ಬೆಂಗಳೂರಿನ ಗಾಂಧಿ ಬಜಾರ್ ನ ಬೆಣ್ಣೆ ಗೋವಿಂದಪ್ಪ ರಸ್ತೆಯ ಸೋಸಲೇ ಶ್ರೀ ವ್ಯಾಸರಾಜ ಮಠದಲ್ಲಿ 7ನೇ ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಪರಮಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥಶ್ರೀಪಾದರು ಸಂಜೆ ನಡೆದ ವಿಶೇಷ ದರ್ಬಾರ್ ನಲ್ಲಿ ಶ್ರೀ ವ್ಯಾಸರಾಜ ಭಕ್ತರ ವಿಶ್ವವೇದಿಕೆಯ ವತಿಯಿಂದ ಪ್ರಕಟವಾಗಿರುವ ಎನ್ಎಪಿಎಸ್ ರಾವ್ ರಚಿಸಿರುವ ‘ಸ್ಟಡೀಸ್ ಆನ್ ಮಾಧ್ವಸ್ ಪಾಂಟಿಫ್ ಲೀನೇಜಸ್’ ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಮಾತನಾಡುತ್ತ ಶ್ರೀ ವ್ಯಾಸತೀರ್ಥರು ಶ್ರೀಮಧ್ವರ ಸಿದ್ಧಾಂತದ ವ್ಯಾಪಕ ಪ್ರಚಾರ ಕಾರ್ಯದಲ್ಲಿ ಅಧ್ವರ್ಯುವಾಗಿ ; ಸಂಗೀತಕ್ಕೊಂದು ಆಯಾಮ ಕಲ್ಪಿಸಿದ ದಾಸಶ್ರೇಷ್ಠರೆಲ್ಲರೂ ವ್ಯಾಸತೀರ್ಥರ ಸನ್ನಿಧಾನ ವಿಶೇಷದಿಂದ ಬಂದವರಲ್ಲದೆ ನಿಜವಾದ ಜಾತ್ಯತೀತ’ರಾಗಿ ಹರಿಪದಗಳನ್ನು ಹಾಡಿ ನಡೆದಾಡಿದವರೆನ್ನಬಹುದು. ಸೋಮನಾಥಕವಿ ಬರೆದಿರುವ ವ್ಯಾಸಯೋಗಿ ಚರಿತ’ವೆಂಬ ಗ್ರಂಥ ವ್ಯಾಸತೀರ್ಥರ ವಾಕ್ಪಟುತ್ವಕ್ಕೆ, ಔದಾರ್ಯಕ್ಕೆ ರಾಜ್ಯಾಡಳಿತದ ಬಗೆಗಿನ ಅಪಾರವಾದ ವಿದ್ವತ್ತಿಗೆ ಹಿಡಿದ ಕನ್ನಡಿಯಾಗಿದೆ ಎಂದು ತಿಳಿಸಿದರು.
ಶ್ರೀ ವ್ಯಾಸರಾಜ ಭಕ್ತರ ವಿಶ್ವವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಡಾ.ನಂದಗುಡಿ ನಾಗೂ ಶ್ರೀನಿವಾಸ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ವೇದಿಕೆಯಲ್ಲಿದ್ದರು.