ಗೋಕಾಕ: ‘ದೇಶದ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ಸಮಾಜದಲ್ಲಿ ಪ್ರಮುಖವಾಗಿದೆ’ ಎಂದು ಮೂಡಲಗಿಯ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ಇಲ್ಲಿಯ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪಠ್ಯ ಮತ್ತು ಸಹಪಠ್ಯ ಜೊತೆಗೆ ನವರಾತ್ರಿ ಉತ್ಸವ-೨೦೨೪’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಕೇವಲ ಪಠ್ಯ ಮತ್ತು ಸಹಪಠ್ಯಕ್ಕೆ ಸೀಮಿತರಾಗದೆ ಶಾಲಾ ಕೊಠಡಿಯ ಹೊರಗೂ ಸಹ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಇರಬೇಕು ಎಂದರು.
ಶಿಕ್ಷಕರಾದವರು ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಆಸಕ್ತಿಯನ್ನು ಹೊಂದಿರಬೇಕು. ಮಕ್ಕಳಲ್ಲಿಯ ಸುಪ್ತವಾದ ಕಲೆಗಳಿಗೆ ಪ್ರೋತ್ಸಾಹಿಸಿ ಬೆಳೆಸಬೇಕು. ಶಾಲಾ ಕೊಠಡಿಗಳು ಅಕ್ಷರ ಕಲಿಕೆಯೊಂದಿಗೆ ಸಾಂಸ್ಕೃತಿಕ ಪರಂಪರೆಯನ್ನು ಪ್ರೇರೆಪಿಸುವ ತಾಣವಾಗಬೇಕು ಎಂದರು.
ಎಲ್ಇಟಿ ಶಿಕ್ಷಣ ಮಹಾವಿದ್ಯಾಲಯವು ವಿವಿಧ ಒಂಬತ್ತು ವಿಷಯಗಳ ಆಧಾರಿತ ನವರಾತ್ರಿ ಉತ್ಸವವನ್ನು ವಿನೂತನವಾಗಿ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಬಿ.ಕೆ. ಕುಲಕರ್ಣಿ ಹಾಗೂ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಐ.ಎಸ್. ಪವಾರ ಅವರು ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಬಿ. ಪಾಟೀಲ, ಶಿಕ್ಷಕ ಗಣಪತಿ ಉಪ್ಪಾರ, ಪ್ರೊ. ಸಿ.ಡಿ. ಹಾಲೋಳ್ಳಿ, ಪ್ರೊ. ವಿ.ಎಸ್. ರೊಟ್ಟಿ, ಪ್ರೊ. ಶಾರದಾಬಾಯಿ ದೇಸಾಯಿ ಇದ್ದರು.
ಪ್ರಶಿಕ್ಷಣಾರ್ಥಿಗಳಾದ ಬಸಯ್ಯ ಪ್ರಾರ್ಥಿಸಿದರು, ತೃಪ್ತಿ ಸ್ವಾಗತಿಸಿದರು, ಸೌಜನ್ಯ ನಿರೂಪಿಸಿ ವಂದಿಸಿದರು.