಕೂಡಾ ಒಂದು ಕಾರಣವಿದೆ. ಅದುವೇ ಜನರಲ್ ಕೆ.ಎಂ ಕಾರಿಯಪ್ಪ ಅವರು. ಅವರು ಇದೇ ದಿನದಂದು ಭಾರತೀಯ ಸೇನೆಯಲ್ಲಿ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಮತ್ತು ಈ ಪದವಿಯನ್ನು ಬ್ರಿಟಿಷರಿಂದ ಸ್ವೀಕರಿಸಿದ ಪ್ರಥಮ ಭಾರತೀಯರೂ ಇವರಾಗಿದ್ದಾರೆ.
1949 ಜನವರಿ 15 ರಂದು ಕಾರಿಯಪ್ಪ ಅವರು ಕಮಾಂಡರ್ ಇನ್ ಚೀಫ್ ಆಗಿ ಆಯ್ಕೆಯಾದರು. ಇದರ ನೆನಪಿಗಾಗಿ ಜನವರಿ 15 ಅನ್ನು ಸೇನಾ ದಿನವನ್ನಾಗಿ ಆಚರಿಸುವ ಪರಿಪಾಠ ಬೆಳೆದು ಬಂದಿದೆ. ಈ ದಿನದಂದು ರಾಜಧಾನಿ ದೆಹಲಿ ಮತ್ತು ಎಲ್ಲಾ ರಾಜಧಾನಿಗಳಲ್ಲಿ ಮಿಲಿಟರಿ ಪ್ರದರ್ಶನಗಳು ನಡೆಯುತ್ತವೆ. ಅಂದು ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸಲಾಗುತ್ತದೆ.
ಇಂತಹ ಸೈನಿಕರಿಗೆ ಈ ಸಂಕ್ರಾಂತಿಯ ಶುಭ ದಿನದಂದು ಸಮಸ್ತ
ಕರ್ನಾಟಕ ಶಿಕ್ಷಕರ ಬಳಗ ಹಾಗೂ ಟೈಮ್ಸ್ ಆಫ್ ಕರ್ನಾಟಕ ಬಳಗದ ಪರವಾಗಿ ನಮ್ಮದೊಂದು ಸೆಲ್ಯೂಟ್
ಹೇಮಂತ ಚಿನ್ನು