ಮೂಡಲಗಿ – ಘಟಪ್ರಭಾ ನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ೩೦ ತಿಂಗಳಾದರೂ ಪರಿಹಾರ ವಿತರಿಸದೇ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಪ್ರವಾಹ ಪರಿಹಾರದ ಮಂಜೂರಾತಿ ಆದೇಶ ನೀಡುವವರೆಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ದಿ. ೨೧ ರಂದು ನಿರಂತರ ಧರಣಿ ನಡೆಸಲು ನಿರ್ಧರಿಸಿರುವುದಾಗಿ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ.
ಪ್ರಕಟಣೆಯಲ್ಲಿ ಈ ಬಗ್ಗೆ ತಿಳಿಸಿರುವ ಅವರು, ಧರಣಿಯ ಬಗ್ಗೆ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮನವಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜಕೀಯ ಒತ್ತಡ ಹಾಗೂ ಆಮಿಷಕ್ಕೆ ಒಳಗಾದ ಅಧಿಕಾರಿಗಳು ನಿಜವಾದ ಸಂತ್ರಸ್ತರ ಹೆಸರು ಅಳವಡಿಸಿಲ್ಲ. ಈ ಬಗ್ಗೆ ಕಳೆದ ದಿ. ೯.೧೧.೨೦೨೧ ರಂದು ತಹಶೀಲ್ದಾರ ಕಚೇರಿ ಹಾಗೂ ದಿ. ೧೫.೯.೨೦೨೧ ರಂದು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ಮಾಡಿದಾಗ ಜಿಲ್ಲಾಧಿಕಾರಿಗಳು ನೀಡಿದ್ದ ಭರವಸೆಯ ಮೇರೆಗೆ ಧರಣಿ ಹಿಂತೆಗೆದುಕೊಳ್ಳಲಾಗಿತ್ತು. ಅಲ್ಲದೆ ಮುಖ್ಯಮಂತ್ರಿಗಳು ಕೂಡ ಅಂದು ೨೦೧೯ ರ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವುದಾಗಿ ಹೇಳಿದ್ದರು.
ಇನ್ನೂವರೆಗೂ ಪರಿಹಾರ ಸಿಕ್ಕಿಲ್ಲ. ಆದರೆ ೫೦-೭೦ ಸಾವಿರ ರೂ. ಕೊಟ್ಟವರಿಗೆ ಮಾತ್ರ ಪರಿಹಾರ ಸಿಗುವಂತೆ ಕಾಣುತ್ತಿದೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ದೊರಕಿಸುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿರುತ್ತದೆ. ಆದರೆ ಸರ್ಕಾರ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿಯಿಂದಾಗಿ ೩೦ ತಿಂಗಳಾದರೂ ಸಂತ್ರಸ್ತರಿಗೆ ಪರಿಹಾರ ಸಿಗದೇ ಇರುವುದರಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಹಗಲು ರಾತ್ರಿ ಧರಣಿಗೆ ಕೂರುವುದು ಅನಿವಾರ್ಯವಾಗಿದೆ ಎಂದಿರುವ ಅವರು ಧರಣಿಯ ಸಂದರ್ಭದಲ್ಲಿ ತಾವುದೆ ಅಹಿತಕರ ಘಟನೆ ನಡೆದರೆ ಅದಕ್ಕೆ ಸರ್ಕಾರವೇ ಹೊಣೆ ಎಂದಿದ್ದಾರೆ.
ಪ್ತಮುಖ ಬೇಡಿಕೆಗಳು:
೩೦ ತಿಂಗಳಾದರೂ ನೆರೆ ಸಂತ್ರಸ್ತರಿಗೆ ತಲುಪದ ಪರಿಹಾರವನ್ನು ತಕ್ಷಣವೇ ಜಿಲ್ಲಾಧಿಕಾರಿಗಳು ನೀಡಬೇಕು
ಪರಿಹಾರ ನೀಡುವುದಾಗಿ ಸಂತ್ರಸ್ತರಿಂದ ಅಧಿಕಾರಗಳು ೫೦-೭೦ ಸಾವಿರ ರೂ. ಹಣ ಪಡೆದುಕೊಂಡಿದ್ದು ಈ ಬಗ್ಗೆ ವಿಶೇಷ ತನಿಖಾ ತಂಡ ಅಥವಾ ಗುಪ್ತಚರ ಇಲಾಖೆಯಿಂದ ತನಿಖೆ ನಡೆಸಿ ಸಂತ್ರಸ್ತರ ಹಣ ಮರಳಿಸುವುದಾಗಬೇಕು.
ಕೆಲವು ಗ್ರಾಮಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಮನೆ ಬಿದ್ದಿದ್ದರೂ ಅವುಗಳನ್ನು ‘ಸಿ’ ವರ್ಗಕ್ಕೆ ಸೇರಿಸಲಾಗಿದ್ದು, ಅವುಗಳನ್ನು ‘ಎ’ ವರ್ಗಕ್ಕೆ ಸೇರಿಸಬೇಕು. ಈಗಾಗಲೇ ಮಂಜೂರಾಗಿರುವ ಮನೆಗಳ ಕಾಮಗಾರಿಗೆ ಹಣ ಬೇಗ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ದಿ.೨೧ ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಧರಣಿ ನಡೆಸಲಾಗುವುದು ಎಂದು ಭೀಮಪ್ಪ ಗಡಾದ ತಿಳಿಸಿದ್ದಾರೆ.