ಸಿಂದಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಮೇರೆಗೆ ರಾಜ್ಯದ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಬಗೆಹರಿಸಬೇಕನ್ನುವ ಸದುದ್ದೇಶದಿಂದ ಪ್ರತಿ ಗ್ರಾಪಂವಾರು ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ಅದು ಸದುಪಯೋಗವಾದ ಬಗ್ಗೆ ಮತ್ತು ಸರಕಾರದ ಯೋಜನೆಗಳ ಮಾಹಿತಿ ನೀಡುವ ಶಾಸಕ ನಾನಲ್ಲ ನಿಮ್ಮೆಲ್ಲ ಸೇವಕನಾಗಿ ಸೌಲಭ್ಯ ಕೊಡಿಸುವಲ್ಲಿ ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಸರಕಾರ ಸಾಕಷ್ಟು ಯೋಜನೆಗಳಿಗಾಗಿ ಅನುದಾನ ಮಂಜೂರು ಮಾಡುತ್ತದೆ ಅದು ಸದಪಯೋಗವಾಗಬೇಕೆನ್ನುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಕ್ರಿಯಾಯೋಜನೆ ಮಾಡಿ ಪ್ರಾಥಮಿಕ, ಪ್ರೌಢಶಾಲೆ, ಉರ್ದು ಶಾಲೆಗಳ ಮೂಲಭೂತ ಸೌಲಭ್ಯಗಳಾದ ಶೌಚಾಲಯ, ನೀರು, ಶಾಲಾ ಕಂಪೌಂಡ ಸೇರಿದಂತೆ ಅನೇಕ ಸೌಲಭ್ಯ ಪೂರೈಸಲು ಇಲಾಖಾವಾರು ಸಭೆ ನಡೆಸಿ ಬಂದಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಚಿಕ್ಕಸಿಂದಗಿ, ಓತಿಹಾಳ, ಬೂದಿಹಾಳ, ಬಂದಾಳಗಳ ಜನರ ಮೂಲಭೂತ ಸಮಸ್ಯೆಗಳನ್ನು ಎನ್ಆರ್ಜಿಇ ಯೋಜನೆಯಲ್ಲಿ ನಿರ್ವಹಿಸಬಹುದು ಅದಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ನಿರ್ದೆಶನ ನೀಡಿದರು.
ಕೃಷಿ ಇಲಾಖೆ ಜಿಲ್ಲಾ ನಿರ್ದೇಶಕ ಚಂದ್ರಕಾಂತ ಪವಾರ ಮಾತನಾಡಿ, ಬೇರೆ ಬೇರೆ ರಾಜ್ಯಗಳಿಗೆ ಗುಳೆ ಹೋಗುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರೈತರಿಗೆ ಹಾಗೂ ಮಹಿಳೆಯರು ಸಣ್ಣ ಪುಟ್ಟ ಘಟಕ ಸ್ಥಾಪನೆಗಾಗಿ ಪಿಎಂಎಫ್ಎಂಇ ಯೋಜನೆಗರ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಪ್ರತಿಶತ ೫೦ ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು ಇದರಿಂದ ಜಿಲ್ಲೆಯಲ್ಲಿ ೨೫೦ ಜನರು ಇದರ ಸದುಪಯೋಗ ಪಡೆದುಕೊಂಡು ೧೨೫೦ ಜನರಿಗೆ ಕೆಲಸ ಕೊಟ್ಟಿದ್ದಾರೆ ಕಾರಣ ಅವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಲು ಪ್ರಯತ್ನಿಸಬೇಕು ಎಂದು ಮಾಹಿತಿ ಒದಗಿಸಿದರು.
ಚಿಮ್ಮಲಗಿ ಏತನೀರಾವರಿ ಯೋಜನೆಯ ಕಾಲುವೆ ನಿರ್ಮಾಣ ಅರ್ಧಕ್ಕೆ ನಿಂತು ಹೋಗಿದ್ದು ಅದನ್ನು ಪೂರ್ಣಗೊಳಿಸಲು ಕ್ರಮ ಜರುಗಿಸುವಂತೆ ಪರಶುರಾಮ ದೇವಣಗಾಂವ ವಿನಂತಿಸಿದರು. ಒಟ್ಟು ೩೬ ಕಿಮೀ ಕಾಲುವೆಯಲ್ಲಿ ೧೯ ಕಿಮೀ ಕಾಮಗಾರಿ ಮುಗಿದಿದ್ದು ೧೭ ಕಿಮೀ ಚಿಕ್ಕಸಿಂದಗಿ, ಬಂದಾಳ ಗ್ರಾಮದ ಕೆಲವರು ತಕರಾರು ಮಾಡಿದ್ದು ಅದಕ್ಕೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇಲಾಖೆಯಿಂದಲ್ಲ ಎಂದು ಶಾಸಕರು ವಿವರಿಸಿದರು.
೨೦೧೬ರಲ್ಲಿ ಮಂಜೂರಾದ ನಮ್ಮ ಮನೆ ಯೋಜನೆಯ ಬಿಲ್ ನೀಡುವಲ್ಲಿ ಗ್ರಾಪಂ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಮಹಾದೇವ ಜೋಗುರ ಆರೋಪಿಸಿದರು.
ಜಟ್ಟಿಂಗರಾಯ ಬನ್ನಿಕಟ್ಟಿ ಮಾತನಾಡಿ, ಗ್ರಾಮಗಳಲ್ಲಿ ಚರಂಡಿಗಳು ತುಂಬಿ ತುಳುಕುತ್ತಿದ್ದು ಸ್ವಚ್ಚಗೊಳಿಸಲು ಕ್ರಮ ಜರುಗಿಸುವಂತೆ ಮನವಿ ಮಾಡಿದರೆ, ಮಲ್ಲಿಕಾರ್ಜುನ ಹಿರೇಕುರಬರ ಶಾಲೆಯ ಹೆಣ್ಣು ಮಕ್ಕಳಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.
ಶಿವಾನಂದ ಸಾಲಿಮಠ ಮಾತನಾಡಿ, ಓತಿಹಾಳ ಗ್ರಾಮದಲ್ಲಿ ದನದ ಆಸ್ಪತ್ರೆಯಿದ್ದು ಅದಕ್ಕೆ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳಾದ ಸಿಬ್ಬಂದಿ ಒದಗಿಸುವಂತೆ ಮನವಿ ಮಾಡಿದರು.
ಪ್ರತಿ ಗ್ರಾಪಂಯಲ್ಲಿ ೫ ಸಾವಿರ ಜಾನುವಾರಗಳು ಇರುವ ಬಗ್ಗೆ ಸರ್ವೆ ಮಾಡಿ ಕ್ರಮ ಜರುಗಿಸುವಂತೆ ಶಾಸಕರು ಸೂಚಿಸಿದರು.
ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಗ್ರಾಪಂ ಅದ್ಯಕ್ಷ ಯಮನಪ್ಪ ಹೊಸಮನಿ, ಉಪಾಧ್ಯಕ್ಷೆ ಸರುಬಾಯಿ ನಾಗಾವಿ, ಕೆಡಿಪಿ ಸದಸ್ಯರಾದ ಶಿವಣ್ಣ ಕೊಟಾರಗಸ್ತಿ, ನೂರಹಮ್ಮದ ಅತ್ತಾರ, ಗ್ರಾರೇಂಟಿ ಯೋಜಾ ಪ್ರಾಧಿಕಾರದ ಅದ್ಯಕ್ಷ ಶ್ರೀಶೈಲ ಕವಲಗಿ, ಅಕ್ಷರ ದಾಸೋಹ ಅದಿಕಾರಿ ಅರವಿಂದ ಡೋಣೂರ, ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ಜಿಪಂ ಎಇಇ ಜಿ.ವೈ.ಮುರಾಳ, ಆರ್.ಡ್ಯೂಎಸ್ ಎಇಇ ತಾರಾನಾಥ ರಾಠೋಡ, ಅರಣ್ಯಾಧಿಕಾರಿಗಳಾದ ಇರ್ಶಾದ ನೆವಾರ, ಹಾಗೂ ಬಿರಾದಾರ, ಕೃಷಿ ಅದಿಕಾರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವರ್ತಿ, ಕಾರ್ಯದರ್ಶಿ ಆರ್.ಎನ.ಮುಜಾವರ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ತಾಪಂ ಇಓ ರಾಮು ಅಗ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಕೆ.ಚೌದರಿ ಸ್ವಾಗತಿಸಿದರು. ಚಂದ್ರಕಾಂತ ಬೂಯ್ಯಾರ ನಿರೂಪಿಸಿದರು. ಶಿಕ್ಷಕ ಬಸವರಾಜ ಅಗಸರ ವಂದಿಸಿದರು.