ಹುನಗುಂದ: ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಹೊಸದಾಗಿ ಒಂದನೇ ತರಗತಿಗೆ ದಾಖಲಾದ 12 ಮಕ್ಕಳನ್ನು ತೆರೆದ ಕಾರಿನಲ್ಲಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಹೆಣ್ಣು ಮಕ್ಕಳು ಕುಂಭ ಹಾಗೂ ಕಳಸದಾರತಿಯೊಂದಿಗೆ ಆಗಮಿಸಿದ್ದರೆ, ಗ್ರಾಮದ ತರುಣರು ಬೈಕ್ ರ್ಯಾಲಿ ಹಾಗೂ ಡೊಳ್ಳು ವಾದನದ ಮೂಲಕ ಮೆರವಣಿಗೆಗೆ ಕಳೆ ತಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ್ ಮಕ್ಕಳಿಗೆ ಕನ್ನಡದ ಪೇಟ ತೊಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲೆಗೆ ಮೊದಲ ದಿನವೇ ಕಾರಿನಲ್ಲಿ ಆಗಮಿಸಿದ ಹೊನ್ನರಹಳ್ಳಿಯ ಮಕ್ಕಳು ಮುಂದೊಂದು ದಿನ ಸರಕಾರಿ ಕಾರಿನಲ್ಲಿ ಓಡಾಡುವಂತಾಗಲಿ ಎಂದು ಹಾರೈಸಿದರು.
ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿರಬೇಕು. ನಿತ್ಯವೂ ಓದು ಬರಹ ಚಟುವಟಿಕೆಗಳನ್ನು ನಿರ್ವಹಿಸಬೇಕು. ಅಂದಂದಿನ ಕಾರ್ಯವನ್ನು ಅಂದೇ ಮುಗಿಸಬೇಕು. ಸರಕಾರಿ ಶಾಲೆಗಳಲ್ಲಿ ಸ್ವಕಲಿಕೆ ಮತ್ತು ಸಂತಸದಾಯಕ ಕಲಿಕಾ ವ್ಯವಸ್ಥೆ ಇದ್ದು ಮಕ್ಕಳ ಸ್ನೇಹಿ ಕಲಿಕಾ ವಾತಾವರಣವಿದ್ದು ಇಲ್ಲಿ ದಾಖಲಾತಿ ಪಡೆದು ಸಂಸ್ಕಾರಯುತ ಶಿಕ್ಷಣ ಪಡೆಯಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಸಮುದಾಯದ ಸಹಭಾಗಿತ್ವ ಬಹಳ ಮುಖ್ಯ. ಇಲ್ಲಿನ ಶೈಕ್ಷಣಿಕ ಕಾಳಜಿಗೆ ಇಲ್ಲಿ ಎರಡೂವರೆ ಲಕ್ಷ ವೆಚ್ಚದಲ್ಲಿ ಪಾಲಕರ ದೇಣಿಗೆಯ ಮೂಲಕ ನಿರ್ಮಿಸಿದ ಊಟದ ಹಾಲ್ ಸಾಕ್ಷಿಯಾಗಿದೆ. ಶಿಕ್ಷಣ ಇಲಾಖೆಯ ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಯು ಇಲ್ಲಿ ಸದ್ದಿಲ್ಲದೆ ಅನುಷ್ಠಾನಗೊಂಡಿದೆ ಎಂದರು.
ತಾಲೂಕ ದೈಹಿಕ ಶಿಕ್ಷಣ ಪರೀವೀಕ್ಷಕ ಎಸ್ ಟಿ ಪೈಲ್, ಸಿಆರ್ಪಿಗಳಾದ ಬಸವರಾಜ ಮುಂಡೇವಾಡಿ, ಲಕ್ಷ್ಮಣ್ ಲಮಾಣಿ, ಎಸ್ಡಿಎಂಸಿ ಅಧ್ಯಕ್ಷ ರಾಮನಗೌಡ ಪವಾಡಿಗೌಡ್ರ, ವೀರಭದ್ರಪ್ಪ ಕೊಳ್ಳೊಳ್ಳಿ, ಸಂಗಪ್ಪ ಈರಣ್ಣವರ, ಮಲ್ಲಿಕಸಾಬ ನದಾಫ, ಗೂಳಪ್ಪ ವಠಾರದ, ಮುಖ್ಯಗುರು ಪ್ರಭು ಮಾಲಗಿತ್ತಿ, ಶಿಕ್ಷಕರು ಭಾಗವಹಿಸಿದ್ದರು.