ಧ್ಯಾನದಿಂದಲೇ ಕವಿತೆ ಅರಳಲು ಸಾಧ್ಯ-ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಡಾ. ಪ್ರಕಾಶ್ ಖಾಡೆ

Must Read

ಸವದತ್ತಿ: ಕವಿಯಾದವನಿಗೆ ಸಮಾಜವನ್ನು ಸೂಕ್ಷ್ಮವಾಗಿ ಅವಲೋಕಿಸುವ ದೃಷ್ಟಿಕೋನವಿರಬೇಕು. ಧ್ಯಾನದಿಂದಲೇ ಕಾವ್ಯ ಕುಡಿಯೊಡೆಯಲು ಸಾಧ್ಯ ಎಂದು ಬಾಗಲಕೋಟೆಯ ಹಿರಿಯ ಕವಿ, ಕಥೆಗಾರ ಡಾ. ಪ್ರಕಾಶ್ ಜಿ. ಖಾಡೆ ಹೇಳಿದರು.

ಅವರು ಸವದತ್ತಿಯ ಡಿ. ದೇವರಾಜ್ ಅರಸು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಸಹೃದಯ ಸಾಹಿತ್ಯ ಪ್ರತಿಷ್ಠಾನ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕವಿತೆ ಎಂಬುದು ಶೃದ್ಧೆ, ತಪಸ್ಸು, ದೀರ್ಘ ಓದಿನ ಮೂಲಕ ಒಲಿಯುತ್ತದೆ. ಸುತ್ತಮುತ್ತಣ ಸಂಗತಿಗಳಿಗೆ ಸ್ಪಂದಿಸುವ ಹೊಣೆಗಾರಿಕೆಯನ್ನು ಕವಿ ಹೊಂದಿರಬೇಕು. ಇಂದು ಓದಿದ ಎಲ್ಲ ಕವಿತೆಗಳು ವಿಭಿನ್ನ ವಿಷಯಗಳನ್ನು ಪ್ರತಿಬಿಂಬಿಸುತ್ತಿದ್ದು, ಕವಿಯ ಬದ್ಧತೆ, ಜವಾಬ್ದಾರಿಗೆ ಸಾಕ್ಷಿಯಾಗುವಂತಿದ್ದವು. ಕಾವ್ಯದ ಗುಣಲಕ್ಷಣಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಧ್ಯಯನ ಮಾಡುವುದರ ಮೂಲಕ ಯುವಕವಿಗಳು ಉತ್ತಮ ಕವಿತೆಯ ರಚನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಹೇಳಿದರು. 

ಕವಿಗೋಷ್ಠಿಯ ಆಶಯ ನುಡಿಗಳನ್ನಾಡಿದ ಬೈಲಹೊಂಗಲ ಕಸಾಪ ಘಟಕದ ಅಧ್ಯಕ್ಷ ಎನ್. ಆರ್ ಠಕ್ಕಾಯಿ ಅವರು ಕಾವ್ಯದ ಮೂಲ ಆಶಯ ಮನುಷ್ಯ ಪ್ರೀತಿ ಮತ್ತು ಮಾನವೀಯತೆ. ಕವಿತೆ ಆತ್ಮತೃಪ್ತಿಯ ಜೊತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ಕೊಡಬೇಕು. ಸದಾ ಒಳಿತನ್ನು ಬಯಸುವ ಕವಿ ಮನಸ್ಸು ಮಾತ್ರ ಶ್ರೇಷ್ಠ ಕಾವ್ಯ ಸೃಜಿಸಲು ಸಾಧ್ಯ ಎಂದರು.

ಪ್ರತಿಷ್ಠಾನದ ಕಾರ್ಯ ವೈಖರಿ ಕುರಿತು ಅಧ್ಯಕ್ಷ ನಾಗೇಶ್ ಜೆ. ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಆರ್. ಎಸ್. ಪಾಟೀಲ, ಬೆಳಗಾವಿಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ವಿಠಲ ತಡಸಲೂರ, ನಿಲಯಪಾಲಕ ಹಾಶೀಮ್ ತಹಶೀಲ್‍ದಾರ, ಗಜಲ್ ಕವಿ ಅಲ್ಲಾಗಿರಿರಾಜ್ ಕನಕಗಿರಿ, ಮಾಜಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮೋಹನ ಪಾಟೀಲ ಉಪಸ್ಥಿತರಿದ್ದರು. 

ದಾವಣಗೆರೆ ಜಿಲ್ಲೆಯ ರೇವಣಸಿದ್ದಪ್ಪ ಜಿ. ಆರ್. ಬೆಳಗಾವಿಯ ರಮೇಶ ಮಡಿವಾಳರ, ರಾಯಭಾಗದ ಸಾಗರ ಝೆಂಡೆನ್ನವರ ರಚಿಸಿದ ಕವಿತೆಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ನೀಡಿ ನಗದು ಪುರಸ್ಕಾರಗಳಿಂದ ಗೌರವಿಸಲಾಯಿತು. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಎಸ್. ನಾಗಪ್ರಸಾದ್, ಮಹಾಂತೇಶ ಕಮತ, ರತ್ನಾ ರಾಯಚೂರಕರ್, ಸರಸ್ವತಿ ಬನ್ನಿಗಿಡದ, ಸುಖದೇವಾನಂದ ಚವತ್ರಿಮಠ, ಬಸವರಾಜ ಗುಡೆನ್ನವರ, ಪ್ರಶಾಂತ ಪಾಟೀಲ, ಶಿವಾನಂದ ತೋರಣಗಟ್ಟಿ, ಅಯ್ಯಪ್ಪ ಕಂಬಾರ, ಶಕುಂತಲಾ ನಾಯಕ, ರಂಜಿತಾ ಮಹಾಜನ, ಕಿರಣ ಯಲಿಗಾರ, ಜ್ಯೋತಿ ಸಿ. ಎಂ, ಸಂತೋಷ ಹುಬ್ಬಳ್ಳಿ, ರೇವಣಸಿದ್ಧಪ್ಪ ಜಿ. ಆರ್., ಶ್ರೀಶೈಲ ಕಂಬಾರ, ದುಂಡು ಎಮ್. ಪೂಜೇರಿ, ಮಂಜುಳಾ ಎಮ್. ಕಾಡನ್ನವರ, ಶೈಲಜಾ ತಳವಾರ, ಸೌಮ್ಯ ನಾವಲಗಿ, ಚೇತನ್ ಪಕಾಲಿ, ಅನಸೂಯಾ ಮೇಟ್ಯಾಲ, ಸೌಮ್ಯ ಕೋಟಗಿ ಕವಿ-ಕವಯತ್ರಿಯರು ಕವಿತೆ ವಾಚಿಸಿದರು.

ನಾಡದೇವಿಗೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕು. ಜಯಶ್ರೀ ಕೀಲಿ ಹಾಗೂ ಸಂಗಡಿಗರು ಪ್ರಾರ್ಥನೆ ಮಾಡಿದರು. ಸ್ವಾಗತ ಪ್ರವೀಣ ಭೀ. ಶೆಟ್ಟೆಪ್ಪನವರ, ಗ್ರಂಥ ಸಮರ್ಪಣೆ ಎಸ್. ಬಿ. ಗರಗದ, ಎಮ್. ಪಿ. ಪಾಟೀಲ ನಿರೂಪಿಸಿದರು. ಸಂತೋಷ ಹುಬ್ಬಳ್ಳಿ ವಂದಿಸಿದರು. ನಿಲಯದ ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group