ಮೈಸೂರು – ನಗರದ ಹೆಬ್ಬಾಳಿನ 2ನೇ ಹಂತ (ಸಂಕ್ರಾಂತಿ ವೃತ್ತದ ಹತ್ತಿರ) ದಲ್ಲಿರುವ ಹಿರಿಯ ನಾಗರಿಕರ ಸೇವಾ ಸಮಿತಿ ಹಾಗೂ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಇವರುಗಳ ಸಹಯೋಗದಲ್ಲಿ ಶ್ರೀ ನಾರಾಯಣಾಮೃತ ಪ್ರತಿಷ್ಠಾನದ ಸಾಧನಾ ಪ್ರಾಂಗಣದಲ್ಲಿ ಇತ್ತೀಚೆಗೆ ನೂತನ ವರ್ಷಾಚರಣೆ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ‘ಸಂಗೀತ ಲಹರಿ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರಿನ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್ನ ಅಧ್ಯಕ್ಷ ನಾಗರಾಜ ವಿ.ಭೈರಿ ಅವರು ಮಾತನಾಡಿ, ಭಾವುಕರಾಗಿ, ಮೇಲ್ಕಂಡ ಸಂಸ್ಥೆಯವರು ನೂತನ ವರ್ಷ ಹಾಗೂ ಮಕರ ಸಂಕ್ರಾಂತಿಯ ಆಗಮನದ ಶುಭ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ನಮ್ಮ ಬಿ.ಎ.ಐ.ನ ಸದಸ್ಯರುಗಳನ್ನೂ ಸೇರಿಸಿಕೊಂಡಿದ್ದು ಯಾವುದೋ ಜನ್ಮದ ನಮ್ಮ ಪುಣ್ಯವೇ ಇರಬೇಕೆಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ನಾಡಿನ ಹಿರಿಮೆ-ಗರಿಮೆಗಳ ಬಗ್ಗೆ ಪ್ರಸ್ತಾಪಿಸಿದರು. ದಶಕಗಳ ಹಿಂದೆಯೇ ರಸಋಷಿ, ರಾಷ್ಟ್ರಕವಿ ಕುವೆಂಪುರವರು ರಚಿಸಿದ್ದ ಜನಜನಿತವಾದ ‘ಜಯ ಭಾರತ ಜನನಿಯೇ ತನುಜಾತೆ’ ಎಂದು ಆರಂಭವಾಗುವ ಗೀತೆಯನ್ನು ಕರ್ನಾಟಕದ ಘನ ಸರ್ಕಾರವೂ ಸೇರಿ ಸಮಸ್ತ ಕನ್ನಡಿಗರೂ ಅತ್ಯಂತ ಗೌರವಾದರಗಳೊಂದಿಗೆ ನಾಡಗೀತೆಯನ್ನಾಗಿ ಸ್ವೀಕರಿಸಿದ್ದನ್ನು ನೋಡಿದರೆ ಕುವೆಂಪುರವರ ಶ್ರೇಷ್ಠತೆಯನ್ನು ಮನದಟ್ಟು ಮಾಡಿಕೊಡುತ್ತದೆ. ಕುವೆಂಪುರವರು ಒಬ್ಬ ದಾರ್ಶನಿಕರೆಂಬ ಅಂಶವೂ ಪದೇ ಪದೇ ಸ್ಪಷ್ಟವಾಗುತ್ತದೆಂದರು.
ಮತ್ತೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೈಸೂರಿನ ಎಸ್ಜೆಸಿಇ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಹಾಗೂ ಗಾಯಕರಾದ ಪ್ರೊ.ಕೆ.ಎಸ್.ಮಂಜುನಾಥ್ ಅವರು ಮಾತನಾಡಿ, ಬಾಲ್ಯದಿಂದಲೂ ತಮಗಿರುವ ಸಂಗೀತದ ಬಗ್ಗೆ ಪ್ರಸ್ತಾಪಿಸಿ, ತಮ್ಮ ಸೇವಾ ಅವಧಿಯಲ್ಲೂ ಎಲ್ಲಾ ವಯೋಮಾನದವರೊಡನೆ ಸೇರಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ನಿವೃತ್ತಿಯ ನಂತರವಂತೂ ತಮ್ಮ ಇಡೀ ಜೀವನವನ್ನು ಸಂಗೀತಕ್ಕಾಗಿ ಮುಡುಪಾಗಿಡುವುದಾಗಿ ತಿಳಿಸಿದರು.
ಈ ಇಡೀ ಕಾರ್ಯಕ್ರಮದ ಖರ್ಚನ್ನು ಪ್ರಾಯೋಜಿಸಿದ 87 ವರ್ಷ ವಯೋವೃದ್ಧರಾದ ಬಿ.ಎನ್.ಶ್ರೀಕಂಠಯ್ಯನವರನ್ನು ಶ್ಲಾಘಿಸಿ, ಹಿರಿಯ ನಾಗರಿಕ ಸಮಿತಿಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ, ಕೊಡುಗೈ ದಾನಿ ಎ.ಎಸ್.ದೇವರಾಜು ಅವರು ಮಾತನಾಡಿ, ಜೀವನದಲ್ಲಿ ಬಾಲ್ಯದಲ್ಲಿ ತಂದೆ-ತಾಯಿಯರ ಅದರಲ್ಲೂ ತಾಯಿಯ ಪಾತ್ರ, ಪ್ರೌಢಾವಸ್ಥೆಯಲ್ಲಿ ಗುರುಗಳ ಪಾತ್ರ, ವೃದ್ದಾಪ್ಯದಲ್ಲಿ ಭಗವಂತನ ಪಾತ್ರದ ಕೃಪೆಯ ಮಹತ್ವವನ್ನು ವಿವರಿಸಿದರು. ಕಾರ್ಯದರ್ಶಿ ಹೆಚ್.ಎಲ್.ಇಂದಿರೇಶ್ ಬಿ.ಎನ್.ಶ್ರೀಕಂಠಯ್ಯ ಮತ್ತು ಕುಟುಂಬದವರನ್ನು ಹಾಗೂ ಶ್ವೇತ ದಿನೇಶ್ ಹಾಗೂ ಗುರುದತ್ರವರಿಗೆ ವಿಶೇಷ ಧನ್ಯವಾದ ತಿಳಿಸಿದರು. ಇದಾದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿ.ಎ.ಐ.ನ ಸುಮಾರು 12 ಮಹಿಳೆಯರು ಹಾಗೂ ಮಹನೀಯರು ಸುಗಮ ಸಂಗೀತ, ಜಾನಪದ ಸಂಗೀತ ಹಾಗೂ ಕನ್ನಡದ ಹಳೆಯ ಚಲನಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಸಭಿಕರನ್ನು ರಂಜಿಸಿದರು.
ಪ್ರೊ.ಕೆ.ಎಸ್.ಮಂಜುನಾಥ್ರವರು ರಾಷ್ಟ್ರಕವಿ ಕುವೆಂಪು ಹಾಗೂ ಕೆ.ಎಸ್.ಶಿವರುದ್ರಪ್ಪ ರಚನೆಯ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗನ್ನು ನೀಡಿದರು. ಶ್ರೀಮತಿ ಶೀಲಾದತ್ ಪ್ರಾರ್ಥಿಸಿದರೆ, ಸಂಸ್ಥೆಯ ಖಜಾಂಚಿ ಬಿ.ಚೆನ್ನಬಸವಯ್ಯನವರು ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ರೂಪ ರಘುನಾಥ್ ನಿರೂಪಿಸಿದರೆ, ಸಂಘದ ಅಧ್ಯಕ್ಷ ಎ.ಎಸ್.ದೇವರಾಜು ವಂದಿಸಿದರು.