ಸವದತ್ತಿ: ಉತ್ತರ ಕರ್ನಾಟಕವು ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಶತಮಾನಗಳಿಂದಲೂ ಸಮೃದ್ದಿಯಿಂದ ಕೂಡಿದ್ದರೂ, ಕೃಷಿ ಹವಾಮಾನ ಆಧಾರಿತ ವಲಯಗಳ ಅಭಿವೃದ್ಧಿ ಆಗದಿರುವುದರಿಂದ ಇನ್ನೂ ಹಿಂದುಳಿದಿದೆ ಎಂದು ಧಾರವಾಡ ಸಿ.ಎಮ್.ಡಿ. ಆರ್. ಸಂಸ್ಥೆಯ ಸಹ ಪ್ರಾಧ್ಯಾಪಕರಾದ ಡಾ. ಎಸ್. ವ್ಹಿ. ಹನಗೊಡಿಮಠ ನುಡಿದರು.
ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗವು ಏರ್ಪಡಿಸಿದ ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ಹಾಗೂ ಇತ್ತೀಚಿನ ಬೆಳವಣಿಗೆಗಳು ಎಂಬ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಬೇಕಾದರೆ ಡಾ. ಡಿ.ಎನ್ ನಂಜುಂಡಪ್ಪ ವರದಿಯನ್ನು ವೈಜ್ಞಾನಿಕ ಆಧಾರದ ಮೇಲೆ ಜಾರಿಗೆ ತರಬೇಕು. ತಾಲ್ಲೂಕುವಾರು ಕೃಷಿ ಉತ್ಪನ್ನದ ಆಧಾರದ ಮೇಲೆ ಅಭಿವೃದ್ಧಿಗಳು ಜಾರಿಯಾಗಬೇಕು. ನೀರಾವರಿ ಯೋಜನೆಗಳಲ್ಲಿ ಖಾಸಗಿದಾರರಿಗೆ ಪಾಲುದಾರಿಕೆ ನೀಡಬೇಕು, ಪದವಿ ಶಿಕ್ಷಣದಲ್ಲಿ ಕೃಷಿ ಆಧಾರಿತ ವಿಷಯಗಳನ್ನು ಕಲಿಸುವಂತಾಗಬೇಕು. ಸಂಶೋಧನೆ ಆಧಾರಿತ ಸಣ್ಣ ಕೈಗಾರಿಕೆಗಳ ಅಭಿವೃದ್ದಿಯಾಗಬೇಕು ಎಂದು ನುಡಿದರು. ನಂತರದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
ಡಾ. ಅನಿಲಕುಮಾರ ಎಸ್.ಎಚ್. ಅವರು ಧಾರವಾಡದ ಸಾಮಾಜಿಕ-ಆರ್ಥಿಕ ಬೇಳವಣಿಗೆ ಅಧ್ಯಯನ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ವ್ಹಿ. ಎಸ್. ಮೀಶಿ ವಹಿಸಿದ್ದರು, ಸರಸ್ವತಿ ಮಾದರ ಪ್ರಾರ್ಥಿಸಿದರು, ಡಾ.ಎನ್.ಎ.ಕೌಜಗೇರಿ ಸ್ವಾಗತಿಸಿದರು ಮತ್ತು ಅತಿಥಿಗಳನ್ನು ಪರಿಚಯಿಸಿದರು. ವೇದಿಕೆ ಮೇಲೆ ಡಾ. ಅನಿಲಕುಮಾರ ಎಸ್. ಎಚ್. ಸಿದ್ದಪ್ಪ ಸವದತ್ತಿ ಉಪಸ್ಥಿತರಿದ್ದರು. ಪ್ರೊ, ಎಮ್.ಸಿ.ಹಾದಿಮನಿ ವಂದಿಸಿದರು, ಕುಮಾರಿ ಮಮ್ತಾಜ್ ಟಕ್ಕೆದ ಮತ್ತು ಕುಮಾರಿ. ಸವಿತಾ ಗೊಸಲ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು.