ಸಾವಿತ್ರಿಬಾಯಿ
ಅಕ್ಷರದವ್ವ
ಸಾವಿತ್ರಿಬಾಯಿ
ಶಾಲೆಯ ತೆರೆದಾಳ
ಅಕ್ಷರದ ಅರಿವಿನ
ಬೀಜವ ಬಿತ್ತುತ
ಹೆಸರನು ಪಡೆದಾಳ
ಹೆಣ್ಣುಮಕ್ಕಳ ಸಾಕ್ಷರ ಮಾಡ್ಯಾಳ //
ಸತ್ಯಶೋಧಕ
ಸಮಾಜ ಕಟ್ಟಿದ
ಪತಿ ಸಹಕಾರ ಪಡೆದಾಳ
ಹದಿನಾರು ಕಡೆಯಲಿ
ಶಾಲೆಯ ತೆರೆದು
ಶೋಷಣೆ ತೊಡೆದಾಳ
ಜನರಿಗೆ ಅರಿವನು ನೀಡ್ಯಾಳ //
ಭಾರತ ದೇಶದ
ಪ್ರಥಮ ಶಿಕ್ಷಕಿ
ಪದವಿಯ ಪಡೆದಾಳ
ಅಕ್ಷರ ದೀವಿಗೆ
ಜ್ಯೋತಿಯ ಬೆಳಗಿ
ಬೆಳಕನು ಹರಡ್ಯಾಳ
ಹೆಣ್ಣುಮಕ್ಕಳ ಬಾಳ್ವೆಯ ಬೆಳಗ್ಯಾಳ//
ಕಷ್ಟದ ಜೊತೆಯಲಿ
ಅವಮಾನ ಅಪಮಾನ
ಮೆಟ್ಟಿ ನಿಂತಾಳ
ಸ್ವಾಭಿಮಾನದ
ಹೆಜ್ಜೆಯನಿಕ್ಕುತ
ಶ್ರಮವಹಿಸಿ ದುಡಿದಾಳ
ಜಗದಲಿ ಮೊದಲಿಗಳಾಗ್ಯಾಳ //
ಸಾತಾರ ಜಿಲ್ಲೆ
ಖಂಡಾಲ ತಾಲೂಕ
ನಯಿಗಾಂವದಿ ಹುಟ್ಯಾಳ
ಇತಿಹಾಸ ಮರೆಯದ
ಕಾರ್ಯವ ಮಾಡುತ
ಪತಿ ಜೊತೆ ನಡೆದಾಳ
ಮೌಲ್ಯದ ಜೀವನ ಸವೆಸ್ಯಾಳ //
ಅಕ್ಷರದವ್ವ
ಮಹಾನ್ ತಾಯಿ
ಮನದಾಗ ಉಳಿದಾಳ
ಶಿಕ್ಷಣ ಜ್ಯೋತಿಯ
ಕಿರಣವ ಹರಡಿ
ಜಾಗೃತಿಗೊಳಿಸ್ಯಾಳ
ಭುವಿಯಲಿ ಹೆಸರನ್ನು ಉಳಿಸ್ಯಾಳ //
ಹಕ್ಕಿ-ಮರಿ
ಬದುಕಿಗಾಗಿ ಅಕ್ಕಿ ತಿಂದು
ಕಡ್ಡಿಗಳ ಹೆಕ್ಕಿ ತಂದು
ಹಕ್ಕಿಗೂಡು ಕಟ್ಟಿತೊಂದು
ಹಳ್ಳಿ-ಪಕ್ಕ ಮರದಲೊಂದು ||
ಒಲವಿನಿಂದ ಬಂದ ಹಕ್ಕಿ
ಪ್ರೇಮದಿಂದ ಮೈ ನೆಕ್ಕಿ
ಹಾಡು-ಹಾಡಿ ಮಿಲನ ರುಚಿ
ಪಡೆದವಲ್ಲಿ ಜೋಡಿಹಕ್ಕಿ ||
ಮಿಲನದಿಂದ ಗರ್ಭಧರಿಸಿ
ತತ್ತಿಗಳನು ಇರಿಸಿತು
ತತ್ತಿ ಮೇಲೆ ಪುಕ್ಕವಿರಿಸಿ
ಕುಳಿತು ಕಾವು ಕೊಟ್ಟಿತು||
ಮರಿಗಾಗಿ ಹಗಲಿರುಳು
ಹಕ್ಕಿ ಕಾಯ್ದು ಕುಳಿತಿತು
ಕಾವು ಉಂಡ ತತ್ತಿಯೊಡೆದು
ಮರಿಯಾಗಿ ಜನಿಸಿತು ||
ಪುಟ್ಟ ಮರಿಯ ಮೊಗವ ಕಂಡು
ಹಕ್ಕಿ ಅಮ್ಮ ಕುಣಿಯಿತು
ಚಿಂವ್ ಚಿಂವ್ ಶಬ್ದವನು
ಕೇಳಿ ಖುಷಿಯ ಪಡೆಯಿತು ||
ಕಾಡು-ಮೇಡು ಸುತ್ತಿ ಅಮ್ಮ
ಕಾಳು-ಕಡಿಯ ತಂದಿತು
ಉಣಿಸಿ ತಿನಿಸಿ ಹಕ್ಕಿಯಮ್ಮ
ಚಂದ ಸಾಕಿ ಬೆಳೆಸಿತು||
ಪುಕ್ಕ ಬಲಿತ ಮರಿಗೆ ಅಮ್ಮ
ಹಾರುವುದನ್ನು ಕಲಿಸಿತು
ತಾಯಿ ಜೊತೆ ಸೇರಿ ಸುಮ್ಮ
ಮರಿ ಪ್ರಪಂಚ ನೋಡ ಹೊರಟಿತು||
ರಚನೆ : ಮಹಾಂತೇಶ ಎಲ್ ತ್ಯಾಪಿ
( ಶಿಕ್ಷಕರು ಚೈತನ್ಯ ಶಾಲೆ ನಾಗನೂರ )