ಸಿಂದಗಿ: ಪಟ್ಟಣದ ಆರಾಧ್ಯ ದೇವತೆ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವವು ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವಗಳು ಭಕ್ತ ಸಮೂಹದೊಂದಿಗೆ ದೇವಸ್ಥಾನದಿಂದ ನಂದಿಕೋಲ ಹಾಗೂ ಸಕಲವಾದ್ಯಗಳೊಂದಿಗೆ ಪ್ರಾರಂಭವಾಯಿತು. ಶ್ರೀ ಸಂಗಮೇಶ್ವರ ಮತ್ತು ಭ್ರಮರಾಂಬಿಕಾ ಉತ್ಸವ ಮೂರ್ತಿಗಳ ಪಲ್ಲಕ್ಕಿ ಉತ್ಸವದ ಮೆರವಣಿಗೆ ಮತ್ತು ರಥೋತ್ಸವ ನೀಲಗಂಗಾ ದೇವಸ್ಥಾನದ ಮಾರ್ಗವಾಗಿ ಹಳೆ ಬಜಾರದಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನದವರೆಗೆ ನಡೆಯಿತು.
ದೇವಸ್ಥಾನದಲ್ಲಿ ಮತ್ತು ಮಾರ್ಗ ಮಧ್ಯೆ ನೀಲಗಂಗಾ ದೇವಸ್ಥಾನ ಹಾಗೂ ಹಳೆ ಬಜಾರದ ಮಧ್ಯದಲ್ಲಿ ವಿಶ್ವನಾಥ ಬಡಿಗೇರ ಹಾಗೂ ಸಂಗಡಿಗರು ಪುರವಂತರ ಸೇವೆ ಸಲ್ಲಿಸಿದರು. ಪುರವಂತರ ಸೇವೆಯೊಂದಿಗೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ಮಾರ್ಗದುದ್ದಕ್ಕೂ ಭಕ್ತಾದಿಗಳು ಉತ್ಸವ ಪಲ್ಲಕ್ಕಿಯಲ್ಲಿರುವ ಶ್ರೀ ಸಂಗಮೇಶ್ವರ ಮತ್ತು ಭ್ರಮರಾಂಬಿಕಾ ಉತ್ಸವ ಮೂರ್ತಿಗಳಿಗೆ ಆರತಿ ಮತ್ತು ಪೂಜೆ ಸಲ್ಲಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಸ್ಥಳೀಯ ಸಾರಂಗಮಠ-ಗಚ್ಚಿನಮಠದ ಶ್ರೀ ಪ್ರಭುಸಾರಂಗದೇವ ಶಿವಾಚಾರ್ಯರು, ಶ್ರೀ ಭೀಮಾಶಂಕರಮಠದ ಶ್ರೀ ದತ್ತಪ್ಪಯ್ಯ ಮಹಾಸ್ವಾಮಿಗಳು, ಪಂಡಿತ ಕುಲಕರ್ಣಿ, ವಿಜಯ ಕುಲಕರ್ಣಿ, ರಾಮ ಕುಲಕರ್ಣಿ, ಕೃಷ್ಣ ಕುಲಕರ್ಣಿ, ಚಿಂತು ಕುಲಕರ್ಣಿ, ನೀಲಗಂಗಾದೇವಿ ದೇವಸ್ಥಾನದ ಧರ್ಮದರ್ಶಿ ಶಿರೂಗೌಡ ದೇವರಮನಿ, ಶ್ರೀಶೈಲ ನಂದಿಕೋಲ, ಸಂಗಮೇಶ್ವರ, ಮಲ್ಲಿಕಾರ್ಜುನ ಹಾಗೂ ಬೊಮ್ಮಲಿಂಗೇಶ್ವರ ದೇವಸ್ಥಾನಗಳ ಅರ್ಚಕರು, ಸ್ಥಳೀಯ ಹಾಗೂ ಸುತ್ತಮುತ್ತಲಿನ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.
ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಮರಳಿ ದೇವಸ್ಥಾನಕ್ಕೆ ಬಂದ ನಂತರ ಭಕ್ತರು ನೈವೇದ್ಯ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.