- Advertisement -
ಸುಗ್ಗಿ ಸಂಕ್ರಾಂತಿ
ವರುಷದ ದುಡಿಮೆಯ ಫಲವಾಗಿ
ಬಂದೈತೆ ಸುಗ್ಗಿಯ ಸಂಕ್ರಾಂತಿ
ಬೆರೆಸುತ ಎಳ್ಳಿಗೆ ಬೆಲ್ಲವನು
- Advertisement -
ತಂದೈತೆ ನಾಡಿಗೆ ಸುಖಶಾಂತಿ//ಪ
ಬೆಳ್ಳಿಯ ರಥವೇರಿ ರವಿಬಂದು
ಮಿಂಚೈತೆ ನಾಡೆಲ್ಲ ಬೆಳಕಲ್ಲಿ
- Advertisement -
ಹಳ್ಳಿಯ ನೆಲದಿಂದ ದಿಲ್ಲಿಗೂ
ಹಂಚೈತೆ ರಟ್ಟೆಯ ಬಲವಿಲ್ಲಿ//೧
ಗಿಲಿಗಿಲಿ ಗೆಜ್ಜೆಯ ನಾದದಲಿ
ಬದುಕಿನ ಬಂಡಿಯು ಹೊರಟಾವ
ಕುಲುಕುಲು ನಗುವಿನ ಮೊಗದಲ್ಲಿ
ಹಂತಿಯ ಪದವನು ಹಾಡ್ಯಾವ//೨
ಕಬ್ಬನು ಸವಿಯುತ ಕೃಷಿಕಾರ
ಬೆಲ್ಲದ ರುಚಿಯನು ನೀಡ್ಯಾನ
ಹಬ್ಬವ ಮಾಡಿದ ಸರದಾರ
ವಲ್ಲಿಯ ನೆರಿಗೆಯ ತೀಡ್ಯಾನ/೩
ಪರಿಪರಿ ಕಾಳಿನ ರಾಶಿಯನು
ಮುದದಲಿ ಮಡದಿಯು ಪೂಜಿಸಲು
ಹರಿಹರ ನಾಮವ ಜಪಿಸುತ
ಬದುಕಿನ ಬಂಡಿಯು ತುಂಬಿರಲು//೪
ಹಳ್ಳಿಯ ಸಂಕ್ರಾಂತಿ ಹೊಲದಲ್ಲಿ
ಒಳ್ಳೆಯ ಕಾಯಕ ನಿಷ್ಠೆಯಲಿ
ಬೆಳ್ಳಿಯ ರಥವದು ಪಯಣದಲಿ
ಹಳ್ಳದ ದಂಡಿಯ ತಿರುವಿನಲಿ/೫
ಶ್ರೀಮತಿ ಬಸಮ್ಮ ಏಗನಗೌಡ್ರ