ಸಿದ್ಧೇಶ್ವರ ಶ್ರೀಗಳ ಕಳೆದುಕೊಂಡು ಜನ ಅನಾಥರಾಗಿದ್ದಾರೆ- ಈರಣ್ಣ ಕಡಾಡಿ

Must Read

ಮೂಡಲಗಿ: ಶತಮಾನದ ಸಂತ ನಡೆದಾಡುವ ದೇವರು ಎಂದೇ ಪ್ರಖ್ಯಾತರಾದ ಸಿದ್ದೇಶ್ವರ ಶ್ರೀಗಳ ಬದುಕು ನಾಡಿನ ಮುನಿ ಪರಂಪರೆಗೆ ಆದರ್ಶ ಪ್ರಾಯವಾದದ್ದು, ದೇಶದ ಜನ ದಿವ್ಯ ಜ್ಯೋತಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಜನರು ಅವರಲ್ಲಿ ದೇವರನ್ನು ಕಾಣುತ್ತಿದ್ದರು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಬುಧವಾರ ಮಾ-15 ರಂದು ವಡೇರಹಟ್ಟಿ ಗ್ರಾಮದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಶ್ರೀ ಮಠದಲ್ಲಿ ಸಿದ್ದೇಶ್ವರ ಮಹಾಸ್ವಾಮಿಗಳ ನುಡಿ ನಮನ ಕಾರ್ಯಕ್ರಮದಲ್ಲಿ “ಹರ ಮುನಿದರೆ ಗುರು ಕಾಯುವನು” ಎಂಬ ಚಿಂತನಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಮನುಷ್ಯ ತನ್ನ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಗುರುವಿನ ಅನುಗ್ರಹದಿಂದ ಮಾತ್ರ ಸಾಧ್ಯ. ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ತಮಸೋಮಾ ಜ್ಯೋತಿರ್ಗಮಯ ಎಂಬ ವಾಣಿಯಂತೆ ಅಜ್ಞಾನವೆಂದ ಅಂಧಃಕಾರ ತೊಲಗಿಸಿ ಸುಜ್ಞಾನದ ಬೆಳಕಿನಡೆಗೆ ಕರದೊಯ್ಯುವವನೆ ಗುರು ಎಂದರು.

ಸಿದ್ದೇಶ್ವರ ಸ್ವಾಮೀಜಿಗಳು ಕೂಡ ತಮ್ಮ ಪ್ರವಚನಗಳ ಮೂಲಕ ಜಗದೋದ್ಧಾರಕ್ಕಾಗಿ ಶ್ರಮಿಸಿದ ಅವರ ಸೇವೆ ಅಮೋಘವಾದದ್ದು ಎಂದು ಶ್ಲಾಘಿಸಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಾಗ ಮೋದಿಯವರನ್ನು ನೋಡುವುದೇ ಸೌಭಾಗ್ಯ, ಇಂತಹ ಪ್ರಧಾನಿ ದೊರೆತದ್ದು ದೇಶದ ಸೌಭಾಗ್ಯ ದೇಶಕಂಡ ಬಹಳ ಅಪರೂಪದ ಪ್ರಧಾನಿ ಎಂದು ಹೊಗಳಿದ ಪ್ರಸಂಗವನ್ನು ನೆನಪಿಸಿದ ಸಂಸದ ಕಡಾಡಿ ಅವರು ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದರು.

ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಗುರುಪ್ರಸಾದ ಮಹಾಸ್ವಾಮಿಗಳು, ಹುಣಶ್ಯಾಳ ಪಿಜಿ ಗ್ರಾಮದ ಸಿದ್ದಲಿಂಗ ಕೈವಲ್ಯಾಶ್ರಮದ ಪೂಜ್ಯ ಶ್ರೀ ನಿಜಗುಣದೇವರು, ವಿಜಯಪುರ ಜ್ಞಾನ ಯೋಗಾಶ್ರಮದ ಪೂಜ್ಯ ಶ್ರೀ ಸಂಗಮೇಶ ದೇವರು ಸಾನಿಧ್ಯ ವಹಿಸಿದ್ದರು. ಗೋಪಾಲ ತೋಳಮರಡಿ, ಮಡ್ಡೆಪ್ಪಾ ಗಿಡೋಜಿ, ಸಿದ್ದಪ್ಪ ಪೂಜೇರಿ, ಲಕ್ಷ್ಮಣ ಮಳಿವಡೇರ ಸೇರಿದಂತೆ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

Latest News

ಲೇಖನ : ಒತ್ತಡದ ಬದುಕಿಗೆ ನೆಮ್ಮದಿಯ ಔಷಧಿ

ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ನಮ್ಮ ಹಿಂದಿನ ಹಿರಿಯರು ಪಡುತ್ತಿದ್ದ ಶ್ರಮಜೀವನ ಈಗಿಲ್ಲ. ಆದರೂ ವರ್ಗ ವಯಸ್ಸು ಲಿಂಗಭೇದವನ್ನು ಲೆಕ್ಕಿಸದೇ ದಿನದಿಂದ ದಿನೇ ಒತ್ತಡ ಹೆಚ್ಚುತ್ತಲೇ ಇದೆ. ಶಾಂತವಿರಬೇಕೆನ್ನುವ...

More Articles Like This

error: Content is protected !!
Join WhatsApp Group