ಬೀದರ: ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಕಟಿಸಿದ 2ನೇ ಪಟ್ಟಿ ಕೆಲವರಿಗೆ ನಿರಾಸೆಯಾಗಿದ್ದರೆ, ಮತ್ತೆ ಕೆಲ ಬಿಜೆಪಿ ನಾಯಕರಿಗೆ ಬಂಪರ್ ಹೊಡೆದಿದೆ. ಬೀದರ್ ಕ್ಷೇತ್ರದಿಂದ ಭಗವಂತ್ ಖೂಬಾಗೆ ಟಿಕೆಟ್ ಘೋಷಿಸಲಾಗಿದೆ. ಖೂಬಾಗೆ ಟಿಕೆಟ್ ಕೈತಪ್ಪಿಸಲು ಜಿಲ್ಲೆಯ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಭಾರಿ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು ಈಗ ಖೂಬಾಗೆ ಟಿಕೆಟ್ ಸಿಗುತ್ತಲೇ ಚವ್ಹಾಣ ಅವರ ಆರೋಗ್ಯದಲ್ಲಿ ಏರುಪೇರಾಗಿದೆ !
ಬಿಜೆಪಿ ರಾಜ್ಯ ಅಧ್ಯಕ್ಷರು ಮೊಟ್ಟಮೊದಲ ಬಾರಿಗೆ ಬೀದರ್ ಗೆ ಆಗಮಿಸಿದ ಸಂದರ್ಭದಲ್ಲಿ ವೇದಿಕೆ ಮೇಲೆ ರಾಜ್ಯ ಅಧ್ಯಕ್ಷರ ಕಾಲಿಗೆ ಬಿದ್ದು. ನಮ್ಮ ಜಿಲ್ಲೆಗೆ ಲೋಕಸಭಾ ಟಿಕೆಟ್ ಹೊಸದಾಗಿ ಇರುವ ಅಭ್ಯರ್ಥಿ ಆಯ್ಕೆ ಮಾಡಬೇಕೆಂದು ಪ್ರಭು ಚವ್ಹಾಣ ಮನವಿ ಮಾಡಿಕೊಂಡಿದ್ದರು.
ಭಗವಂತ ಖೂಖಾಗೆ ಟಿಕೆಟ್ ನೀಡುವುದರ ಪರೋಕ್ಷವಾಗಿ ವಿರುದ್ಧ ವ್ಯಕ್ತಪಡಿಸಿದ್ದ ಚವ್ಹಾಣರ ಇಷ್ಟೆಲ್ಲಾ ಪ್ರಯತ್ನದ ನಡುವೆಯೂ ಖೂಬಾಗೆ ಟಿಕೆಟ್ ನೀಡಿರುವುದು ಪ್ರಭು ಚವ್ಹಾಣ್ಗೆ ಬಹುದೊಡ್ಡ ಆಘಾತ ನೀಡಿದೆ. ಇದರಿಂದ ಪ್ರಭು ಚವ್ಹಾಣ್ ಆರೋಗ್ಯ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಗವಂತ್ ಖೂಬಾಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಪ್ರಭು ಚವ್ಹಾಣ್ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಶಾಕ್ ನಡುವೆ ಮುಂಬೈ ಪ್ರವಾಸದಲ್ಲಿದ್ದ ಪ್ರಭು ಚವ್ಹಾಣ್ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ತಕ್ಷಣ ಚವ್ಹಾಣ್ ಅವರನ್ನು ಬಾಂದ್ರಾದಲ್ಲಿರುವ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಾ.ಎಸ್ ಲೋಖಂಡವಾಲಾ ನೇತೃತ್ವದಲ್ಲಿ ಪ್ರಭು ಚವ್ಹಾಣ್ಗೆ ಕಿರು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆಯೆನ್ನಲಾಗಿದೆ. ಸದ್ಯ ಪ್ರಭು ಚವ್ಹಾಣ್ ಆರೋಗ್ಯ ಸ್ಛಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೆ ಜಿಲ್ಲೆಯಾದ್ಯಂತ ಭಾರತೀಯ ಜನತಾಪಕ್ಷದ ಟಿಕೆಟ್ ಯಾರಿಗೆ ಎಂಬ ಕುತೂಹಲ ಮನೆಮಾಡಿತ್ತು. ಯಾಕೆಂದರೆ ಖೂಬಾ ಅವರಿಗೆ ಶತಾಯಗತಾಯ ಟಿಕೆಟ್ ನೀಡಲೇಬಾರದು ಎಂದು ಪ್ರಭು ಚವ್ಹಾಣ ಪಟ್ಟು ಹಿಡಿದಿದ್ದರು. ಇಷ್ಟೆಲ್ಲದರ ನಡುವೆಯೇ ಖೂಬಾ ಟಿಕೆಟ್ ಪಡೆದು ಸಂಭ್ರಮಾಚರಣೆ ಮಾಡಿದ್ದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದಲ್ಲದೆ ಚವ್ಹಾಣ ಅವರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆಯೆಂಬುದು ರಾಜಕೀಯ ಆಡುಂಬೊಲದಲ್ಲಿ ವ್ಯಕ್ತವಾಗುತ್ತಿದೆ.
ವರದಿ: ನಂದಕುಮಾರ ಕರಂಜೆ, ಬೀದರ