ಕಲ್ಲೋಳಿ: ತನ್ನ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದಿದ ದಾರ್ಶನಿಕ, ಶ್ರೇಷ್ಠ ಸಂತ, ತತ್ವಜ್ಞಾನಿ ಭಕ್ತ ಕನಕದಾಸ ಜಯಂತಿಯನ್ನು ಗುರುವಾರ ಕಲ್ಲೋಳಿ ಪಟ್ಟಣದ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ, ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಮಾತನಾಡಿ, ಬೆಳೆಯನ್ನು ಬೆಳೆಯಬೇಕಾದರೆ ತೋಟದಲ್ಲಿ ವ್ಯವಸಾಯ ನಿರಂತರವಾಗಿ ನಡೆಯುತ್ತಿರಬೇಕು. ಸತ್ವಪೂರ್ಣ ಬೀಜವನ್ನು ಭೂಮಿಯಲ್ಲಿ ಬಿತ್ತಬೇಕು. ಸಮಯಕ್ಕೆ ಸರಿಯಾಗಿ ಅದಕ್ಕೆ ನೀರನ್ನು ಹಾಯಿಸಬೇಕು. ಪೈರಿಗೆ ರಕ್ಷಣೆಯನ್ನು ಒದಗಿಸಬೇಕು. ನೆಲದಲ್ಲಿ ಹುಟ್ಟುತ್ತಲೇ ಇರುವ ಕಳೆಯನ್ನು ಕಿತ್ತೊಗೆಯಬೇಕು. ಆಗ ಬೆಳೆ ನಮ್ಮ ಕೈ ಹಿಡಿದೀತು; ಫಲ ಕೊಟ್ಟೀತು.
ಸಮಾಜದ ಪ್ರಗತಿಗೂ ಮನುಜನ ಏಳಿಗೆಗೂ ಕಾರಣವಾಗಿರುವುದೇ ‘ಕೃಷಿ’. ನೆಲದಲ್ಲಿ ಭತ್ತ–ರಾಗಿಗಳನ್ನು ಬೆಳೆಯುವುದಷ್ಟೆ ಕೃಷಿಯಲ್ಲ; ಮನದಲ್ಲಿ ಭಕ್ತಿ–ವಿರಾಗಗಳನ್ನು ಬೆಳೆಸಿಕೊಳ್ಳುವುದೂ ಕೃಷಿಯೇ. ಒಂದು ಹೊರಗಿನ ಕೃಷಿ, ಇನ್ನೊಂದು ಒಳಗಿನ ಕೃಷಿ. ಈ ಎರಡರಲ್ಲೂ ಸಮನ್ವಯವನ್ನು ಸಾಧಿಸಿದವನೇ ಋಷಿ. ಇಂಥ ಜ್ಞಾನಿಗಳಷ್ಟೆ ಅಂತರಂಗ–ಬಹಿರಂಗದ ಬಾಳ್ವೆಗೆ ಬೆಳಕಾಗಬಲ್ಲರು. ಕನಕದಾಸರು ಅಂಥ ಜ್ಞಾನಿಗಳು; ಮಾತ್ರವಲ್ಲ, ಸಮಾಜ ಸುಧಾರಕರು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಎಂ.ಬು.ಕುಲಮೂರ, ಡಿ.ಎಸ್.ಹುಗ್ಗಿ, ಭೀಮಪ್ಪ ಮಾಳಿ, ಸಂತೋಷ ಜೋಡಕುರಳಿ, ಸಂತೋಷ ಬಂಡಿ, ಎಂ.ಬಿ. ಜಾಲಗಾರ, ದೈಹಿಕ ನಿರ್ದೇಶಕ ಬಿ.ಕೆ.ಸೊಂಟನವರ, ಗ್ರಂಥಪಾಲಕ ಬಿ.ಬಿ.ವಾಲಿ, ಸಹಾಯಕ ಗ್ರಂಥಪಾಲಕ ರಘುನಾಥ ಮೇತ್ರಿ, ಕಛೇರಿ ಸಿಬ್ಬಂದಿಗಳಾದ ಬಿ.ಎಂ.ಶೀಗಿಹಳ್ಳಿ, ನಿರಂಜನ ಪಾಟೀಲ, ಮಂಜುನಾಥ ಗೊರಗುದ್ದಿ, ಮಹೇಶ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.