ದೇವರು ನಗುತ್ತಿದ್ದಾನೆ
ಓ ಸ್ವಾರ್ಥಿ ಮನುಜ
ಎಲ್ಲವೂ ನನ್ನದೇ ,
ಎಲ್ಲದಕ್ಕೂ ನನ್ನದೇ ಯಜಮಾನಿಕೆ
ಎಂದು ಹಲುಬುತ್ತಿರುವ ನೀನು
ಹರಿವ ನದಿಯ ನೀರ ನೀನೊಬ್ಬನೇ ಕುಡಿಯಲಾಗುವುದೇ ?
ಬೀಸುವ ಗಾಳಿಯ
ನೀನು ಹಿಡಿದಿಡಲು ಆಗುವುದೇ ?
ದೇವರು ಕೊಟ್ಟ ಸುಂದರ ಪ್ರಕೃತಿ
ಹರಿವ ನೀರು ,ಸುಂದರ ಪರಿಸರ
ಬೀಸುವ ಗಾಳಿ
ನಿನ್ನ ಸ್ವಾರ್ಥಕ್ಕೆ ಬಲಿಯಾಗುತ್ತಿವೆ ;
ನಾನು, ನನ್ನ ಕುಟುಂಬ , ಎಲ್ಲವೂ ನನ್ನದೇ ಎನುವ
ನಿನ್ನ ಹುಚ್ಚು ತನಕೆ ದೇವರು
ನಗುತಿದ್ದಾನೆ…
ನಿನ್ನ ರಾಕ್ಷಸ ರೂಪಕೆ
ನಿನ್ನ ನರಿ ಬುದ್ದಿಗೆ
ಪಶು ಚರ್ಮ ಹೊದ್ದ ಮೃಗತನಕೆ,
ಬಣ್ಣ ಬದಲಾಯಿಸುವ ಗೋಸುಂಬೆ ತನಕೆ
ದೇವರು ನಗುತ್ತಿದ್ದಾನೆ…
ಮಾನವ ರೂಪದ ಸ್ವಾರ್ಥ ರಾಕ್ಷಸ
ನೀನೆಷ್ಟು ದಿನ ಬದುಕುವೆ ?
ನೂರು ,ಇನ್ನೂರು ,ಮುನ್ನೂರು ವರ್ಷಗಳು..ಬದುಕುವ ಆಸೆಯೇ ನಿನಗೆ !!!
ಯಾರದೋ ಅನ್ನ ಕಿತ್ತು ತಿಂದ
ದೇವರು ಕೊಟ್ಟ ಪರಿಸರ ದೋಚಿದ
ನೀನು ,ನಿನ್ನ ಕುಟುಂಬ , ಮಕ್ಕಳು
ಮೊಮ್ಮಕ್ಕಳಿಗಾಗಿ ಎಲ್ಲವನ್ನೂ ದೋಚಿದ
ನಿನಗೆ ಮುಗ್ಧ ಜನರ ಶಾಪವಿದೆ
ದೇವರ ಆಕ್ರೋಶವಿದೆ…
ನಡೆ ನುಡಿಯಲ್ಲಿ ಆದರ್ಶದ ಮಂತ್ರ
ಯಾರದೋ ಪಾಲು ಕಿತ್ತು ತಿನ್ನುವ ಕುತಂತ್ರ
ನಾನು, ನನ್ನದೇ ಎಂಬ ಹುಚ್ಚುತನ
ಇನ್ನೊಬ್ಬರ ಕಾಲೆಳೆಯುವ ಭಟ್ಟಂಗಿತನ
ಶಾಪವಾಗಿ ನಿನ್ನನು ಕಾಡಲಿದೆ ;
ಓ ಮಾನವೀಯತೆಯ ಶತ್ರುವೇ
ಈಗಲಾದರೂ ಬದಲಾಗು
ಇಲ್ಲವೇ ಶಾಪಕ್ಕೆ ಗುರಿಯಾಗು..
ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು
ಮೈಸೂರು