ನೋಟರಿಗಳ ಕಾರ್ಯಾಗಾರ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ಚಂದ್ರಶೇಖರಯ್ಯ ಅಭಿಮತ
ಮೈಸೂರು – ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ನೋಟರಿಗಳ ಸಂಘದ ವತಿಯಿಂದ (ಮಾ.23) ಕಾರ್ಯಾಗಾರ ಹಾಗೂ ನೋಟರಿ ಬಿ.ಎಸ್.ಪ್ರಶಾಂತ್ ಅವರು ಆಂಗ್ಲ ಭಾಷೆಯ ಪುಸ್ತಕವನ್ನು ಕನ್ನಡಕ್ಕೆ ತರ್ಜುಮೆ ಮಾಡಿರುವ ‘ನೋಟರಿ ಕಾನೂನು ಪದ್ಧತಿ ಹಾಗೂ ಪ್ರಕ್ರಿಯೆ’ ಎಂಬ ಪುಸ್ತಕವನ್ನು ಬೆಂಗಳೂರು ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ಚಂದ್ರಶೇಖರಯ್ಯನವರು ಬಿಡುಗಡೆಗೊಳಿಸಿದರು.
ನಂತರ ಅವರು ಮಾತನಾಡಿ, ನೀವು ಕಷ್ಟಪಟ್ಟು 5 ವರ್ಷದಲ್ಲಿ ದುಡಿದರೆ ಮುಂದೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಹಿತವಚನ ನೀಡಿ, ನೋಟರಿಗಳು ಹೆಚ್ಚೆಚ್ಚು ಪುಸ್ತಕಗಳನ್ನು ಓದಿ ಜ್ಞಾನ ಸಂಪಾದನೆಯನ್ನು ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನೀವು ಕಕ್ಷದಾರರ ಹತ್ತಿರ ಹೆಚ್ಚು ಬೇಡಿಕೆ ಇಡಬೇಡಿ. ಅವರಾಗೇ ಕೊಟ್ಟರೆ ಸ್ವೀಕರಿಸಿ ಎಂದು ತಿಳಿಸಿದರು. ಅವರು ನೋಟರಿ ಬಿ.ಎಸ್.ಪ್ರಶಾಂತ್ ಅವರು ಬರೆದ ಪುಸ್ತಕದ ಮೆಚ್ಚುಗೆ ವ್ಯಕ್ತಪಡಿಸಿ, ಸಾಹಿತ್ಯ ಎನ್ನುವುದು ಓದುಗನ ಮನಸ್ಸಿನಾಳಕ್ಕೆ ಪ್ರಭಾವ ಬೀರಬಲ್ಲ ಕ್ಷೇತ್ರವಾಗಿದೆ. ಸಾಹಿತ್ಯ ರಚನೆ ಕಷ್ಟದ ಕೆಲಸವಾಗಿದ್ದು, ಸಾಹಿತಿಯ ಮನಸ್ಸಿನಿದಿಂದ ಬರಹದ ರೂಪದಲ್ಲಿ ಹೊರ ಬರುವ ಅನುಭವ ಓದುಗನ ಮನಸ್ಸು ಸೇರುತ್ತದೆ. ಬರವಣಿಗೆಯನ್ನು ತಪಸ್ಸಿನಂತೆ ಕಾಣಬೇಕು ಮತ್ತು ಹಿಡಿತ ಸಾಧಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ಮತ್ತು ಚಾಮರಾಜನಗರ ನೋಟರಿಗಳ ಸಂಘದ ಅಧ್ಯಕ್ಷ ಪಿ.ರಮೇಶ್ ಮಾತನಾಡಿ, ಸಾಹಿತಿಗಳು ಯಾವುದೇ ಸಭೆ, ಸಮಾರಂಭ ಮತ್ತಿತರ ಪ್ರದೇಶಗಳಿಗೆ ತೆರಳಿದರೂ ಬರವಣಿಗೆಯ ಮೂಲಕ ತಮ್ಮ ಅನುಭವವನ್ನು ಓದುಗರಿಗೆ ಹಂಚಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಅನುಭವಕ್ಕೆ ಬರವಣಿಗೆಯ ರೂಪ ನೀಡಿ ಓದುಗರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಈ ಕಷ್ಟದ ಕಾಯಕ ಮಾಡುವ ಬರಹಗಾರರಿಗೆ ದಾನಿಗಳ ಸಹಕಾರ ಅಗತ್ಯವಿದೆ ಎಂದು ತಿಳಿಸಿ, ನೋಟರಿಗಳು ಶ್ರದ್ಧೆಯಿಂದ ಕೆಲಸ ನಿರ್ವಹಿಸಿ, ಸಮಾಜಕ್ಕೆ ಉತ್ತಮ ಮಾದರಿಯಾಗಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ರಾಜ್ಯಪಾಲ, ಜಿಲ್ಲೆ 317ಜಿ ಲಯನ್ ಡಾ.ಎನ್.ಕೃಷ್ಣೇಗೌಡ, ಕರ್ನಾಟಕ ನೋಟರಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ್, ಕಾರ್ಯದರ್ಶಿ ಸಿ.ಎಸ್.ಚಿಕ್ಕಣ್ಣೇಗೌಡ, ಮೈಸೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಎಸ್.ಉಮೇಶ್, ಬೆಂಗಳೂರು ಹೈಕೋರ್ಟ್ನ ಹಿರಿಯ ನ್ಯಾಯಾಧೀಶ, ಮಧುಕರ್ ದೇಶಪಾಂಡೆ, ನ್ಯಾಯಾಧೀಶ ಪುಟ್ಟಸ್ವಾಮಿ, ಕಾಂಬ್ರೋಸ್, ಲಯನ್ ಸುಬ್ರಹ್ಮಣ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಶ್ರೀಮತಿ ಕಮಲ ಪ್ರಾರ್ಥಿಸಿದರೆ, ಸುರೇಶ್ ಬಾಬು ನಿರೂಪಿಸಿದರು. ಎಸ್.ನಾಗರಾಜ್ ವಂದಿಸಿದರು.