ಸವದತ್ತಿ – ಪಟ್ಟಣದ ಕಟ್ಟಿ ಓಣಿ ದೇಸಾಯಿಗಲ್ಲಿಯ ಗಜಾನನ ದೇವಸ್ಥಾನದಲ್ಲಿ ಬುಧವಾರ 25 ರಂದು ಸಂಕಷ್ಟಿ ನಿಮಿತ್ತ ಗಜಾನನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಮುಂಜಾನೆ ಪಂಚಾಮೃತ ಅಭೀಷೇಕ ನಂತರ ಮೂರ್ತಿಗೆ ಪುಷ್ಪಾಲಂಕಾರ ಜರುಗುವ ಮೂಲಕ ಮಹಾಮಂಗಳಾರತಿಯಾಯಿತು. ಈ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರಾದ ಧೀರೇಂದ್ರ ಕಾನಡೆಯವರು ನಡೆಯಿಸಿ ಕೊಟ್ಟರು ರಾತ್ರಿ 8 ಘಂಟೆ 53 ನಿಮಿಷಕ್ಕೆ ಚಂದ್ರೋದಯದ ಇರುವ ಕಾರಣ ಈ ಗಣೇಶ ದೇವಸ್ಥಾನಕ್ಕೆ ಕೋರೋನಾ ನಿಯಮಾನುಸಾರ ಭಕ್ತ ಜನರು ಬಂದು ದರ್ಶನ ಪಡೆಯುತ್ತಿರುವ ದೃಶ್ಯ ಕಂಡು ಬಂದಿತು.
ಕಟ್ಟಿ ಓಣಿ ಗಣೇಶ ವಿಶೇಷತೆ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಾ ಕೇಂದ್ರ.ಈಗ ಇದು ಸವದತ್ತಿ ಎಲ್ಲಮ್ಮಾ ಕ್ಷೇತ್ರವೆಂದೂ ಹೆಸರಾಗಿದೆ. ಬೆಳಗಾವಿ ಜಿಲ್ಲಾ ಕೇಂದ್ರದಿಂದ 88 ಕಿ,ಮೀ, ಧಾರವಾಡ ಜಿಲ್ಲಾ ಕೇಂದ್ರದಿಂದ 38 ಕಿ.ಮೀ. ಅಂತರದಲ್ಲಿದ್ದು ತಾಲೂಕ ಕೇಂದ್ರವಾಗಿ ಮಲಪ್ರಭಾ ನದಿ ದಡದಲ್ಲಿನ ತಾಣವಾಗಿ ಯಲ್ಲಮ್ಮಾ ದೇವಾಲಯ ನವಿಲುತೀರ್ಥ ಆಣೆಕಟ್ಟು.ಮುನವಳ್ಳಿ ಸಕ್ಕರೆ ಕಾರ್ಖಾನೆ,ಸಿರಸಂಗಿ ಲಿಂಗರಾಜರ ವಾಡೆ,.ಕಾಳಿಕಾದೇವಿ ದೇವಾಲಯ.ಮುನವಳ್ಳಿ ಪಂಚಲಿಂಗೇಶ್ವರ.ದಕ್ಷಿಣ ಕಾಶಿ ಹೂಲಿ.ಎಕ್ಕೇರಿ ವರವಿಕೊಳ್ಳ ಅನೇಕ ಪ್ರಸಿದ್ದ ತಾಣಗಳನ್ನು ಹೊಂದಿದ ತಾಲೂಕಾ ಕೇಂದ್ರ.
ಇದನ್ನು ಹಿಂದೆ “ಪರಸಗಡ”ವಿಧಾನಸಭಾ ಕ್ಷೇತ್ರವೆಂದೂ ಕರೆಯುತ್ತಿದ್ದರು.ಅಂದರೆ ಇಲ್ಲಿ ಮರಾಠರ ಆಳ್ವಕೆಯ ಕಾಲದಲ್ಲಿ ಇದು ತೊರಗಲ್ ನಾಡಿನ ಒಂದು ಭಾಗವಾಗಿ ಬೆಟ್ಟದ ಮೇಲೊಂದು ಕೋಟೆಯಿದ್ದು ಇದನ್ನು ಪರಸಗಡ ಕೋಟೆ ಎಂದೂ ಹೇಳುವರು,ಇದು ಛತ್ರಪತಿ ಶಿವಾಜಿಗೆ ಸೇರಿದ್ದು(1674) ನಂತರ ಸವಣೂರಿನ ನವಾಬರಿಗೆ ಸೇರಿದ ಬಗ್ಗೆ ದಾಖಲೆಗಳಿವೆ.ಇದು ನಿಸರ್ಗದತ್ತವಾದ ಗಗನಚುಂಬಿಯಂಥ ಬಂಡೆಗಳು ಕೋಡೆಯೊಳಗಡೆ ಗವಿಗಳು ಅವುಗಳಲ್ಲಿ ಜಿನುಗುವ ನೀರಿನ ಝರಿಗಳ ಮೂಲಕ ಆಕರ್ಷಣೀಯವಾಗಿದೆ.
ಇಲ್ಲಿ ಎರಡು ಕೋಟೆಗಳಿವೆ ಒಂದು ಪರಸಗಡ ಕೋಟೆಯಾದರೆ ಇನ್ನೊಂದು ದೇಸಾಯರ ಆಳ್ವಕೆಯ ಕಾಲದ ಗ್ರಾಮದೊಳಗಿನ ಕೋಟೆ.ವಿಧಾನಸಭಾ ಚುನಾವಣಾ ಕ್ಷೇತ್ರಗಳ ಮರುವಿಂಗಡನಾ ಸಮಯದಲ್ಲಿ ಸವದತ್ತಿ ಎಲ್ಲಮ್ಮಾ ಕ್ಷೇತ್ರವೆಂದು ಪುನರ್ ನಾಮಕರಣಗೊಂಡಿದೆ.
ಸವದತ್ತಿ ಇತಿಹಾಸ ಕಾಲದಿಂದಲೂ ತನ್ನದೇ ಆದ ಖ್ಯಾತಿ ಹೊಂದಿದೆ.ಸುಗಂಧವರ್ತಿ ಎಂದು 12 ಹಳ್ಳಿಗಳ ಆಡಳಿತ ಕೇಂದ್ರವಾಗಿ ರಟ್ಟರ ಆಳ್ವಿಕೆಗೆ ಒಳಪಟ್ಟಿತ್ತು.ಈ ಕುರಿತಂತೆ”ಕಂಪಣ ಹನ್ನೆರಡರ ಮೊದಲ ಬಾಡ ರಾಜಧಾನಿ ಸುಗಂಧವರ್ತಿ”ಎಂದು ರಟ್ಟರ ಶಾಸನದಲ್ಲಿ ಉಲ್ಲೇಖವಿದೆ.ಕ್ರಿ,ಶ,1048 ರಿಂದ 1184 ರ ಅವಧಿ ಸವದತ್ತಿ ಸುಗಂಧವರ್ತಿ ಎಂದು ರಟ್ಟರ ರಾಜಧಾನಿಯಾಗಿತ್ತು.
ಇಲ್ಲಿ ಸುಪ್ರಸಿದ್ದ ಗಜಾನನ ದೇವಸ್ಥಾನ ಕಟ್ಟಿ ಓಣಿ ದೇಸಾಯಿ ಗಲ್ಲಿಯಲ್ಲಿದೆ, ಈ ದೇವಸ್ಥಾನವು ಬಹಳ ಪ್ರಸಿದ್ದಿಯಾಗಿದ್ದು ವೈಶಿಷ್ಟ್ಯಪೂರ್ಣವಾಗಿದೆ. ಸುಮಾರು ಇನ್ನೂರು ವರ್ಷಗಳ ಹಿಂದೆ ಈ ಸ್ಥಳದಲ್ಲಿ ಇದ್ದು ಉದ್ಭವ ಗಣಪತಿಯಾಗಿದ್ದು. ಕಟ್ಟಿ ಮನೆತನದವರು ಪೂಜಿಸುತ್ತ ಬಂದಿರುವರು. ಮೊದಲು ಇಲ್ಲಿ ತುಳಸಿ ಬನವಿತ್ತು.ತುಳಸಿ ಬನದಲ್ಲಿ ಈ ಉದ್ಭವ ಗಣಪತಿ ದರ್ಶನ,ಇಲ್ಲಿ ಹತ್ತಿರದಲ್ಲಿ ರಾಘವೇಂದ್ರ ಮಠವಿದ್ದು. ಅದರ ಅರ್ಚಕರ ಸ್ವಪ್ನದಲ್ಲಿ ಗಣೇಶನ ಇರುವಿಕೆಯ ಕುರಿತು ಕಂಡ ಕನಸನ್ನು ಅನುಸರಿಸಿ ತುಳಸಿ ಬನದಲ್ಲಿ ನೋಡಿದಾಗ ಈ ಉದ್ಭವ ಗಣಪತಿ ಕಂಡ ಆ ಮನೆತನದವರು ಅಲ್ಲಿ ಪ್ರತಿನಿತ್ಯವೂ ಪೂಜಾ ಕಾರ್ಯ ನೆರವೇರಿಸತೊಡಗಿದರು. ನಂತರ ಆ ಮನೆತನದವರು ತಮ್ಮ ಭಕ್ತಿಯ ಸಮರ್ಪಣೆಯ ಜೊತೆಗೆ ಕಷ್ಟ ಕಾಲದಲ್ಲಿ ಈ ಗಣಪತಿಯನ್ನು ನೆನೆದು ತಮ್ಮ ಕಷ್ಟ ಪರಿಹರಿಸೆನುತ ಬೇಡಿಕೊಳ್ಳಲು ತಮಗೆ ಒದಗಿದ ಕಷ್ಟಗಳು ಪರಿಹಾರವಾಗತೊಡಗುತ್ತ ಬರತೊಡಗಿದವು.
ಹೀಗೆ ಅಕ್ಕಪಕ್ಕದ ಜನರಿಗೆ ಈ ಗಣಪತಿಯ ಕುರಿತು ಇಷ್ಟಾರ್ಥಸಿದ್ದಿ ಎಂಬ ಸಂದೇಶ ಪ್ರಾಪ್ತವಾಗಿ ಅನೇಕರು ತಮ್ಮ ಭಕ್ತಿಯ ಕೋರಿಕೆಗಳನ್ನು ಬೇಡಿಕೊಂಡು ಅದರಿಂದ ಫಲವನ್ನು ಹೊಂದಿ ಗಣಪತಿಗೆ ಅಭಿಷೇಕ ವಿಶೇಷ ಪೂಜೆ ಮಾಡಿಸುತ್ತ ಬರತೊಡಗಿದರು. ಗಣಪತಿ ಇರುವ ಸ್ಥಳದಲ್ಲಿ ಕಾಲಕ್ರಮೇಣ ಪುಟ್ಟದಾದ ದೇವಾಲಯವನ್ನು ಅಂದಿನ ಹಿರಿಯರು ನಿರ್ಮಿಸಿಕೊಂಡರು. 2000 ರಲ್ಲಿ ಈ ಹಳೆಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ನೂತನ ದೇವಸ್ಥಾನ ಕಟ್ಟಲಾಯಿತು..ಈ ಗಣಪತಿ ಭಕ್ತರ ಹರಕೆಗಳನ್ನು ಈಡೇರಿಸುತ್ತಾ ತನ್ನದೆ ಆದ ಶಕ್ತಿಯಿಂದ ಭಕ್ತರ ಇಷ್ಟಾರ್ಥಗಳನ್ನು ಇಡೇರಿಸುವ ದೇವಸ್ಥಾನವಾಗಿ ಇಂದಿಗೂ ಜನಜನಿತವಾಗಿದೆ.
ವೈ.ಬಿ.ಕಡಕೋಳ. ಶಿಕ್ಷಕರು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-591117
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
9449518400 8971117442