ದ್ರೌಪದಿಯ ಸ್ವಗತ
ನಾನು ಅರಸುಮನೆತನದ ಹೆಣ್ಣು,
ಅರ್ಧಜಗದ ಮಣೆ ಹಿಡಿದ ಹೆಣ್ಣು.
ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ,
ನೂರು ಚೂಪಿನ ಕತ್ತಿಗಳ ಮಧ್ಯೆ
ಹೆಜ್ಜೆ ಹಾಕಿದಂತಿತ್ತು.
ನಾನು ಕದನದ ಕಿಡಿಯಾದೆ
ಅವಮಾನಗಳ ನೆರಳಲ್ಲಿ ಹೊತ್ತಿಕೊಂಡ ಬೆಂಕಿ.
ಆದರೂ ನಾನು ಸೋಲಲಿಲ್ಲ;
ಬಾಳಿನ ಹೊಗೆಯಿಂದ ಕರಗಿ ಹೋಗದೇ,
ಹೆಮ್ಮೆಯಿಂದ ಉರಿಯುತ್ತಲೇ ಇದ್ದೆ.
ನಾನು ಪರಿತಾಪದ ನೆರಳು,
ನನ್ನ ಜೀವನವೇ ನೋವಿನ ದೀಪಮಾಲಿಕೆ.
ನಾನೊಬ್ಬ ಪ್ರಯೋಗದ ಹೆಣ್ಣು,
ಅಪಮಾನಗಳ ಪಥವನ್ನೇ ನಿರಂತರವಾಗಿ ಹಾದುಹೋಗಿದ ಕವಚಧಾರಿ.
ನನ್ನ ಹೃದಯದಲ್ಲಿ ನೋವಿನ ಹಾಡು,
ಆದರೂ ಅದೇ ನನ್ನ ಶಕ್ತಿಯ ಗಾನ.
ಯುದ್ಧವೆಂದರೆ ಕೇವಲ ಕೈಯಲ್ಲಿ ಶಸ್ತ್ರವಿರಬೇಕೆಂತೇನಿಲ್ಲ ,
ಆದರೆ ನನ್ನ ಮನವೇ ಕಾಳಗದ ಬಣ.
ನನ್ನ ಕಣ್ಣೀರಲ್ಲಿ ವಿರೋಧದ ಪ್ರಖರ ಹರಿವಿತ್ತು,
ನನ್ನ ಆತ್ಮಶಕ್ತಿಯು ಬಿದ್ದುಹೋಗಿಲ್ಲ.
ಅನುಭವಗಳು ಬಂಡೆಯ ಮೇಲೆ ಕೆತ್ತಿದ ಪಾಠವಾಗಿದ್ದವು
ಅವು ನನ್ನ ಹೆಜ್ಜೆ ಗುರುತುಗಳಲ್ಲಿ ಶಾಶ್ವತವಾಗಿವೆ.
ಪ್ರತೀ ನೋವು ನನಗೆ ಜೀವನದ ಪಾಠವಾಗಿದ್ದವು,
ಬಾಳು ನನ್ನನ್ನು ಸೋಲಿಸಲು ಬಯಸಿದರೂ,
ನಾನು ಸೋಲಲಿಲ್ಲ;
ನಾನು ದ್ರೌಪದಿ,
ಅವಮಾನಗಳನ್ನು ದಾಟಿದ ಹೆಣ್ಣು,
ದುಃಖಗಳ ದಟ್ಟ ಕತ್ತಲಲ್ಲಿ ಉರಿವ ದೀಪ.
ನೀತಿಯ ಹೊತ್ತ ಅಜ್ಞಾನಿಗಳ ನಡುವೆ
ನೈತಿಕತೆಯ ಗುಣಶಸ್ತ್ರ ಯೋಧಿನಿ.
ವಿದ್ಯಾ ರೆಡ್ಡಿ, ಗೋಕಾಕ