ಮೈಸೂರು -ನಗರದ ಆಲನಹಳ್ಳಿ ಬಡಾವಣೆಯಲ್ಲಿರುವ ಯುರೋ ಕಿಡ್ಸ್ ಶಾಲೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಜಗನ್ಮೋಹನ ಅರಮನೆಯಲ್ಲಿಂದು (ಮಾ.24) ನೆರವೇರಿತು.
ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಮಾತನಾಡಿದ ಮಂಡ್ಯ ಕೃಷಿ ಸಂಶೋಧನಾ ಕೇಂದ್ರದ ಭತ್ತದ ತಳಿ ವಿಜ್ಞಾನಿ ಡಾ.ಸಿ.ಎ.ದೀಪಕ್ ಅವರು ಪೂರ್ವ ಪ್ರಾಥಮಿಕ ಶಿಕ್ಷಣ ಮಕ್ಕಳ ಮುಂದಿನ ಬೆಳವಣಿಗೆಗೆ ಪೂರಕ ವಾತಾವರಣವನ್ನು ನಿರ್ಮಿಸುತ್ತದೆ. ಶಾಲಾ ವಾತಾವರಣಕ್ಕೂ ಮೊದಲು ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮನೆಯನ್ನು ಬಿಟ್ಟು, ಶಾಲೆಗೆ ಬಂದ ಮಕ್ಕಳಿಗೆ ಸ್ವಾವಲಂಬನೆ, ಆಸಕ್ತಿ, ಕಲಿಕೆ, ವಿವಿಧ ಆಟೋಟಗಳು, ಸಹಪಾಠಿ ಮಕ್ಕಳ ಜೊತೆ ಬೆರೆಯುವುದು ಹೀಗೆ ಹತ್ತು ಹಲವು ಕುತೂಹಲಕಾರಿ ವಿಷಯಗಳನ್ನು ಮನವರಿಕೆ ಮಾಡಿಕೊಡುವುದು ಬಹಳ ಮುಖ್ಯವಾದ ಉದ್ದೇಶ ಹಾಗೂ ಲಕ್ಷಣವಾಗಿದೆ ಎಂದು ತಿಳಿಸಿದರು.
ಇಂದು ಸ್ಪರ್ಧಾ ಪ್ರಪಂಚದಲ್ಲಿ ಶಿಕ್ಷಣ ಸಂಸ್ಥೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪೈಪೋಟಿಯನ್ನುಂಟು ಮಾಡುತ್ತಿದೆ. ಆದ್ದರಿಂದ ವಿಷಯ ಜ್ಞಾನದ ಜೊತೆಗೆ ನಾವು ಬದುಕುವ ಕಲೆಯನ್ನು ಕಲಿಸುವುದು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು, ಕ್ರಿಯಾಶೀಲತೆಯನ್ನು ಉಂಟುಮಾಡುವುದು ಅತ್ಯಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುರೋ ಕಿಡ್ಸ್ನ ಮುಖ್ಯಸ್ಥರಾದ ಕೃಷ್ಣೇಗೌಡ ಅವರು ವಹಿಸಿ ಮಾತನಾಡಿ, ಮಕ್ಕಳ ಬೆಳವಣಿಗೆಗೆ ಶಾಲಾ ವಾರ್ಷಿಕೋತ್ಸವಗಳು ಅಡಿಪಾಯವನ್ನು ಹಾಕುವುದರ ಜೊತೆಗೆ ಪ್ರತಿಭೆಯನ್ನು ಗುರುತಿಸುವಲ್ಲಿ ಮುಖ್ಯವಾಗುತ್ತದೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಭಾಗವಹಿಸಲು ನೆರವಾಗುತ್ತದೆಂದು ತಿಳಿಸಿದರು.
ವೇದಿಕೆಯಲ್ಲಿ ಡಾ.ಯೋಗಿತಾ, ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪ ಕೃಷ್ಣೇಗೌಡ, ಮುಖ್ಯ ಶಿಕ್ಷಕರಾದ ಚೈತ್ರ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮೌರ್ಯ ಕೃಷ್ಣೇಗೌಡ ಸ್ವಾಗತಿಸಿದರೆ, ಮುಖ್ಯ ಶಿಕ್ಷಕಿ ಚೈತ್ರ ನಿರೂಪಿಸಿದರು. ವೇದಿಕೆ ಕಾರ್ಯಕ್ರಮದ ನಂತರ ಚಿಣ್ಣರಿಂದ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.