Homeಸುದ್ದಿಗಳುರಾಷ್ಟ್ರೀಯ ಯುವ ಸಪ್ತಾಹ ಸಾಧಕರಿಗೆ ಸನ್ಮಾನ

ರಾಷ್ಟ್ರೀಯ ಯುವ ಸಪ್ತಾಹ ಸಾಧಕರಿಗೆ ಸನ್ಮಾನ

ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಮಾದರಿ : ಜೋಸೆಫ್ ಅಭಿಮತ

ಸನ್ಯಾಸಿಯೊಬ್ಬರ ಜನ್ಮದಿನ ಯುವದಿನವನ್ನಾಗಿ ಆಚರಿಸುವುದೇ ಸ್ವಾರಸ್ಯಕರ !

ಮೂಡಲಗಿ : ಆಧುನಿಕ ಕಾಲದಲ್ಲಿ ಭಾರತೀಯತೆಯ ಅಸ್ಮಿತೆಯನ್ನು ಒದಗಿಸಿದ ಪ್ರಮುಖರಲ್ಲಿ ಒಬ್ಬರು ಸನ್ಯಾಸಿಯಾದ ಸ್ವಾಮಿ ವಿವೇಕಾನಂದರ ಅವರ ಜನ್ಮದಿನವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸುತ್ತಿದ್ದೇವೆ. ಅವರು ಒದಗಿಸಿದ ಭಾರತೀಯತೆಯ ಸತ್ವ ಎಂಥದ್ದು ಎಂಬುದನ್ನು ಅವರ ಜನ್ಮದಿನದ ಆಚರಣೆಯೂ ಧ್ವನಿಸುವಂತಿದೆ ಎಂದು ಮೂಡಲಗಿ ಆರ್ ಡಿ ಎಸ್ ಸಿ ಬಿ ಎಸ್ ಈ ಶಾಲಾ ಪ್ರಾಚಾರ್ಯ ಜೋಸೆಫ್ ಎಸ್ ಬಿ ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ , ಮಂಜುನಾಥ ಸೈನಿಕ ತರಬೇತಿ ಕೇಂದ್ರ, ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ ಮೂಡಲಗಿ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೊದಲ ಬಾರಿಗೆ ಜಗತ್ತಿನ ಎದುರಿನಲ್ಲಿ ಸ್ವಾಮಿ ವಿವೇಕಾನಂದರು ಭಾರತೀಯತೆಯನ್ನು ವ್ಯಾಖ್ಯಾನಿಸಿದ ಪರಿಯೇ ಅಪೂರ್ವವಾದುದು ಎಂದರು.

ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಮಾತನಾಡಿ, ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತ. ಸ್ವಾ,ಮಿ ವಿವೇಕಾನಂದರ ಜೀವನ, ಸಂದೇಶಗಳಲ್ಲಿ ವಿಶೇಷವಾಗಿ ಯುವಜನರ ಮೇಲೆ ಪ್ರಭಾವ ಬೀರುವ, ಬಾಳು ಬೆಳಗುವ ಅಂಶಗಳಿವೆ. ರಾಷ್ಟಪ್ರೇಮ, ಭಾರತೀಯ ಸಂಸ್ಕೃತಿಯ ಅಪಾರ ಜ್ಞಾನ ಸಂಪತ್ತನ್ನು ದೇಶದ ಮೂಲೆ ಮೂಲೆಗೆ ಸಂಚರಿಸಿ ಎಲ್ಲರಿಗೂ ಸ್ಫೂರ್ತಿ ತುಂಬಿದ್ದರು ಎಂದು ಹೇಳಿದರು.

ಕಾರ್ಯಕ್ರಮ ಸಾನ್ನಿಧ್ಯ ವಹಿಸಿದ್ದ ನಾಗನೂರಿನ ಕಾವ್ಯಶ್ರೀ ಅಮ್ಮನವರು ಮಾತನಾಡಿ, ಅಲ್ಪಾವಧಿಯ ಭಾಷಣದಲ್ಲಿ ವಿವೇಕಾನಂದರು ಎಷ್ಟೊಂದು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ ಎನ್ನುವುದನ್ನು ಗಮನಿಸಿದರೆ ನಮಗೆ ಆಚ್ಚರಿಯಾಗದಿರದು, ಅವರ ಮಾತಿನಲ್ಲಿ ಸ್ಪಷ್ಟತೆ, ಗುರಿ, ಹಿಂದೆ ಗುರು, ಹೊಣೆಗಾರಿಕೆಯ ಗುರುತ್ವವೂ ಇದೆ ಆದ್ದರಿಂದ ನಾವಿಂದು ವಿವೇಕಾನಂದರ ಉಪದೇಶಗಳನ್ನು ಹೇಗೆ  ಉಪಯೋಗಿಸಿಕೊಳ್ಳುತ್ತಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿ, ಯುವ ಸಂಘಟಕ ಸಿದ್ದಣ್ಣ ದುರದುಂಡಿ ಅವರ ನಿಸ್ವಾರ್ಥ ಸೇವೆ ಮತ್ತು ಕಾರ್ಯ ನಿಜವಾಗಲೂ ಶ್ಲಾಘನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವೇಕಾನಂದರ ಜಯಂತಿ ನಿಮಿತ್ತವಾಗಿ ಭಾಷಣ ಸ್ಪರ್ಧೆ, ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ, ಯುವ ಸಾಧಕರಿಗೆ ಸತ್ಕರಿಸಿ ಗೌರವಿಸಲಾಯಿತು. ಮೂಡಲಗಿ ಮಂಜುನಾಥ ಸೈನಿಕ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ವಾಕ್ಯದ ಅರ್ಥವನ್ನು ಯುವಕರು ಅರಿತುಕೊಂಡು ಸಾಗಿದರೆ ಮುಂದೆ ಸುಂದರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ಮೂಡಲಗಿ ಸಂಕಲ್ಪ ಕ್ರೀಡಾ ಹಾಗೂ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಭಾಷ ಗೊಡ್ಯಾಗೋಳ, ಯುವ ಮುಖಂಡರಾದ ಭಗವಂತ ಉಪ್ಪಾರ, ಯುವ ಪ್ರತಿಭೆ ಮಂಜುನಾಥ ರೇಳೆಕರ, ರಾಧಿಕಾ ಪತ್ತಾರ, ಕಸ್ತೂರಿ ಹೆಗ್ಗಾನಿ, ಪೂರ್ಣಿಮಾ ಗೊಡ್ಯಾಗೋಳ, ದಾನಮ್ಮ ಪಾಯಣ್ಣವರ ಮುಂತಾದವರು ಉಪಸ್ಥಿತರಿದ್ದರು.      

ಕಾರ್ಯಕ್ರಮವನ್ನು ಪ್ರಧಾನ ಗುರುಗಳಾದ ಶಶಿಧರ ಆರಾಧ್ಯ ನಿರೂಪಿಸಿ ಸ್ವಾಗತಿಸಿದರು, ದೈಹಿಕ ನಿರ್ದೇಶಕ ಕೆ ಮಂಜು ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group