ಮೂಡಲಗಿ: ನೇತಾಜಿ ಸುಭಾಸ್ ಚಂದ್ರ ಬೋಸ್ ಅವರು ದೇಶ ಕಂಡ ಅಪ್ರತಿಮ ಹೋರಾಟಗಾರ, ದೈರ್ಯಶೀಲ ವ್ಯಕ್ತಿ ಶ್ರೇಷ್ಠ ಸೇನಾನಿ, ಯುವ ಶಕ್ತಿಯ ಸ್ಪೂರ್ತಿದಾಯಕ ವ್ಯಕ್ತಿ ಅಷ್ಟೇ ಅಲ್ಲದೆ ಸರ್ವಕಾಲಕ್ಕೂ ನೇತಾಜಿ ಅವರು ದಬ್ಬಾಳಿಕೆ ಅನ್ಯಾಯದ ವಿರೋಧಿ ಹೋರಾಟದ ಪ್ರತೀಕವಾಗಿದ್ದಾರೆ ಎಂದು ಎಮ್.ಇ.ಎಸ್ ಕಲಾ ಹಾಗೂ ವಾಣಿಜ್ಯ ವಿದ್ಯಾಲಯದ ಪ್ರೊ.ಸಂಜಯ ಖೋತ ಹೇಳಿದರು.
ಸೋಮವಾರದಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಕೇಂದ್ರದಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸ್ರ 126ನೇ ಜನ್ಮ ದಿನಾಚಾರಣೆಯ ನಿಮಿತ್ತ ಏರ್ಪಡಿಸಿದ್ದ ಪುಸ್ತಕ ಪ್ರದರ್ಶನದಲ್ಲಿ ಮಾತನಾಡಿದ ಅವರು, ನೇತಾಜಿಯಂತಹ ದೇಶಕ್ಕೆ ಪ್ರಾಣ ತ್ಯಾಗ ಮಾಡಿದ ದಿಮಂತ ವ್ಯಕ್ತಿಗಳ ಜನ್ಮ ದಿನಾಚರಣೆ ನಿಮಿತ್ತ ಗ್ರಂಥಾಲಯದಲ್ಲಿ ಅವರು ಕುರಿತು ಪುಸ್ತಕ ಪ್ರದರ್ಶನ ಏರ್ಪಡಿಸಿರುವುದು ಸ್ತುತ್ಯರ್ಹವಾದದ್ದು ಎಂದು ಶ್ಲಾಘಿಸಿದರು.
ನೇತಾಜಿ ಕುರಿತು ಉಪನ್ಯಾಸ ನೀಡಿದ ಕನ್ನಡ ಪ್ರಾಧ್ಯಾಪಕ ಪ್ರೊ.ಎ.ಎಸ್.ಮೀಶಿನಾಯಿಕ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಚಳವಳಿಯ ನೇತಾರರಾಗಿದ್ದ ಸುಭಾಸ ಚಂದ್ರ ಬೋಸ್ ಭಾರತೀಯರಿಗೆ ರಾಷ್ಟ್ರೀಯವಾದದ ಕಲ್ಪನೆ ಹಾಗೂ ಸ್ವಾತಂತ್ರ್ಯದ ಪ್ರಜ್ಞೆಯನ್ನು ಬೆಳೆಸಿದ ಮಹಾನ್ ನಾಯಕರಾಗಿದ್ದರು ಎಂದು ಸ್ಮರಿಸಿದರು.
ಕಾಲೇಜಿ ಪ್ರಾಚಾರ್ಯ ಎ.ಪಿ.ರಡ್ಡಿ, ಪ್ರದರ್ಶನ ಉದ್ಘಾಟಿಸಿದ ಗ್ರಂಥಪಾಲಕ ಬಸವಂತ ಬರಗಾಲಿ ಮತ್ತು ವಿದ್ಯಾರ್ಥಿನಿ ಆರತಿ ನೂಲಿ ಅವರು ನೇತಾಜಿ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಉಪನ್ಯಾಸಕರಾದ ಪ್ರೊ.ಸಂಗಮೇಶ ಗುಜಗೊಂಡ, ಡಾ.ಬಿ.ಸಿ.ಪಾಟೀಲ, ಪ್ರೊ.ಜಿ.ವ್ಹಿ.ನಾಗರಾಜ, ಪ್ರೊ.ದೀಪಕ ಹವಳೆ, ಪ್ರೊ.ಎಸ್.ಕೆ.ಸವಸುದ್ದಿ, ಪ್ರೊ.ಸವಿತಾ ಕೊತ್ತಲ, ಮನೋಹರ ಲಮಾಣಿ ಮತ್ತಿತರರು ಇದ್ದರು.