ಬೀದರ – ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಇಬ್ಬರು ಮಹನೀಯರಾದ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿಯವರ ಜನ್ಮದಿನವಾದ ಅ.೨ ರಂದು ಎಲ್ಲಾ ಕಡೆ ಹಬ್ಬದ ವಾತಾವರಣ ಇದ್ದರೆ ಬಸವಕಲ್ಯಾಣದಲ್ಲಿ ಮಾತ್ರ ಈ ಮಹನೀಯರ ಫೋಟೋಗಳನ್ನು ಹೊರಗೆ ಎಸೆದು ಅವಮಾನ ಮಾಡಿದ ನಾಚಿಕೆಗೇಡಿನ ಪ್ರಕರಣ ವರದಿಯಾಗಿದೆ.
ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಈ ಘಟನೆ ನಡೆದಿದ್ದು ಇಡೀ ದೇಶಕ್ಕೆ ಮೊದಲ ಪಾರ್ಲಿಮೆಂಟ್ ಪರಿಚಯಿಸಿದ ಕರ್ಮಭೂಮಿ ಬಸವಕಲ್ಯಾಣದ ಜನರು ಇಡೀ ದೇಶದಲ್ಲಿ ತಲೆತಗ್ಗಿಸುವಂತೆ ನಡೆದು ಹೋಗಿದೆ.
ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜೀ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿಯವರ ಹುಟ್ಟುಹಬ್ಬ.ಇಂಥ ದಿನದಂದೇ ಇವರ ಫೋಟೋಗಳು ಬಸವಕಲ್ಯಾಣದ ತಹಶಿಲ್ದಾರ್ ಕಚೇರಿಯಿಂದ ಹೊರಗಡೆ ಬಿದ್ದಿವೆ. ಜೊತೆಗೆ ಶ್ರೀ ಸಿದ್ಧರಾಮೇಶ್ವರ ಫೋಟೋ ಕೂಡ ಇದೆ. ಮಿನಿ ವಿಧಾನ ಸೌಧ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಇಂಥ ನಾಚಿಕೆಗೇಡಿನ ಸಂಗತಿ ನಡೆದಿದ್ದು, ಸ್ಥಳೀಯ ಆಡಳಿತದಿಂದ ಈ ಮೂವರು ಮಹಾನ್ ನಾಯಕರ ಛಾಯಾಚಿತ್ರಗಳನ್ನು ತಮ್ಮ ಸ್ಥಳಗಳಿಂದ ಸ್ಥಳಾಂತರಿಸಲಾಗಿದೆ. ಆದರೆ ಈ ಎಲ್ಲಾ ಭಾವಚಿತ್ರಗಳನ್ನು ಕಚೇರಿಯ ಕಾರಿಡಾರ್ ಮೇಲೆ ಎಸೆಯಲಾಗಿದೆ.
ಸ್ಥಳೀಯ ಅಧಿಕಾರಿಗಳ ನಾಚಿಕೆಯಿಲ್ಲದ ಮನಸ್ಥಿತಿ ಪ್ರಕಟಗೊಂಡಿದ್ದು ಈ ಮಹಾನ್ ಆತ್ಮಗಳಿಗೆ ಅಗೌರವ ತೋರಿದ ತಪ್ಪಿತಸ್ಥರನ್ನು ಅಮಾನತುಗೊಳಿಸುವ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇನ್ನು ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಸವಕಲ್ಯಾಣ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವಚ್ಚ ಭಾರತ್, ಗಾಂಧಿ ತತ್ವದ ಮಾತುಗಳಾಡುತ್ತಿರುವ ಬಸವಕಲ್ಯಾಣ ಶಾಸಕ ಶರಣು ಸಲಗರ್ ಮಾತ್ರ ಈ ಬಗ್ಗೆ ಗಮನ ಹರಿಸಿಲ್ಲ.
ಶಾಸಕರೇ, ನಿಮ್ಮ ಕಣ್ಣಿಗೆ ಈ ಘಟನೆ ಕಾಣುತ್ತಿಲ್ವಾ, ತಹಶೀಲ್ದಾರ್ ಮೇಡಂ ಸಾವಿತ್ರಿಯವರೇ ನಿಮ್ಮ ಕಚೇರಿಯಲ್ಲೇ ನಡೆದ ಈ ಘಟನೆ ನಿಮ್ಮ ಗಮನಕ್ಕೆ ಬಂದಿಲ್ವಾ ? ಎಂದು ಪ್ರಶ್ನೆ ಕೇಳುತ್ತಿರುವ ಜನಕ್ಕೆ ಉತ್ತರ ಬೇಕಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ