ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು
ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ
ಕನ್ನಡಾನುವಾದ : ಡಾ. ವಿಠಲರಾವ್ ಟಿ. ಗಾಯಕ್ವಾಡ್
ಪ್ರಕಾಶಕರು : ಬಸವಧರ್ಮ ಪ್ರಸಾರ ಸಂಸ್ಥೆ, ಹಿರೇಮಠ ಸಂಸ್ಥಾನ,
ಭಾಲ್ಕಿ-೨೦೨೧
ಬೆಲೆ: ರೂ. ೨೦೦
ಶ್ರೀ ರಾಜು ಜುಬರೆ ಅವರು ಮರಾಠಿ ಭಾಷೆಯಲ್ಲಿ ಬರೆದ ‘ಮಹಾಜಂಗಮ’ ಎಂಬ ಮಹತ್ವದ ಕೃತಿಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿಯೂ ಪ್ರಕಟವಾಗಿರುವುದು ಸಂತೋಷದ ಸಂಗತಿಯಾಗಿದೆ. ಪೂಜ್ಯ ಡಾ. ಬಸವಲಿಂಗ ಪಟ್ಟಾಧ್ಯಕ್ಷರನ್ನು ತುಂಬ ಹತ್ತಿರದಿಂದ ಕಂಡ ಶ್ರೀ ರಾಜು ಜುಬರೆ ಅವರು ಶ್ರೀಗಳ ಮಹೋನ್ನತ ವ್ಯಕ್ತಿತ್ವವನ್ನು ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ. ಶ್ರೀಗಳು ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮಾಡುತ್ತಿರುವ ಬಸವ ಸೇವೆಯನ್ನು ದಾಖಲಿಸುವ ಒಂದು ಪ್ರಯತ್ನವೂ ಇಲ್ಲಿದೆ. ಕೃತಿಗೆ ಮಹಾರಾಷ್ಟ್ರದ ಹಿರಿಯ ವಿದ್ವಾಂಸರಾದ ಡಾ. ರವೀಂದ್ರ ಬೆಂಬರೆ ಪ್ರಸ್ತಾವನೆಯ ನುಡಿಗಳನ್ನು ಬರೆದಿದ್ದಾರೆ. ಮಹಾರಾಷ್ಟ್ರದ ವಿದ್ರೋಹಿ ಸಾಂಸ್ಕೃತಿಕ ಚಳವಳಿಯ ಮುಖಂಡರಾದ ಕಾ. ಧನಾಜಿ ಗುರುವ ಅವರು ‘ದೀಪಸ್ತಂಭ’ ಎಂಬ ಮೌಲಿಕ ಮುನ್ನುಡಿ ತೋರಣ ಕಟ್ಟಿಕೊಟ್ಟಿದ್ದಾರೆ.
ರಾಜು ಜುಬರೆ ಅವರು ಲೇಖಕರ ನುಡಿಯಲ್ಲಿ ಈ ಕೃತಿಯನ್ನು ಮರಾಠಿ ಭಾಷಿಕರಿಗೆ ಶ್ರೀಗಳ ಸೇವಾಕಾರ್ಯಗಳ ಪರಿಚಯ ಮಾಡಿಕೊಡಬೇಕೆಂಬ ಕಾರಣಕ್ಕಾಗಿ ರಚಿಸಿರುವೆ ಎಂದು ಹೇಳಿದ್ದಾರೆ. ಇಂಥ ಮಹತ್ವದ ಸಾಧನೆ ಕನ್ನಡಿಗರಿಗೂ ತಿಳಿಯಲೆಂಬ ಉದ್ದೇಶದಿಂದ ಡಾ. ವಿಠಲರಾವ್ ಗಾಯಕ್ವಾಡ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದೇ ಕೃತಿಯನ್ನು ಡಾ. ನಳಿನಿ ಅವಿನಾಶ ವಾಗ್ಮೊರೆ ಅವರು ಇಂಗ್ಲಿಷ್ ಭಾಷೆಗೂ ಅನುವಾದಿಸಿದ್ದಾರೆ. ಡಾ. ವಿಠಲರಾವ್ ಗಾಯಕ್ವಾಡ ಅವರು ತಾವು ಈ ಕೃತಿಯನ್ನು ಅನುವಾದ ಮಾಡಬೇಕಾದ ಸಂದರ್ಭವನ್ನು ಕುರಿತು ತುಂಬ ಅರ್ಥವತ್ತಾಗಿ ಹೀಗೆ ಹೇಳುತ್ತಾರೆ- ‘ಪ್ರಸ್ತುತ ಕೃತಿ ನನ್ನ ಕೈಸೇರಿದ ಮೇಲೆ ಅದನ್ನು ಓದಲು ಆರಂಭಿಸಿದಾಗ ಪೂಜ್ಯರ ಪೂರ್ವಾಶ್ರಮದ ಜೀವನ, ನಂತರದ ಸಮಾಜೋಧಾರ್ಮಿಕ ಸೇವಾ ಮನೋಭಾವದ ಕೈಂಕರ್ಯ ಎಲ್ಲವನ್ನು ನೋಡಿದಾಗ ನನಗೆ ಅರಿವಾಗದಂತೆಯೇ ಧನ್ಯತಾ ಭಾವವು ಮನಸ್ಸಿನಲ್ಲಿ ತುಂಬಿಕೊಂಡಿತು. ಒಬ್ಬ ವ್ಯಕ್ತಿ ತಾನು ಸುಖವಾದ ಜೀವನವನ್ನು ನಡೆಸುವುದಕ್ಕೆ ಸದಾ ಇಚ್ಛಿಸುವುದು ಸಹಜ. ಅದರಂತೆ ಪೂಜ್ಯ ಸ್ವಾಮೀಜಿಯವರು ಪಟ್ಟಾಧಿಕಾರಿಗಳಾದರೂ ಆ ಸ್ಥಾವರ ಆಸನ ಮತ್ತು ಮಠವನ್ನು ಹೆಚ್ಚಾಗಿ ನೆಚ್ಚಿಕೊಂಡು ಕುಳಿತುಕೊಳ್ಳಲಿಲ್ಲ. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಕೀರ್ಣ ಜೀವನವನ್ನು ನಡೆಸುತ್ತಿದ್ದ ಜನಸಮುದಾಯವನ್ನು ಸೂಕ್ತ ಸಹಕಾರ ಮತ್ತು ಮಾರ್ಗದರ್ಶನದ ಮೂಲಕ ಸುಸಂಸ್ಕೃತರನ್ನಾಗಿ ಮಾಡುವುದಕ್ಕೆ ಕಟಿಬದ್ಧರಾಗಿ ನಿಂತ ಸಂಕಥನವು ನನ್ನನ್ನು ಹೆಚ್ಚು ಪ್ರಭಾವಿಸಿತು. ವ್ಯಕ್ತಿ ಮಹಾನ್ ವ್ಯಕ್ತಿತ್ವವಾಗಿ ರೂಪುಗೊಳ್ಳುವರು ಎಂಬುದಕ್ಕೆ ಅತ್ಯುತ್ತಮ ನಿದರ್ಶನವೆಂದರೆ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಎಂಬುದನ್ನು ಮರೆಯುವಂತಿಲ್ಲ. ಈ ಮಹಾನ್ ವ್ಯಕ್ತಿತ್ವ ಸಾಧಕರ ಜೀವನ ಚರಿತ್ರೆಯನ್ನು ಓದುವುದು ಮತ್ತು ಅದನ್ನು ಕನ್ನಡ ಭಾಷೆಗೆ ಅನುವಾದ ಮಾಡುವುದು ನನ್ನ ಪಾಲಿಗೆ ಒದಗಿ ಬಂದ ಸೌಭಾಗ್ಯವೆಂದೇ ಭಾವಿಸುತ್ತೇನೆ.’ ಡಾ. ಗಾಯಕ್ವಾಡ್ ಅವರ ಮಾತುಗಳು ಅಕ್ಷರಶಃ ನಿಜವಾಗಿವೆ.
೧೨ನೇ ಶತಮಾನದಲ್ಲಿ ಬಸವಾದಿ ಶರಣರಿಂದ ಅಸ್ತಿತ್ವಕ್ಕೆ ಬಂದ ಲಿಂಗಾಯತ ಧರ್ಮ ತತ್ವ ಸಿದ್ಧಾಂತಗಳನ್ನು ಆಧುನಿಕ ಯುಗದಲ್ಲಿಯೂ ಅಕ್ಷರಶಃ ಅನುಷ್ಠಾನಕ್ಕೆ ತಂದ ಶ್ರೇಯಸ್ಸು ಭಾಲ್ಕಿ ಹಿರೇಮಠಕ್ಕೆ ಸಲ್ಲುತ್ತದೆ. ಲಿಂಗಾಯತ ಧರ್ಮ ಪರಂಪರೆಯಲ್ಲಿ ಗುರು ಮತ್ತು ವಿರಕ್ತ ಎಂಬ ಎರಡು ಭೇದಗಳಿದ್ದು, ಗುರುಪೀಠದವರು ಬಸವಣ್ಣನವರನ್ನು ಲಿಂಗಾಯತ ಧರ್ಮಗುರು ಎಂದು ಒಪ್ಪಿಕೊಂಡು, ಬಸವತತ್ವದಲ್ಲಿ ಮುನ್ನಡೆದು ಬಂದುದು ವಿರಳ. ಅದಕ್ಕೆ ಅಪವಾದವೆಂಬಂತೆ ಭಾಲ್ಕಿ ಹಿರೇಮಠ ಗುರುಪರಂಪರೆಯ ಮಠವಾದರೂ, ಬಸವಣ್ಣನವರ ತತ್ವಾದರ್ಶಗಳಲ್ಲಿ ನಂಬಿಕೆಯಿಟ್ಟು, ಭಕ್ತಸಮುದಾಯಕ್ಕೆ ಬಸವತತ್ವವನ್ನೇ ತಿಳಿಸುವ ಕಾರ್ಯ ಮಾಡುತ್ತ ಬಂದಿದೆ. ಭಾಲಿ ಹಿರೇಮಠ ಸಂಸ್ಥಾನದ ಪರಂಪರೆಯಲ್ಲಿ ಲಿಂಗಾಯತ ಧರ್ಮಗುರು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಜನಮಾನಸದಲ್ಲಿ ಬಿತ್ತುವ ಪ್ರಾಮಾಣಿಕ ಪ್ರಯತ್ನ ಮಾಡಿದ ವಿರಳಾತಿವಿರಳರಲ್ಲಿ ಭಾಲ್ಕಿ ಹಿರೇಮಠದ ಪೂಜ್ಯಶ್ರೀ ಡಾ. ಬಸವಲಿಂಗ ಪಟ್ಟಾಧ್ಯಕ್ಷರು ಒಬ್ಬರು.
ಪೂಜ್ಯಶ್ರೀ ಲಿಂ. ಡಾ. ಚನ್ನಬಸವ ಪಟ್ಟದ್ದೇವರು ಹೈದ್ರಾಬಾದ್ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಅವಿರತ ಪರಿಶ್ರಮಿಸಿದವರು. ರಜಾಕಾರರ ಹಾವಳಿಯ ಸಂದರ್ಭದಲ್ಲಿ ಹೊರಗೆ ಉರ್ದು ಬೋರ್ಡು ಹಾಕಿ, ಒಳಗೆ ಕನ್ನಡ ಕಲಿಸಿದ ಕನ್ನಡ ಭಾಷಾಭಿಮಾನಿಗಳು. ಕನ್ನಡ ಭಾಷೆ ಲಿಂಗಾಯತ ಧರ್ಮದ ಭಾಷೆಯೂ ಆಗಿರುವುದರಿಂದ ಕನ್ನಡ ಮತ್ತು ಲಿಂಗಾಯತ ಧರ್ಮದ ಶ್ರೇಯೋಭಿವೃದ್ಧಿಯ ಕನಸು ಕಂಡ ಪೂಜ್ಯರ ಆಶಯಗಳನ್ನು ಸಂಕಲ್ಪಗಳನ್ನು ಪೂರ್ಣಗೊಳಿಸಿದವರು ಪೂಜ್ಯಶ್ರೀ ಬಸವಲಿಂಗ ಪಟ್ಟದ್ದೇವರು.
ಪೂಜ್ಯರು ಗಡಿಭಾಗದಲ್ಲಿ ಶೈಕ್ಷಣಿಕ ಜಾಗೃತಿಗಾಗಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಗಡಿಭಾಗದ ಆಂಧ್ರಪ್ರದೇಶ ಮಹಾರಾಷ್ಟçಗಳಲ್ಲಿ ಶಾಲೆಗಳನ್ನು ತೆರೆದು ಜನಸಾಮಾನ್ಯರ ಬಾಳಿಗೆ ಬೆಳಕು ನೀಡಿದವರು. ೩೫ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ. ಬಡ ಮತ್ತು ಹೆಣ್ಣುಮಕ್ಕಳ ವಿದ್ಯಾರ್ಜನೆಗೆ ವಿಶೇಷ ಕಾಳಜಿ ವಹಿಸಿರುವ ಪೂಜ್ಯರು ಮಾನವೀಯ ಅಂತಃಕರಣವುಳ್ಳವರು. ಶ್ರೀಗಳು ಅನಾಥಾಶ್ರಮ ಮತ್ತು ಬಾಲಕಾರ್ಮಿಕ ಶಾಲೆಗಳನ್ನು ಅಸ್ತಿತ್ವಕ್ಕೆ ತರುವ ಮೂಲಕ ನಿರ್ಗತಿಕ ಮಕ್ಕಳ ಆಶಾಕಿರಣವಾಗಿದ್ದಾರೆ.
ಬಸವ ತತ್ವ ಸಂದೇಶ ಗಡಿಭಾಗದ ಜನರಿಗೆ ತಲುಪಲೆಂಬ ಸದುದ್ದೇಶದಿಂದ ‘ಮಹಾರಾಷ್ಟ್ರ ಬಸವಧರ್ಮ ಪರಿಷತ್’, ‘ಆಂಧ್ರಪ್ರದೇಶ ಬಸವ ಪರಿಷತ್ತು’, ‘ಬಸವಭಾರತಿ ಹಿಂದಿ ಪ್ರತಿಷ್ಠಾನ’ಗಳನ್ನು ಸ್ಥಾಪಿಸಿ ತನ್ಮೂಲಕ ಉತ್ತಮೋತ್ತಮ ಕನ್ನಡ ಕೃತಿಗಳನ್ನು ಮರಾಠಿ, ತೆಲುಗು, ಹಿಂದಿ ಭಾಷೆಗೆ ಅನುವಾದಿಸಿ ಪ್ರಕಟಿಸುವ ಸ್ತುತ್ಯಕಾರ್ಯ ಮಾಡಿದ್ದಾರೆ. ಡಾ. ಎಂ. ಎಂ. ಕಲಬುರ್ಗಿ ಅವರ ‘ವೀರಶೈವ : ಇತಿಹಾಸ ಮತ್ತು ಭೂಗೋಲ’, ಡಾ. ಎನ್.ಜಿ.
ಮಹಾದೇವಪ್ಪ ಅವರ ‘ಲಿಂಗಾಯತರು ಹಿಂದೂಗಳಲ್ಲ’ ಮೊದಲಾದ ಜನಪ್ರಿಯ ಕೃತಿಗಳನ್ನು ತೆಲಗು ಭಾಷೆಯಲ್ಲಿ ಅನುವಾದಿಸಿ, ಪ್ರಕಟಿಸಿ ತೆಲಂಗಾಣ ಪ್ರದೇಶದಲ್ಲಿ ಉಚಿತವಾಗಿ ಹಂಚುವ ಕಾರ್ಯ ಮಾಡುವ ಮೂಲಕ, ನಿಜವಾದ ಲಿಂಗಾಯತ ಧರ್ಮದ ಇತಿಹಾಸವನ್ನು ಜನಸಾಮಾನ್ಯರಿಗೂ ತಿಳಿಸುವ ಕಾರ್ಯ ಮಾಡಿದ್ದಾರೆ.
ಬಸವಧರ್ಮವನ್ನು ಅನ್ಯಭಾಷಿಕರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಪೂಜ್ಯರದಾಗಿದೆ. ಬಸವ ತತ್ವ ಪ್ರಸಾರ ಸಂಸ್ಥೆಯ ಮೂಲಕ ಕನ್ನಡ ಗ್ರಂಥಗಳನ್ನು ಪ್ರಕಟಿಸುವ ಯೋಜನೆ ಕೈಕೊಂಡಿದ್ದಾರೆ. ನಾಡಿನ ಹೆಸರಾಂತ ಸಾಹಿತಿಗಳ ಶ್ರೇಷ್ಠ ಕೃತಿಗಳನ್ನು ಪ್ರಕಟಿಸಿದ ಹೆಮ್ಮೆ ಈ ಪ್ರಸಾರ ಸಂಸ್ಥೆಗಿದೆ. ಇಲ್ಲಿಯವರೆಗೆ ಮರಾಠಿಯಲ್ಲಿ ೧೬೦, ತೆಲುಗಿನಲ್ಲಿ ೩೦, ಹಿಂದಿಯಲ್ಲಿ ೧೦ ಹೀಗೆ ಒಟ್ಟು ೨೦೦ ಕೃತಿಗಳನ್ನು ಪ್ರಕಟಿಸಿದ್ದಾರೆ. ಡಾ. ಫ. ಗು.ಹಳಕಟ್ಟಿಯವರ ‘ವಚನ ಶಾಸ್ತ್ರ ಸಾರ’ ಎಂಬ ಬೃಹತ್ ಕೃತಿಯನ್ನು ಮರಾಠಿಗೆ ಅನುವಾದಿಸಿ ಪ್ರಕಟಿಸಿದ್ದು ಶ್ರೀಗಳ ದೊಡ್ಡ ಸಾಧನೆಯೆಂದೇ ಹೇಳಬೇಕು. ಸ್ವತಃ ಸಾಹಿತಿಗಳೂ ಆಗಿರುವ ಪೂಜ್ಯರು ಬೀದರ ಭಾಗದ ಆಡುಭಾಷೆಯ ಸೊಗಡಿನಲ್ಲಿ ಈಗಾಗಲೇ ‘ಬಸವ ನೈವೇದ್ಯ’ ‘ಬಸವಣ್ಣನವರು ಮತ್ತು ಅಷ್ಟಾವರಣ’ ‘ಬಸವ ಚಿಂತನ’ ‘ಬಸವ ತತ್ವ ಆಚರಣೆ ಮತ್ತು ನಾವು’, ಬಸವಧರ್ಮ ದರ್ಪಣ, ‘ಶರಣ ಸಾಹಿತ್ಯ ದರ್ಪಣ’ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಜಂಗಮ ಜೀವನದ ಲೋಕಾನುಭವಗಳು ಜನಸಾಮಾನ್ಯರಿಗೂ ಮುಟ್ಟುವಂತೆ ಈ ಕೃತಿಗಳಲ್ಲಿ ಸರಳ ಸುಭಗ ಭಾಷೆಯಲ್ಲಿ ನಿರೂಪಿಸಿದ್ದಾರೆ.
ನೆರೆಯ ಮಹಾರಾಷ್ಟ್ರದ ಜನರಲ್ಲಿ ಬಸವತತ್ವದ ಬಗ್ಗೆ ತಪ್ಪು ಕಲ್ಪನೆ ಬಿತ್ತುತ್ತ ಬರಲಾಗಿತ್ತು. ಅದನ್ನು ಗಮನಿಸಿದ ಶ್ರೀಗಳು ಡಾ. ಎಂ. ಎಂ. ಕಲಬುರ್ಗಿ ಮತ್ತು ಗದುಗಿನ ತೋಂಟದಾರ್ಯ ಸಂಸ್ಥಾನಮಠದ ಲಿಂ. ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ‘ಬಸವಧರ್ಮ ಪ್ರಸಾರ ಯಾತ್ರೆ’ಯನ್ನು ಕೈಗೊಂಡರು. ಮಹಾರಾಷ್ಟ್ರದ ೪೮ ಜಿಲ್ಲೆಗಳಲ್ಲಿ ಈ ಯಾತ್ರೆ ಅಭೂತಪೂರ್ವವೆಂಬಂತೆ ಎಂಬಂತೆ ಜರುಗಿತು. ಮರಾಠಿ ಭಾಷೆಯಲ್ಲಿ ಪ್ರಕಟವಾದ ನೂರಾರು ಶರಣ ಸಾಹಿತ್ಯ ಕೃತಿಗಳ ಲಕ್ಷಾಂತರ ಪ್ರತಿಗಳು ಮರಾಠಿ ಜನರ ಕೈಗೆ ತಲುಪಿದವು. ಶ್ರೀಗಳ ಈ ಸಾಧನೆಯನ್ನು ಡಾ. ಎಂ. ಎಂ. ಕಲಬುರ್ಗಿ ಅವರು ಹೀಗೆ ದಾಖಲಿಸಿದ್ದಾರೆ.
“ಶ್ರೀ ಬಸವಲಿಂಗ ಪಟ್ಟದ್ದೇವರು ಲಿಂಗಾಯತ ಸಿದ್ಧಾಂತ-ಸಮಾಜಗಳನ್ನು ವಿಸ್ತಾರದಿಂದ ವಿಸ್ತಾರಕ್ಕೆ ಜಾತ್ಯತೀತವಾಗಿ ಬೆಳೆಸಿರುವರು. ಅನೇಕ ಶಿಕ್ಷಣ ಸಂಸ್ಥೆ, ಅನೇಕ ಗ್ರಂಥ ಪ್ರಕಾಶನ, ಅನೇಕ ಪ್ರಶಸ್ತಿ ಬಹುಮಾನ, ಅನೇಕ ಧಾರ್ಮಿಕ ಪರಿಷತ್ತು, ಅನೇಕ ಪ್ರತಿಷ್ಠಾನ, ಅನೇಕ ಸಾಂಸ್ಕೃತಿಕ ಸಂಘಗಳನ್ನು ಹುಟ್ಟು ಹಾಕಿರುವರು. ಇವುಗಳಲ್ಲಿ ಎತ್ತಿ ಹೇಳಬೇಕಾದುದು ಹೊರರಾಜ್ಯಗಳಲ್ಲಿ ಬಸವಪ್ರಜ್ಞೆ ಬೆಳೆಸಿದ ಸಂಘಟನಾ ಕಾರ್ಯ. ಲಿಂಗಾಯತ ಗುರುಪೀಠ(ವಿರಕ್ತಪೀಠ)ದವರು ತಮ್ಮ ಕಾರ್ಯವ್ಯಾಪ್ತಿಯನ್ನು ಕರ್ನಾಟಕಕ್ಕೆ ಸೀಮಿತಗೊಳಿಸುತ್ತ ಬಂದರು. ಇದನ್ನು ಗಮನಿಸಿ ಆಚಾರ್ಯಪೀಠದವರು ಹೊರರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶಗಳಲ್ಲಿ ಲಿಂಗಾಯತ ಮತ್ತು ವೀರಶೈವ ಒಂದೇ ಎಂಬ ಭ್ರಮೆಯನ್ನು ಬಿತ್ತಿ, ‘ಲಿಂಗಿಬ್ರಾಹ್ಮಣ ಗ್ರಂಥಮಾಲೆ’ ಇತ್ಯಾದಿಗಳನ್ನು ಆರಂಭಿಸಿ, ಸಿದ್ಧಾಂತ ಶಿಖಾಮಣಿ ಮೊದಲಾದುವು ಲಿಂಗಾಯತದ ಧರ್ಮಗ್ರಂಥಗಳೆಂದು ಬೋಧಿಸಿ, ಅಲ್ಲಿಯ ಜನರು ಮೊದಲಿನಿಂದಲೂ ಅನುಸರಿಸುತ್ತಲಿದ್ದ ಬಸವಸಿದ್ಧಾಂತದ ದಾರಿ ಬಿಡಿಸಿದರು. ಈ ತಪ್ಪನ್ನು ತಿದ್ದುವ ದೃಷ್ಟಿಯಿಂದ ಶ್ರೀ ಬಸವಲಿಂಗ ಪಟ್ಟದ್ದೇವರು ‘ಮಹಾರಾಷ್ಟ್ರ ಬಸವ ಪರಿಷತ್ತು’ ಮತ್ತು ‘ಆಂಧ್ರಪ್ರದೇಶ ಬಸವ ಪರಿಷತ್ತು’ ಸ್ಥಾಪಿಸಿದುದು ಐತಿಹಾಸಿಕ ಸಾಧನೆಗಳಾಗಿವೆ. ಇತ್ತೀಚೆ ಅವರು ಕೈಕೊಂಡ ಸಮಗ್ರ ಮಹಾರಾಷ್ಟ್ರ ಬಸವಧರ್ಮ ಯಾತ್ರೆ ‘ನಭೂತೋ ನ ಭವಿಷ್ಯತಿ’ ಎಂದೇ ಹೇಳಬೇಕು”
ಪೂಜ್ಯರ ಬಹುಮುಖ ಸೇವೆಯನ್ನು ಗಮನಿಸಿ ಕರ್ನಾಟಕ ಸರ್ಕಾರ ‘ರಾಜ್ಯೋತ್ಸವ ಪ್ರಶಸ್ತಿ’ ಮತ್ತು ಹಿರೇಮಠ ಸಂಸ್ಥಾನವು ರಜಾಕಾರರ ಕಾಲಾವಧಿಯಲ್ಲಿ ಕನ್ನಡ ಉಳಿವಿಗಾಗಿ ಸಲ್ಲಿಸಿದ ಅವಿಸ್ಮರಣೀಯ ಸೇವೆಯನ್ನು ಗಮನಿಸಿ ‘ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ’ ನೀಡಿ ಗೌರವಿಸಿದೆ. ಅ.ಭಾ. ಶರಣ ಸಾಹಿತ್ಯ ಪರಿಷತ್ತು ಕೊಡಮಾಡುವ ‘ರಮಣಶ್ರೀ’ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪೂಜ್ಯರ ಸಾಧನೆಗೆ ಸಂದಿದೆ. ಶ್ರೀಗಳ ಒಟ್ಟು ಬಸವಸೇವೆಗೆ ಈಗ ಕರ್ನಾಟಕ ಘನ ಸರಕಾರದ ಪ್ರತಿಷ್ಠಿತ ಬಸವ ಪುರಸ್ಕಾರ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಪೂಜ್ಯರ ಸಾನ್ನಿಧ್ಯದಲ್ಲಿ ಕಳೆದ ೧೨ ವರುಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ರಾಜು ಜುಬರೆ ಅವರು ಪೂಜ್ಯರ ಘನವ್ಯಕ್ತಿತ್ವವನ್ನು ಅತ್ಯಂತ ವಸ್ತುನಿಷ್ಠವಾಗಿ ರಚಿಸಿದ್ದಾರೆ. ಅವರಿಗೆ ಶರಣಾರ್ಥಿಗಳು. ಇಂಥ ಮಹತ್ವದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಶ್ರೀಗಳ ವಿಸ್ತಾರೋನ್ನತ ವ್ಯಕ್ತಿತ್ವವನ್ನು ಪರಿಚಯಿಸಿದ ಡಾ. ವಿಠಲರಾವ್ ಗಾಯಕ್ವಾಡ್ ಅವರಿಗೆ ವಂದನೆ-ಅಭಿನಂದನೆಗಳು.
ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧