ಹೌದು! ಕಲಹ ಎನ್ನುವುದು ಎಷ್ಟು ಕೇಡು ತಂದು ಒಡ್ಡುತ್ತದೆ ಎಂದರೆ ಬದುಕಿದ್ದಾಗಲೇ ನರಕ ತೋರುವಷ್ಟು ಯಾತನೆಯನ್ನು ಅನುಭವಿಸುವಂತೆ ಮಾಡುತ್ತದೆ. ಸಲ್ಲದ ವಿಚಾರಕ್ಕೆ ಮನಸ್ತಾಪ, ಹೊಡೆದಾಟ, ಬೇಡದ ಶಾಪಗಳು ಒಂದಾ ಎರಡಾ ಅಬ್ಬಬ್ಬಾ ಮರಣಕ್ಕಿಂತಲೂ ನೋಯಿಸುವಂತದ್ದು. ಇತ್ತೀಚೆಗೆ ಕಲಹ ಎಂಬುದು ಎಲ್ಲ ಸಂಬಂಧಗಳನ್ನು ಕಲಕಿ ನೆಮ್ಮದಿ ಹಾಳು ಮಾಡಿ ಬದುಕಿದ್ದವರ ಭಾವನೆಗಳ ಮೇಲೆ ಗೋರಿ ಕಟ್ಟುವ ಕೆಲಸ ಮಾಡುತ್ತದೆ. ಅದಕ್ಕೆ ಮೂಲ ಕಾರಣ ನಾವುಗಳೇ ಹೊರತು ಬೇರಾರು ಅಲ್ಲ. ಕೊಟ್ಟ ಹಣ ಸಮಯಕ್ಕೆ ಸರಿಯಾಗಿ ಹಿಂತಿರುಗಿಸದಿದ್ದಾಗ, ಹಣ ಸಂಬಂಧಗಳನ್ನು ಕೆಡಿಸಿ ಹುಟ್ಟಿಹಾಕಿದ ಕಲಹ, ಯಾರಿಗೆ ಹೇಗೆ ಬೇಕೋ ಹಾಗೆ ನಾವಿರದಿದ್ದಾಗ ಹುಟ್ಟಿಕೊಳ್ಳುವ ಕಲಹ, ನನಗೆ ಹೆಚ್ಚು ನಿನಗೆ ಹೆಚ್ಚು ಎಂಬಂತೆ ಆಸ್ತಿಗಾಗಿ ಹುಟ್ಟಿಕೊಂಡ ಕಲಹ, ಅಲ್ಲಿ ಯಾರೋ ನನಗಿಂತ ಹೆಚ್ಚು ಮುಂದೆ ಬಂದಿದ್ದಾರೆ ಎಂದರೆ ಅದನ್ನ ಕಂಡು ಖುಷಿಪಟ್ಟು ನಾನು ಏನನ್ನಾದರೂ ಸಾಧಿಸಬೇಕು ಎಂಬ ಆಶಯ ಹೊಂದದೆ ನನಗಿಂತ ಮುಂದೆ ಇದಾರೆ ಎಂಬ ಕಾರಣಕ್ಕಾಗಿ ಹುಟ್ಟಿಕೊಂಡ ಕಲಹ, ಸಿರಿವಂತಿಕೆ ಗಾಗಿ ಹುಟ್ಟಿಕೊಂಡ ಕಲಹ ಹೀಗೆ ಅರ್ಥವಿಲ್ಲದೆ, ನಮಗೆ ಅರಿವಿಲ್ಲದೆ ಹುಟ್ಟಿಕೊಂಡ ಕಲಹಗಳೆಲ್ಲವು ನಮ್ಮ ಮಾನಸಿಕ ಸ್ಥಿತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತವೆ.
ಅಷ್ಟಕ್ಕೂ ಶಾಶ್ವತವಾಗಿ, ಚಿರಂಜೀವಿಯಾಗಿ ಯಾರು ಇರುವುದಿಲ್ಲ, ಅಂತಹ ಈ ಜಗದಲ್ಲಿ ಹಗೆ ಹೊತ್ತು ಬದುಕುವ ಬದುಕೇಕೆ? ಇರುವಷ್ಟು ದಿನ ಖುಷಿಯಿಂದ ಬಾಳಬೇಕೇ ಹೊರತು ಕಲಹದಿಂದ ಅಲ್ಲ. ಇಂದಿನ ದಿನಮಾನಗಳಲ್ಲಿ ನಮ್ಮವರನ್ನು ಅರ್ಥೈಸಿಕೊಳ್ಳದ ಕಾಲಘಟ್ಟದಲ್ಲಿ ಇದ್ದೇವೆ. ತಂದೆ ತಾಯಿ ಕೇಳಿದ್ದು ಕೊಡಿಸಿಲ್ಲವೆಂಬ ಕಾರಣಕ್ಕೆ ಮನಸ್ಸಿನಲ್ಲೇ ಬೈದುಕೊಂಡು ಹಗೆ ಸಾಧಿಸುವ ಮಕ್ಕಳು, ಹೆಂಡತಿಗಾಗಿ ತಂದೆ ತಾಯಿಗಳನ್ನು ವೃದ್ಧಾಶ್ರಮಗಳಿಗೆ ಅಟ್ಟುವಷ್ಟು ಹಗೆ, ಆಸ್ತಿ ಹಂಚಿಕೆಯಾಗುವಾಗ ಗೇಣು ಜಾಗಕ್ಕಾಗಿ ಅಣ್ಣ ತಮ್ಮಂದಿರ ಕಲಹ, ಸ್ನೇಹದಲ್ಲಿ ಕೊಟ್ಟ ಹಣಕ್ಕಾಗಿ, ಮಾಡಿದ ಖರ್ಚು ಎತ್ತಿ ಹಾಡಿ ಸ್ನೇಹವನ್ನೇ ದಿಕ್ಕರಿಸುವಷ್ಟು ಕಲಹ, ಯಾರದೋ ಮೂರನೇ ವ್ಯಕ್ತಿಯಿಂದ ಆಡದ ಮಾತಿಗೆ ಅರ್ಥೈಸಿಕೊಳ್ಳದೆ, ಕೊನೆಪಕ್ಷ ಯಾವ ಕಾರಣಕ್ಕಾಗಿ ಎಂಬುದನ್ನು ಕುಳಿತು ಮಾತನಾಡದೆ ಕಡಿದುಕೊಂಡ ಸ್ನೇಹ ಆತ್ಮೀಯರೊಂದಿಗೆ ಹುಟ್ಟಿಕೊಂಡ ಕಲಹ, ನನಗೆ ನೀನು, ನಿನಗೆ ನಾನು ಎಂದು ಸಪ್ತಪದಿ ತುಳಿದು ಏಳು ಜನ್ಮಕ್ಕೂ ಜೊತೆ ಇರುತ್ತೇನೆಂದು ಶಾಸ್ತ್ರೋಕ್ತವಾಗಿ ಕೈ ಹಿಡಿದ ದಂಪತಿಗಳ ನಡುವೆ ಸಣ್ಣ ಸಣ್ಣ ವಿಷಯಕ್ಕೂ ಕಲಹ, ಕೊನೆಗೆ ಮನೆಯ ಪಕ್ಕದವರೊಂದಿಗೂ ಗಂಟು ಮೋರೆ ಹಾಕಿಕೊಂಡು ಕಲಹದಿಂದಲೇ ಬದುಕು ಸಾಗಿಸುವವರು ಹೆಜ್ಜೆ ಹೆಜ್ಜೆಗೂ ಸಿಗುತ್ತಾರೆ. ಇಷ್ಟಕ್ಕೂ ಅದರಿಂದ ನಾವು ಸಾಧಿಸಿದ್ದಾದರೂ ಏನು? ಹೌದು ಏನನ್ನೂ ಪಡೆದಿಲ್ಲ, ಬದಲಿಗೆ ಎಲ್ಲವನ್ನು ಕಳೆದುಕೊಂಡು ಬರಿಗೈಯಿಂದಲೇ ನಡೆಯಬೇಕು.
ಯಾರನ್ನೋ ದೂಷಿಸಿ ದೂರಿಡುವ ಮುನ್ನ ಒಮ್ಮೆ ಯೋಚಿಸಿ ಅದನ್ನು ಮಾಡಲು ಅವರಿಗಾಗಿ ಸಮಯ ವಿನಿಯೋಗಿಸಬೇಕು. ಅದರಿಂದ ಮನಸ್ಸಿಗೂ, ಮನೆಗೂ ನೆಮ್ಮದಿ ಇರುವುದಿಲ್ಲ, ಶಾಂತಿಯುತ ಬದುಕು ಸಾಗಿಸುವುದು ಕಷ್ಟ. ಮಾನಸಿಕ ನೆಮ್ಮದಿ ಹಾಳುಮಾಡಿಕೊಳ್ಳುವ ಹಗೆ ಯಾಕೆ ಬೇಕು. ಅದು ನಮ್ಮ ಏಳಿಗೆಗೂ ಮುಳ್ಳಾಗಬಹುದು. ಬಸವಣ್ಣನವರ ವಚನದ ನುಡಿಗಳಲ್ಲೇ ಇದನ್ನು ನಾವು ಅರ್ಥೈಸಿಕೊಳ್ಳಬಹುದು.
“ತನುವಿನ ಕೋಪ ತನ್ನ ಹಿರಿತನದ ಕೇಡು, ಮನದ ಕೋಪ ಅರಿವಿನ ಕೇಡು” ಇದನ್ನು ಕೇಳಿದಾಗಲೆಲ್ಲ ಎಷ್ಟು ಪ್ರಸ್ತುತ ಎನಿಸುತ್ತದೆ. ನಾವು ಯಾರಿಗಾದರೂ ಕೆಟ್ಟದ್ದು ಬಯಸ ಹೊರಟರೆ, ಹಗೆ ಸಾಧಿಸಹೊರಟರೆ ಅದು ನಮ್ಮೊಳಗೇ ಬೂದಿ ಮುಚ್ಚಿದ ಕೆಂಡದಂತೆ ನಮ್ಮನ್ನೇ ಸುಡುತ್ತದೆ. ಸೆರಗಿಗೆ ಕಟ್ಟಿಕೊಂಡ ಕೆಂಡದಂತೆ ಯಾಕೆ ಹಗೆಯನ್ನು ಸಾಧಿಸಿ ಸಂತೋಷ ಕಳೆದುಕೊಳ್ಳಬೇಕು ಅಲ್ವಾ.
ಕನಿಷ್ಠಪಕ್ಷ ಒಬ್ಬರಿಗೆ ಒಳ್ಳೆಯದನ್ನು ಬಯಸುವ ಯೋಗ್ಯತೆ ಇಲ್ಲವೆಂದಮೇಲೆ ಕೆಟ್ಟದ್ದನ್ನು ಮಾಡುವ ದುಷ್ಟ ಆಲೋಚನೆಯಾದರು ಯಾಕೆ. ತಾತ್ಕಾಲಿಕ ಖುಷಿಗಳಿಗೆ ಕಟ್ಟುಬಿದ್ದು ಬೇಡದಿರುವ ಸಂಗತಿಗಳನ್ನೇ ನೇಯುತ್ತಾ ಹೋದರೆ ನೇಪತ್ಯಕ್ಕೆ ಸರಿಯುವ ಕಾಲ ಬಂದೇ ಬರುತ್ತದೆ. ಸಾಧ್ಯವಾದಷ್ಟು ನಮ್ಮನ್ನ ನಾವು ಖುಷಿಯಾಗಿ ಇಟ್ಟುಕೊಳ್ಳೋಕೆ ಏನು ಬೇಕು ಅದನ್ನ ಪ್ರಾಮಾಣಿಕವಾಗಿ ಮಾಡಬೇಕೆ ಹೊರತು ನಮ್ಮನ್ನು ಬುಡಮೇಲು ಮಾಡುವ ಸಂಗತಿಗಳಿಗೆ ಕಿವಿಗೊಡಬಾರದು. ಕೆಲವರನ್ನು ಒಡನಾಡಿ ತಿಳಿಯಬೇಕು ; ಮತ್ತೆ ಕೆಲವರನ್ನು ದೂರವಿದ್ದು ತಿಳಿಯಬೇಕು. ಕೆಲವರನ್ನು ಒಡನಾಡಿ ತಿಳಿಯಬೇಕು, ಮತ್ತೆ ಕೆಲವರನ್ನು ದೂರವಿದ್ದು ತಿಳಿಯಬೇಕು. ತಿಳಿದ ನಂತರ ನಮ್ಮದೇ ದಾರಿಯಲ್ಲಿ ಸಾಗಬೇಕು. ನೀವು ಹಗೆ ಸಾಧಿಸಿಲ್ಲ ಯಾರ ಮೇಲು ಅಂದಾಗಲೂ ನಿಮ್ಮ ಮೇಲೆ ಹಗೆ ಸಾಧಿಸುವವರು ಇದ್ದೇ ಇರುತ್ತಾರೆ. ನಿಮಗೆ ಅದು ತಿಳಿದಿದೆ ಎಂದಾದರೆ ನಿಮ್ಮೊಳಗು ಆ ಹಗೆ ಹೊಕ್ಕಲು ಎಂದಿಗೂ ಅವಕಾಶ ನೀಡಬೇಡಿ. ಏಕೆಂದರೆ ನಿಮ್ಮ ಗಮನ ನಿಮ್ಮ ಬೆಳವಣಿಗೆ ಕುರಿತಾಗಿ ಇರಬೇಕೆ ಹೊರತು ಯಾರು ನನ್ನನ್ನು ಪ್ರೀತಿಸುತ್ತಾರೆ, ಯಾರು ನನ್ನನ್ನು ದ್ವೇಶಿಸುತ್ತಾರೆ ಎಂಬುದರ ಕಡೆಗಲ್ಲ. ಒಂದು ವೇಳೆ ಅದಕ್ಕೆ ಸಮಯ ಕೊಟ್ಟದ್ದೇ ಆದರೆ ನಿಮಗೆ ನೀವು ಸಮಯ ಕೊಟ್ಟುಕೊಂಡಂತೆ ಆಗುವುದಿಲ್ಲ. ನಾವು ನಮಗಾಗಿ ಜೀವಿಸಬೇಕು. ಇಲ್ಲಿ ಪ್ರೀತಿಸಲು ಸಮಯಕೊಡಲಾಗದಿದ್ದಲ್ಲಿ ದ್ವೇಷಿಸಲಿಕ್ಕೆ ಸಮಯ ನೀಡುತ್ತಿದ್ದೀರಿ ಎಂದಾದರೆ ನೀವು ಪ್ರೀತಿಸುವುದನ್ನು, ಗೌರವಿಸುವುದನ್ನು ಕಲಿತೆ ಇಲ್ಲವೆಂದರ್ಥ. ನಿಮ್ಮನ್ನು ಉದ್ದೇಶಪೂರ್ವಕವಾಗಿ ಯಾರೋ ದ್ವೇಷಿಸುತ್ತಿದ್ದಾರೆ ಎಂದರೆ ನೀವು ಅಕ್ಷರಶಃ ಅವರನ್ನು ಬದಿಗೊತ್ತಿ ಮುಂದೆ ಸಾಗುತ್ತಿದ್ದೀರಿ ಎಂದರ್ಥ.
ಯಾರಾದರೂ ನಿನ್ನನ್ನು ದ್ವೇಷಿಸುತ್ತಿದ್ದಾರೆ ಎಂದರೆ ತಲೆಕೆಡಿಸಿಕೊಳ್ಳದೆ ಖಾಸ ಅದನ್ನು ಒಪ್ಪುತ್ತಲೇ ಮುನ್ನಡಿ. ಯಾಕೆಂದರೆ ನಿನ್ನನ್ನು ದ್ವೇಶಿಸಲು ಶುರು ಮಾಡಿದ್ದಾರೆ ಎಂದರೆ ನೀನು ಅವರನ್ನು ಹತ್ತಿಕ್ಕಿದ್ದೀಯಾ ಎಂದರ್ಥ. ನಮಗೆ ನಾವು ಹೇಗಿದ್ದೇವೆ ಎಂದು ನೋಡಿಕೊಳ್ಳಲು ಕನ್ನಡಿಯ ಸಹಾಯ ಬೇಕು. ಆದರೆ ಮನಸ್ಸಿಂದ ನಾವು ಹೀಗಿದ್ದೇವೆ ಎಂಬುದನ್ನು ಅರಿಯಲು ನಮ್ಮನ್ನ ನಾವು ಅರಿತುಕೊಳ್ಳಲು ಪ್ರಯತ್ನಿಸಬೇಕು. ಏಕೆಂದರೆ ಕನ್ನಡಿ ನಿನ್ನನ್ನ ಕನ್ನಡಿಕರಿಸುವುದಿಲ್ಲ,ಬದಲಿಗೆ ನಿನ್ನ ಪ್ರತಿಬಿಂಬದ ಎರಕವನ್ನೇ ಹೊಯ್ದಿರುತ್ತದೆ. ಹಾಗೆ ಮನಸ್ಸು ನಿನ್ನ ಪ್ರತಿ ಕೆಲಸಗಳನ್ನು ನಿರ್ಧರಿಸುವುದಿಲ್ಲ ನಿನ್ನ ಆಲೋಚನೆಗಳು ಮನಸ್ಸಿಗೆ ಅವುಗಳನ್ನು ಬಿತ್ತುತ್ತವೆ. ಹಗೆ ಸಲ್ಲದು ನಗು ನಡೆ ಮುಂದೆ. ತಿರಸ್ಕರಿಸುವ, ಅಸೂಯೆಪಡುವ, ದ್ವೇಶಿಸುವವರ ನಡುವೆ ಅವರ ಉದಾಸೀನವನ್ನೇ ಆಯುಧವನ್ನಾಗಿಸಿಕೊಳ್ಳಿ. ನಗುವೇ ಇರದವರ ಮೊಗದಲ್ಲಿ ನಗುವಲ್ಲದ ನಗು ಬೀರುವ ಮೋಸದ ನಗು ನಾಚುವಂತೆ ಮನಸಿಂದ ನಗುವ ನಗು ಬೀರಿ ಅರೋಗ್ಯ ಹೆಚ್ಚಿಸಿಕೊಳ್ಳಿ. ನಿನ್ನತನವನ್ನು ಅಹಂ ಎಂದು ಬಿಂಬಿಸಿದವರ ನಡುವೆ ಅದೇ ಅಹಂನನ್ನು ಅಲಂಕಾರವನ್ನಾಗಿಸು ಯಾರು ನಿನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ, ನಿನ್ನ ಸಾಮ್ರಾಜ್ಯದಲ್ಲಿ ನಿನ್ನಂತಯೇ ಬದುಕು ಹಗೆ ಬದಿಗಿಟ್ಟು. ಕೆಲವರು ಯೂಟ್ಯೂಬ್ ಗಿಂತಲೂ ವೇಗವಾಗಿ ಸುದ್ದಿ ಅಪ್ಡೇಟ್ಸ್ ಮಾಡ್ತಾರೆ. ಟಿವಿ 9ಗಿಂತಲೂ ಅಡ್ವಾನ್ಸ್ ಇರ್ತಾರೆ. ಗೂಗಲ್ ಗಿಂತಲೂ ಶರವೇಗದಲ್ಲಿ ಇಲ್ಲದ, ಒಲ್ಲದ, ಅಲ್ಲದ ಸಂಗತಿಗಳನ್ನು ಅರಹುತ್ತಾರೆ. ಉದಯ ಮ್ಯೂಸಿಕ್ ಗಿಂತಲೂ ಸುಂದರವಾಗಿ ಟ್ಯೂನ್ ಹಾಕಿರ್ತಾರೆ. ಅದೆಲ್ಲವೂ ಕಳಕಳಿ ಎಂದು ತಿಳಿಯಬೇಡಿ ಆ ಸಂಗತಿಗಳು ಇರುವ ಸಂಗತಿಗಳಿಗಿಂತ ಭಿನ್ನವಾಗಿ ನಿಮ್ಮನ್ನು ನೋಡುಗರಿಗೆ ಪರಿಚಯಿಸುವಂತೆ ಕೂಡಿರುತ್ತವೆ. ಏಕೆಂದರೆ ನೀವೇ ಭಿನ್ನವಾಗಿರುವಾಗ ಯಾರಿಗೂ ಅರ್ಥವಾಗುವುದಿಲ್ಲ, ಅರ್ಥ ಮಾಡಿಸುವ ಅಗತ್ಯವೂ ನಿಮಗಿಲ್ಲ ಭಿನ್ನವಾಗಿರಬೇಕು ಎಷ್ಟು ಎಂದರೆ ನಿಮ್ಮನ್ನು ಅರ್ಥ ಮಾಡಿಕೊಳ್ಳಲಾಗದಷ್ಟು. ಯಾರೋ ವಲ್ಲದ ಸಂಗತಿಗಳನ್ನು ಮನಸಲ್ಲಿಟ್ಟುಕೊಂಡು ನಿಮ್ಮನ್ನು ದ್ವೇಷದಿಂದಲೇ ನೋಡುತ್ತಾರೆ ಎಂದರೆ ನೀವದರ ಕಡೆಗೆ ಎಂದಿಗೂ ಗಮನಹರಿಸಬೇಡಿ. ಏಕೆಂದರೆ ಕಲಹವೇ ಕೇಡಿಗೆ ಮೂಲ. ನಮ್ಮನ್ನು ನಾವು ಕೆಡುವಂತೆ ಮಾಡುವುದೇ ಈ ಕಲಹ ಹಾಗಾಗಿ ಅದನ್ನು ತೊರೆದು ಸಾಗಬೇಕು.
ಡಾ ಮೇಘನ ಜಿ
ಉಪನ್ಯಾಸಕರು