ಬೆಳಗಾವಿ – ಕವನಗಳು ಕವಿಯ ಭಾವಗಳು ಮತ್ತು ನೈಜತೆ ಪರಿಸ್ಥಿತಿಗಳನ್ನು ಹೊರಹೊಮ್ಮಿಸುವ ಜೀವಂತ ಪದಗಳಾಗಿವೆ. ಆಧುನಿಕತೆಯ ಭರಾಟೆಯಲ್ಲೂ ಭಾವನೆಗಳಿಗೆ, ಸಂಸ್ಕೃತಿ, ಸಂಸ್ಕಾರ ಬೆಳೆಸುವ ಎಲ್ಲಾ ವಯೋಮಾನದವರ ದುಗುಡ, ತುಮುಲ, ಆತಂಕ,ಸಂತೋಷ, ದುಃಖ ಹೀಗೆ ಎಲ್ಲವೂಗಳನ್ನು ಒಳಗೊಂಡಿರುವ ಕವನಗಳನ್ನು ಓದಿ ಅದರ ಸಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಷ್ಟು ಸಾರ ಕವಿತೆಗಳು ಹೊಂದಿರುತ್ತವೆ ಎಂದು ಜಲತ್ ಕುಮಾರ ಪುಣಜಗೌಡ ಹೇಳಿದರು.
ಶನಿವಾರ ದಿ. 11 ಬೆಳಗಾವಿಯ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬೆಳಗಾವಿ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳ ವಿ. ಕೆ. ಗಿರಿಮಲ್ಲನವರ, ಸುಮಿತ್ರಾ ಕರವಿನಕೊಪ್ಪ, ಪಾರ್ವತಿ ತುಪ್ಪದ,ಡಾ. ಭವ್ಯಾ ಸಂಪಗಾರ, ಸುನೀಲ ಪರೀಟ,ಲಾವಣ್ಯಾ ಅಂಗಡಿ ಸೇರಿದಂತೆ 20ಕ್ಕೂ ಹೆಚ್ಚು ಕವಿಗಳು ಕನ್ನಡ ನಾಡು-ನುಡಿ, ತಾಯಿ, ಮಾನವೀಯ ಸಂಬಂಧಗಳು, ಸಮಾನತೆ, ನಡೆ-ನುಡಿ,ಮೌಲ್ಯಗಳುಕುರಿತಾದ ಅನೇಕ ಕವನಗಳನ್ನು ವಾಚನ ಮಾಡಿದರು.
ಸಾಹಿತಿ ಜಯಶೀಲಾ ಬ್ಯಾಕೋಡ ಅಧ್ಯಕ್ಷತೆ ವಹಿಸಿ ಮಾತನಾಡಿ ಮನಗಳನ್ನು ತಣಿಸುವ ಇಂತಹ ಕಾರ್ಯಕ್ರಮಗಳು ಆಗಾಗ ನಡೆಯಲಿ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಯ. ರು. ಪಾಟೀಲ, ಬಿ. ಕೆ. ಮಲಾಬಾದಿ,ಬಿ. ಬಿ. ಮಠಪತಿ, ಜ್ಯೋತಿ ಬದಾಮಿ, ರುದ್ರಾಂಬಿಕ ಯಾಳಗಿ, ಸಂಗಮೇಶ ಅರಳಿ, ವೀರಭದ್ರ ಅಂಗಡಿ, ಎಸ್. ಎಸ್. ಗಡದವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಕಾರ್ಯದರ್ಶಿ ಎಂ. ವೈ. ಮೆಣಸಿನಕಾಯಿ ಸ್ವಾಗತಿಸಿ ಪರಿಚಯಿಸಿದರು. ಡಾ ಹೇಮಾ ಸೋನೋಳ್ಳಿ ನಿರೂಪಿಸಿದರು. ಶಿವಾನಂದ ತಲ್ಲೂರ ವಂದಿಸಿದರು.

