ರೈಲು ನಿಲ್ದಾಣದಲ್ಲಿ
ತುಂಟ ನಿಹಾಲ್ ನನ್ನು ಇಂದು
ರೈಲು ನಿಲ್ದಾಣಕ್ಕೆ ಕರೆದೊಯ್ದಾಗ
ಅವ ಕೇಳಿದ ಪ್ರಶ್ನೆಗೆ ಸುಸ್ತೋ ಸುಸ್ತು!
ದಾರಿಯಲ್ಲಿ ಸಿಕ್ಕ ಕುದುರೆ ಟಾಂಗಾ
ನೋಡಿ ಕುದುರೆಯನ್ನು ಮುಟ್ಟಿದ್ದೇ ಮುಟ್ಟಿದ್ದು!
ಆ ಖುಷಿ ಕುದುರೆ ಮಾಲೀಕನಿಗೂ ಸಿಕ್ಕಿದೆಯೋ ಇಲ್ಲವೋ ದೇವನೇ ಬಲ್ಲ !
ಅವನಿಗಂತೂ ಖುಷಿಯಾಗಿತ್ತು.
ಆಗ ನನಗನಿಸಿದ್ದು
ಚಿಕ್ಕ ಚಿಕ್ಕ ಸಂಗತಿಗಳು ನೀಡುವ ಖುಷಿ
ಕೋಟಿ ಕೋಟಿ ಕೊಟ್ಟು ಖರೀದಿಸುವ ವಸ್ತುವಿನಲ್ಲಿಲ್ಲವಲ್ಲಾ ಎಂದು!
ನಿಲ್ದಾಣ ಪ್ರವೇಶಿಸಿದಾಗ ಅವ ಕೇಳಿದ ಪ್ರಶ್ನೆ
ಮಾಮಾ ,
ರೈಲು ಇಲ್ಲಿ ಏಕೆ ನಿಂತಿದೆ?
ಜೀವನ ಪಯಣವೆಂಬ ರೈಲಿನಲಿ
ಚಲಿಸುತ್ತಿರುವ ನಮ್ಮ ಜೀವನವು
ಒಮ್ಮೆ ನಿಲ್ಲುತ್ತದೆ ಪುಟ್ಟಾ!
ಹಾಗಾಗಿ ಅದು ತನ್ನ ಕೆಲಸ ಮುಗಿಸಿ ನಿಂತಿದೆ ಎಂದೆ.
ನಿಮಿಷ ಕಳೆಯುವಷ್ಟರಲ್ಲಿ
ಅಂವಾ ರೈಲು ಇನ್ನೂ
ಯಾಕೆ ಬರಲಿಲ್ಲ ಮಾಮಾ ?
ಎಂದು ಕೇಳಿದ.
ಜೀವನ ಪಯಣವೆಂಬ ರೈಲಿನಲಿ
ಕೆಲವೊಮ್ಮೆ ನಮ್ಮ ಭಾಗ್ಯದಲ್ಲಿಲ್ಲದ ವಸ್ತುಗಳ
ನಿರೀಕ್ಷೆಯಲ್ಲಿದ್ದಾಗ
ಅವು ಬಾರದೇ ಹೋದಾಗ
ನಮ್ಮ ರೈಲು ಬಂದಿಲ್ಲವೆಂದೇ ತಿಳಿಯಬೇಕು !
ಸಮಯ ಬಂದಾಗ
ನಮ್ಮ ಬದುಕಿನ
ರೈಲು ಬಂದೇ ಬರುತ್ತದೆ
ಅದಕಾಗಿ ಕಾಯಬೇಕು ಎಂಬ ತತ್ವ ತಿಳಿಸಿದೆ.
ಸದ್ದುಗದ್ದಲದ ನಡುವಿನ ಅವನ
ನಿಲ್ದಾಣದಲ್ಲಿನ ಓಡಾಟ
ನನ್ನ ಬದುಕೆಂಬ ರೈಲಿನ ಓಡಾಟಕ್ಕೆ
ಬೆಳಕ ತೋರಿಸಿತು.
ಪ್ರೊ. ಶಿವಕುಮಾರ ಕೋಡಿಹಾಳ, ಮೂಡಲಗಿ