ಮರೆಯದ ಬಾಲ್ಯ
ಆ ದಿನಗಳೇ ಹಾಗೇ
ತುಂತುರು ಮಳೆಯಂತೆ
ಬಿತ್ತರದ ಮಣಿ ಮಾಲೆ
ಚಿಮಿಣಿ ಬೆಳಕಿನಂತೆ
ಕೊರತೆ ಇರದೆ
ಒರತೆ ಚಿಮ್ಮಿಸಿದ ಅಲೆ.
ಬುಗುರಿ ಲಗೋರಿ
ಗೋಲಿ ಪಗಡೆ
ಹಳ್ಳ ಕೊಳ್ಳ ಅಲೆದಿದ್ದ ಸೆಲೆ.
ಬೇಧವಿರದ ಬಾಂಧವ್ಯ
ಮಂದಹಾಸದ ಒಲುಮೆ
ನಮ್ಮವರೆಂಬ ಗತ್ತಿನ ಓಕುಳಿ.
ಗಿಡ ಮರ ಬಳ್ಳಿಯ ನೋಟ
ಕಾಯಿ ಹಣ್ಣು
ತಿಂದ ಸವಿಯ ನೆಲೆ.
ಕಲ್ಲು ಮಣ್ಣು ಆಟದಿ
ಅಮ್ಮನ ಬೈಗುಳದ ಸುರಿಮಳೆ
ಅಜ್ಜಿಯ ಮಡಿಲ ನಿದ್ರೆಯ ಸುಳಿ.
ಈಗೆಲ್ಲಾ ಮಸುಕು
ನೆನಪಿನ ಸಾಲು
ಆಗಂತುಕನ ಬಳುವಳಿ.
ಮರಳಿ ಬಾರದ ಹಾಗೆ
ತೀರದ ಮೌನ ಆವರಿಸಿತು
ಬಿರುಕಿನ ತಾಣವಾಗಿದೆ.
ಬಾಂಧವ್ಯ ಕಡಿದ ಹಾದಿ
ಗಾರೆ ತುಂಬುವ ಖಯಾಲಿಯಲಿ
ಮನ ಬಸವಳಿದಿದೆ.
ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು