ಕವನ : ಬೆಲೆಯಿಲ್ಲ ಭಾವನೆಗೆ

Must Read

ಬೆಲೆಯಿಲ್ಲ ಭಾವನೆಗೆ

ಭಾವನೆಗಳಿಗೆ ಬೆಲೆ ಇಲ್ಲ ಮನುಜ
ಮೋಹದ ಬಲೆ ಸಹಜ
ಕೊಟ್ಟು ತೆಗೆದು ಕೊಳ್ಳುವ ಇರಾದೆಯಲಿ
ಒಗ್ಗಟ್ಟು ಬರೀ ನೆಪದ ತೆರದಲಿ.

ನಾನೆಂಬ ಗರಿ ಮೂಡಿ
ನೀನೆಂಬ ಭೇದ ಹರಡಿ
ಬೆನ್ನಿಗೆ ಚೂರಿ ಹಾಕುವ ಹುನ್ನಾರ
ಚೆನ್ನಿಗನ ಮಾತಂತೆ ಬಿಡಾರ.

ಹೊದಿಕೆಗೆ ಹೂಡಿಕೆ ಮಾಡಿ
ಒಳ ಮರ್ಮ ತಿಳಿಯದೆ ತಡಕಾಡಿ
ಗಾಳಕ್ಕೆ ಸಿಕ್ಕ ಮೀನು
ಕಲಿಗಾಲದ ಬಳುವಳಿ ನೀನು.

ಸಂಪತ್ತಿನ ನಶೆಗೆ
ವಿಪತ್ತು ಆಹ್ವಾನಿಸಿದ ಬಗೆಗೆ
ವಿಷಪ್ರಾಶನವಾದ ಆಹಾರ
ಮೋಸದ ಜಾಲಕೆ ಆಕರ.

ಡಂಭಾಚಾರದ ಬದುಕಿಗೆ
ಮಾನವೀಯತೆ ತೆರೆ ಮರೆಗೆ
ಸ್ವೇಚ್ಛಾಚಾರದ ನಡೆ
ಅತಿಮಾನುಷ ಕಡೆ

ಏನೆನ್ನಲಿ ಈ ಬದುಕಿಗೆ
ಒಟ್ಟಿಗಿದ್ದು ದೂರ ನಿಲ್ಲುವೆವು
ಒಳಗೊಳಗೆ ಕೊರೆವ ಕೀಟದ ಹಾವಳಿಗೆ
ನಲುಗಿ ಹೋಗಿದೆ ಜೀವ ಯಾನ.

ಕೊನೆಗೊಮ್ಮೆ ತಿಳಿಯುವ ಮೊದಲೇ
ಹೊರಡುವ ಧಾವಂತ
ಹೇಳದೇ ಕೇಳದೇ ಇದ್ದರೂ
ಮೆರೆದ ಬದುಕು ಛಿದ್ರ ಛಿದ್ರ.

ಬಯಲಾಟದ ಬದುಕು
ಗೋಳಾಟದ ಹಾದಿಯಲಿ
ಕಳ್ಳಾಟ ಮಲ್ಲಾಟ ಸೋಜಿಗ
ತಳ್ಳಾಟದಿ ಕೆನೆಗೊಳ್ಳುವ ಭೋಗ.

ಭಾವನೆಗಳಿಗೆ ಬೆಲೆಯಿಲ್ಲ
ಚುಚ್ಚಿ ನೆತ್ತರನ್ನು ಬರಿಸಿ
ಮುಚ್ಚಿ ಮುಚ್ಚಿ ಮಿಸುಕಾಡಿ
ಜೀವದೊಡಲಿಗೆ ಕುತ್ತು ಬಂದಿದೆ.

ತಿಳಿಯೊಮ್ಮೆ ಭಾವನೆಗಳೇ ಬದುಕು
ಇದ್ದಾಗ ಬೆಲೆ ಕೊಡಿ
ಹೋದಾಗ ಮರುಗದೆ
ಕೊರಗುವ ಮುನ್ನ .ಎಚ್ಚೆತ್ತುಕೊಳ್ಳಿ.

ರೇಷ್ಮಾ ಕಂದಕೂರ

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group