ಬೆಳಗಾವಿ -ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ತ್ಯಾಗದಿಂದ ದುಡಿದ ಜೀವಿಗಳ ಭಾವನೆಗಳನ್ನು ಗೌರವಿಸಿ ಅವರ ಆಗು-ಹೋಗುಗಳಿಗೆ ಊರುಗೋಲಾಗಿ ಸೇವೆ ಮಾಡಿ ಎಂದು ದತ್ತಿನಿಧಿ ಕಾರ್ಯಕ್ರಮದಲ್ಲಿ ಪತ್ರಕರ್ತ ಮುರುಗೇಶ ಶಿವಪೂಜಿ ಅಭಿಪ್ರಾಯಪಟ್ಟರು.
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಲೇಖಕಿಯರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ದಿ. ಸಾವಿತ್ರಿ ಬಾಬುರಾವ್ ಶಿವಪೂಜಿ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದ ಕಾಲದಲ್ಲಿ ಆರೋಗ್ಯ ಸಹಾಯಕಿಯರಾಗಿ ನೂರಾರು ಜೀವಿಗಳಿಗೆ ಜೀವಮಾತೆಯರಾಗಿ ಕೆಲಸ ಮಾಡಿದ ಆರೋಗ್ಯ ಸಹಾಯಕಿಯರ ಸೇವೆ ನಿಜಕ್ಕೂ ಮಾದರಿ. ಅಂತಹವರ ಸಾಲಿನಲ್ಲಿ ನಿಲ್ಲುವ ನಮ್ಮ ತಾಯಿಯಂತಹ ಅನೇಕ ಮಾತೆಯರ ಆರೋಗ್ಯಸೇವೆಯನ್ನು ನಾವೀಗ ನೆನೆಯಬೇಕಿದೆ. ಆ ನಿಟ್ಟಿನಲ್ಲಿ ದಿ. ಸಾವಿತ್ರಿ ಶಿವಪೂಜಿಯವರ ಸ್ಮರಣೆಯಲ್ಲಿ ಇಂದು ಜಿಲ್ಲೆಯ ಕೆಲವು ಹಿರಿಯ ಆರೋಗ್ಯ ಸಹಾಯಕಿಯರನ್ನು ಅವರ ಸೇವೆಯನ್ನು ಗುರುತಿಸಿ ಅವರನ್ನು ಈ ವೇದಿಕೆ ಮೇಲೆ ಗೌರವಿಸಲಾಗುತ್ತಿದೆ ಎಂದು ಜಿಲ್ಲೆಯ 80 ವರ್ಷ ಮೇಲ್ಪಟ್ಟ ಎಂಟು ಜನ ಹಿರಿಯ ಆರೋಗ್ಯ ಸಹಾಯಕಿಯರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೋಳ್ಳಿ ದೇವರನ್ನು ಭಜಿಸುವ ತುಟಿಗಳಿಗಿಂತ ಸಹಾಯಮಾಡುವ ಹಸ್ತಗಳು ಶ್ರೇಷ್ಠ ಇಂತಹ ದಾನಮಾಡುವ ಕೈಗಳು ಹೆಚ್ಚಾಗಲಿ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ ದತ್ತಿನಿಧಿ ಇಡುವುದೇ ಸುಂದರ ಕೆಲಸ. ನಮ್ಮ ಹಿರಿಯರನ್ನು ಕೇವಲ ಮನೆಯ ಸೀಮಿತವಾಗಿ ನೆನೆಯುವಂತಾಗದೆ ಇಂತಹ ಸಾರ್ವಜನಿಕ ವೇದಿಕೆಗಳಲ್ಲಿ ದತ್ತಿನಿಧಿ ಇಡುವ ಮೂಲಕ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ವಿಶೇಷ ಸೇವೆಯನ್ನು ನೆನೆದರೆ ಉತ್ತಮ. ಆ ನಿಟ್ಟಿನಲ್ಲಿ ದತ್ತಿ ನಿಧಿಗಳು ಹೆಚ್ಚಾಗಲಿ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ನೀಲಗಂಗಾ ಚರಂತಿಮಠ ತಾಯಿ ಎಂಬ ಜೀವ ಬಹುಮುಖ್ಯ. ತಾಯಿಯ ಸೇವೆ ಎಲ್ಲಕ್ಕಿಂತಲೂ ಮಿಗಿಲು ಆದರ್ಶಪ್ರಾಯ ತಾಯಿಯನ್ನು ಸದಾ ಗೌರವಿಸೋಣ ಎಂದರು. ಸಾಹಿತಿ ದೀಪಿಕಾ ಚಾಟೆ ಮಾತನಾಡಿ, ಭಾವನೆಗಳು ನಮ್ಮನ್ನು ಸದಾ ಹುರುಪಿನಿಂದ ಇಡುತ್ತವೆ. ಭಾವನಾತ್ಮಕ ಮನಸ್ಸು,ಜೀವನ ಎಲ್ಲರೂ ಅನುಸರಿಸಿ ಬದುಕು ಸುಂದರವಾಗಿಸೋಣ ಎಂದರು. . ಇದೇ ಸಂದರ್ಭದಲ್ಲಿ ಲೇಖಕಿಯರ ಸಂಘದ ಸದಸ್ಯೆಯರಾದ ಸುನಂದಾ ಹಾಲಭಾವಿ, ಮಹನಂದಾ ಪಾರುಶೆಟ್ಟಿ, ಶಾಲಿನಿ ಚೀನಿವಾಲ,ಸುನೀತಾ ನಂದೆ ನ್ನವರ, ಪ್ರಭಾ ಪಾಟೀಲ ರವರಿಂದ ‘ಕವನ ಗಾಯನ’ ಕಾರ್ಯಕ್ರಮ ನಡೆಯಿತು.ಸಂಘದ ವತಿಯಿಂದ ದತ್ತಿ ದಾನಿಗಳಾದ ಮುರುಗೇಶ ಶಿವಪೂಜಿ ಮತ್ತು ಸಂಗೀತಾ ಶಿವಪೂಜಿ ಯವರನ್ನು ಸನ್ಮಾನಿಸಲಾಯಿತು.ಸಾಹಿತಿಗಳಾದ ಜ್ಯೋತಿ ಬದಾಮಿ, ಪತ್ರಕರ್ತೆ ಕೀರ್ತಿ ಕಾಸರಗೋಡು, ವಿದ್ಯಾ ಹುಂಡೇಕರ, ಲೀಲಾ ಚೌಗುಲೆ, ಸುರೇಶ ಜ್ಯೋತಿ, ಜ್ಯೋತಿ ಮಾಳಿ, ಶಿವಾನಂದ ತಲ್ಲೂರ, ಎಂ. ವೈ. ಮೆಣಸಿನಕಾಯಿ, ಶ್ರೀರಂಗ ಜೋಶಿ ಸೇರಿದಂತೆ ಸಾಹಿತ್ಯಾಸಕ್ತರು ಲೇಖಕಿಯರ ಸಂಘದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಲಲಿತಾ ಪರ್ವತ ರಾವ ಪ್ರಾರ್ಥಿಸಿದರು, ಇಂದಿರಾ ಮೋಟೆಬೆನ್ನೂರ ಸ್ವಾಗತಿಸಿದರು. ಕಾರ್ಯದರ್ಶಿ ರಾಜನಂದಾ ಘಾರ್ಗಿ ನಿರೂಪಿಸಿದರು. ಕೊನೆಯಲ್ಲಿ ಸುಧಾ ಪಾಟೀಲ ವಂದಿಸಿದರು.