ಬೀದರ – ಭೂಮಿ ಮ್ಯುಟೇಶನ್ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ತಹಶೀಲ್ದಾರ ಗಂಗಾದೇವಿ ರೂ. 15 ಲಕ್ಷ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ಚಿದ್ರಿ ಗ್ರಾಮದ ಸರ್ವೆ ನಂಬರ್ 15/1 ರ 2 ಎಕರೆ 15 ಗುಂಟೆ ಭೂಮಿ ಮುಟೆಷನ್ ಮಾಡಲು ಲೀಲಾಧರ ಅನ್ನುವವರಿಗೆ ರೂ. 25 ಲಕ್ಷ ಡಿಮ್ಯಾಂಡ್ ಮಾಡಿದ್ದ ತಹಶೀಲ್ದಾರ ಶ್ರೀಮತಿ ಗಂಗಾದೇವಿ ಮನೆಯಲ್ಲಿ ರೂ. 15 ಲಕ್ಷ ಹಣ ಪಡೆಯುವಾಗ ಬೀದರ್ ಎಸಿಬಿ ತಂಡ ದಾಳಿ ಮಾಡಿದ್ದು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಗಿ ವರದಿಯಾಗಿದೆ.
ಈ ಬಗ್ಗೆ ಫೀರ್ಯಾದುದಾರ ಲೀಲಾಧರ ಅಮೃತಲಾಲ ಪಟೇಲ್ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಕೊಟ್ಟಿದ್ದು, ತಾನು ಖರೀದಿ ಮಾಡಿದ್ದ ಜಮೀನನ್ನು ಮ್ಯುಟೇಶನ್ ಮಾಡಿಕೊಡಲು ಕಡತ ವಿಲೇವಾರಿ ಮಾಡಲು ತಹಶೀಲ್ದಾರರು ರೂ. 25 ಲಕ್ಷಗಳ ಬೇಡಿಕೆ ಇಟ್ಟಿದ್ದರು ಆದರೆ ತನ್ನ ಕಡೆ 15 ಲಕ್ಷ ಮಾತ್ರ ಇದ್ದುದಾಗಿಯೂ ಅದನ್ನೇ ಕೊಡುವಂತೆ ಅವರು ಬೇಡಿಕೆ ಇಟ್ಟಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ ತಾನು ಹಾಗೂ ತಹಶೀಲ್ದಾರರ ನಡುವೆ ನಡೆದ ಫೋನ್ ಸಂಭಾಷಣೆಯನ್ನು ರಿಕಾರ್ಡ್ ಮಾಡಿರುವುದಾಗಿ ದೂರುದಾರ ತಿಳಿಸಿದ್ದಾರೆ.

ಈಗಾಗಲೇ ಹತ್ತು ಹಲವು ಭ್ರಷ್ಟಾಚಾರದ ಆರೋಪ ಹೊತ್ತಿರುವ ತಹಸಿಲ್ದಾರ ಗಂಗಾದೇವಿಯವರು ಎಸಿಬಿ ಎಸ್ಪಿ ಸೇರಿದಂತೆ ಹಲವು ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿಗೆ ಸಿಲುಕಿಕೊಂಡಿದ್ದು ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿದೆ.
ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ