ಓಲಾಡುವಾ ಬಾ ಲೇ , ನಶೆಯಲಿ ತೇಲಾಡುವಾ..
ನಶೆಯಲ್ಲಿರೋ ಸುಖ ಗೊತ್ತೇ ಇರಲಿಲ್ಲ.ಹೂಂ…ಅಂತಿಯಾ, ಹೂಂಹೂಂ ಅಂತಿಯಾ.
ನಶೆ ಎಂದರೇನು ಎಂದು ಅರಿಯಲಿಕ್ಕೇ ಇಷ್ಟು ವರ್ಷ ಉರುಳಿ ಹೋಯ್ತು. ಈಗಲಾದರೂ ಅರಿವಿಗೆ ಬಂತಲ್ಲ ಎನ್ನುವುದೇ ಖುಷಿಯ ಸಂಗತಿ. ಬಹುಶಃ ಇಂತಹ ಆನಂದ ಸ್ವರ್ಗದಲ್ಲೂ ಇರಲಿಕ್ಕಿಲ್ಲ.
ಅದಕ್ಕೆ ನಮ್ಮ ಜನ ಯಾವಾಗಲೂ ಏಕೆ ನಶೆಯಲ್ಲಿ ಇರಬಯಸುತ್ತಾರೆಂದು ಈಗ ಅರಿವಿಗೆ ಬರುತ್ತಿದೆ. ಕಿಕ್ ಏರಿಸಿಕೊಳ್ಳುವುದು ಒಂದು ಅದ್ಭುತ ಅನುಭವ. ನೋಡಿದವರು ಯಾರಾದರೂ ಏನಾದರೂ ಅಂದುಕೊಂಡಾರಲ್ಲಾ ಎಂದು ಯೋಚಿಸಿ ಇಲ್ಲಿಯವರೆಗೆ ಆ ಸಾಹಸಕ್ಕೆ ಇಳಿದಿರಲಿಲ್ಲ.
ಈಗ ಅನಿಸುತ್ತಿದೆ ಮೊದಲೇ ಏಕೆ ಇದಕ್ಕೆ ಕೈ ಹಾಕಲಿಲ್ಲವೆಂದು. ವಿನಾಕಾರಣ ನನ್ನ ಜೀವನದ ಅಮೂಲ್ಯ ಕ್ಷಣಗಳನ್ನು ಈ ನಶೆಯಿಲ್ಲದೇ ಕಳೆದುಬಿಟ್ಟೆನಲ್ಲ ಎಂದೆನಿಸುತ್ತಿದೆ. ಆಗಲೇ ಇದರ ತೋಳತೆಕ್ಕೆಗೆ ಬಿದ್ದಿದ್ದರೆ ಏನೇನೋ ಆಗಬಹುದಿತ್ತು.
ಆದರೆ ಈಗ ಅದರ ಬಗ್ಗೆ ಮರುಗಿ ಪ್ರಯೋಜನವಿಲ್ಲ. ಈಗಲಾದರೂ ಅದರ ದಾಸನಾಗಿಹೆನಲ್ಲ ಅಷ್ಟೇ ಸಾಕು. ನಶೆ ಏರಿಸಿಕೊಳ್ಳದೇ ನನ್ನ ಇಂದಿನ ದಿನ ಕೊನೆಗೊಳ್ಳುವುದೇ ಇಲ್ಲ. ಹಾಗೆಯೇ ಮುಂಜಾನೆದ್ದು ಒಂದಿಷ್ಟು ಕಿಕ್ ಏರಿಸಿಕೊಂಡಾಗಲೇ ದಿನವಿಡಿ ಒಂದಿಷ್ಟು ಸಮಾಧಾನ. ದಿನವಿಡೀ ದಣಿದ ತನು ಮನಕ್ಕೆ ಒಂದಿಷ್ಟು ಹೊತ್ತಾದರೂ ಈ ನಶೆ ರಿಲ್ಯಾಕ್ಸ ನೀಡುತ್ತದೆ.
ಒಂದು ವೇಳೆ ಇದು ಇಲ್ಲದೇ ಹೋಗಿದ್ರೆ ಆಗಲೇ ಎಷ್ಟೋಜನ ಇಷ್ಟೊತ್ತಿಗೆ ಅದೇನಾಗುತ್ತಿದ್ದರೋ? ನಾನು ಈ ನಶೆ ಏರಿಸಿಕೊಳ್ಳುವುದರಿಂದ ಅನ್ಯರಿಗೆ ಲಾಭವೋ ನಷ್ಟವೋ ನಾ ಕಾಣೆ. ಆದರೆ ವೈಯಕ್ತಿಕವಾಗಿ ನನಗಂತೂ ಲಾಭವೇ ಇದೆ. ಅದರಿಂದಲೇ ಇಂದು ನಾನು ನಾಲ್ಕು ಜನರ ಮಧ್ಯೆ ತಲೆಎತ್ತಿ ತಿರುಗುವಂತಾಗಿದೆ.
ಎಲ್ಲಿಯೇ ಹೋದರೂ ನಾಲ್ಕು ಜನ ಗುರುತಿಸಿ ಮಾತನಾಡುತ್ತಿದ್ದಾರೆ. ಇದಕ್ಕಿಂತ ದೊಡ್ಡದೇನಿದೆ ಹೇಳಿ. ನಾಲ್ಕುಜನ ಗುರುತಿಸುವುದೇ ನಮ್ಮ ಜೀವನದ ಅಂತಿಮ ಗುರಿ ಅಲ್ವಾ. ಆ್ಯಟಲೀಸ್ಟ ನಾವು ಅಳಿದು ಹೋದರೂ ನಾವು ಮಾಡಿದ ಈ ಕೆಲಸ ನಮ್ಮ ನಂತರದ ಪೀಳಿಗೆಗೆ ದಾರಿದೀಪವಾದರೆ ಬದುಕಿದ್ದಕ್ಕೂ ಸಾರ್ಥಕ. ಯಾವಾಗ ಈ ಜ್ಞಾನೋದಯ ಆಯಿತೋ ಆಗಿನಿಂದ ದಿನಾಲೂ ಒಂದಿಷ್ಟು ಹೊತ್ತು ಇದರಲ್ಲಿ ಕಳೆದೇ ಕಳೆಯುತ್ತೇನೆ.
ನನ್ನ ಈ ಕೆಲಸಕ್ಕೆ ಬಹು ಜನರು ತರಹೇವಾರಿ ಮಾತನಾಡುತ್ತಾರೆ. ಆದರೆ ನಾನು ಅದ್ಯಾವದಕ್ಕೂ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ನನ್ನ ಜೀವನ ನನಗೆ, ಅವರ ಜೀವನ ಅವರಿಗೆ.ನನ್ನದೇ ದಾರಿಯನ್ನು ಹಿಡಿಯಲು ಅವರೂ ಅಣಿಯಾದರೆ ನನ್ನ ಕಡೆಯಿಂದ ಹೃದಯಪೂರ್ಣ ಸ್ವಾಗತ ಕೋರುವೆ. ಇಲ್ಲಿ ನನ್ನ ಸ್ವಂತ ದುಡ್ಡು ಮತ್ತು ಸಮಯ ಖರ್ಚಾದರೂ ನನಗಾವುದೂ ಚಿಂತೆ ಇಲ್ಲ.
ಒಟ್ಟಾರೆ ನನ್ನ ಜೊತೆ ಅವರೂ ಬೆಳೆಯುತ್ತಾರಲ್ಲವೇ ಅಷ್ಟು ಸಾಕು. ಮತ್ತೆ ಈ ನಶೆಯ ಒಳಗಿನ ದೋಸ್ತಿಯನ್ನು ಅಷ್ಟು ಸುಲಭವಾಗಿ ಯಾರಿಂದಲೂ ತುಂಡರಿಸಲು ಸಾಧ್ಯವಿಲ್ಲ. ಇದೊಂದು ತರಹ ಫೆವಿಕಾಲ್ ಇದ್ದಂತೆ. ಅಟೂಟ್ ಜೋಡ್.. ಈ ನಶೆಯ ಬದುಕಲ್ಲಿ ಬದುಕುವವರು ಒಂಥರಾ ಪರೋಪಕಾರಿ ಜೀವಿಗಳೇ ಹೌದು.
ಸರಿಯಾದುದನ್ನು ಸರಿ ಎಂದು, ತಪ್ಪಾಗಿರುವುದನ್ನು ತಪ್ಪೆಂದು ಹೇಳಲು ಇವರು ಯಾರ ಮುಲಾಜಿಗೂ ಒಳಗಾಗುವುದಿಲ್ಲ. ಈ ನಶೆಯಲ್ಲಿ ಬದುಕುವವರು ಬಲು ಭಾವಜೀವಿಗಳು, ದುಃಖವಾದರೆ ಹಿಂದೆ ಮುಂದೆ ನೋಡದೇ ಅತ್ತು ಬಿಡುತ್ತಾರೆ, ಖುಷಿ ಎಂದೆನಿಸಿದರೆ ಬಾಯಿ ಬಿಚ್ಚಿ ನಿಚ್ಚಳವಾಗಿ ನಕ್ಕು ಬಿಡುತ್ತಾರೆ.
ಎಷ್ಟೇ ದುಃಖವಾದರೂ,ಖುಷಿಯಾದರೂ ಯಾವುದನ್ನೂ ತೋರಿಸದೇ ಕೃತಕವಾಗಿ ಬದುಕುವವರ ಮಧ್ಯೆ ಇವರು ವಿಶಿಷ್ಟವಾಗಿ ಗೋಚರಿಸುತ್ತಾರೆ. ನೈಜ ಬದುಕನ್ನು ಪ್ರೀತಿಸುತ್ತಾ ಇವರು ಬದುಕುತ್ತಾರೆ. ಇಂತಹ ಜನ ನಮ್ಮ ನಿಮ್ಮ ಮಧ್ಯೆ ಅದೆಷ್ಟೋ ಇದ್ದಾರೆ.
ಆದರೆ ನಾವೆಲ್ಲ ಇವರನ್ನು ಬೇಜವಾಬ್ದಾರಿಗಳು ಎಂದು ಬಿರುದು ಕೊಟ್ಟು ದೂರವಿಡಲು ಬಯಸುತ್ತೇವೆ. ಇವರಿಗೆ ತಮ್ಮ ವೈಯಕ್ತಿಕ ನಾಳೆಯ ಬದುಕಿನ ಬಗ್ಗೆ ಚಿಂತೆಯಿಲ್ಲ, ಆದರೆ ಪರರ ಬಗ್ಗೆ ಅತೀವ ಕಾಳಜಿಯನ್ನು ತೋರುತ್ತಾರೆ. ಇನ್ನೊಂದು ವಿಚಾರವೆಂದರೆ ಇವರು ತಮ್ಮ ಮತ್ತು ಅನ್ಯರ ಅನುಭವಗಳನ್ನು ಯಥಾವತ್ ಅಗಿ ಸ್ವೀಕರಿಸುತ್ತಾರೆ.
ಅದರ ಮೇಲೆ ತಮ್ಮ ವಿಚಾರಗಳನ್ನು ನಿರ್ಭಿಡೆಯಿಂದ ಹೊರಗೆ ಹಾಕುತ್ತಾರೆ. ಇದೇ ಸಾಲಿನಲ್ಲಿ ಬೆಳೆದು ಇಂದು ಪ್ರಸಿದ್ದಿಯನ್ನು ಪಡೆದ ಅದೆಷ್ಟು ಇಂತಹ ಮಹನೀಯರನ್ನು ಹೆಸರಿಸಲಿ ಹೇಳಿ. ಅದರಲ್ಲೂ ಕನ್ನಡ ನಾಡು ಇದರಲ್ಲಿ ಹಿಂದೆ ಬಿದ್ದಿಲ್ಲ.ಅಂತಹ ಬರಹದ ನಶೆಯನ್ನು ಹಚ್ಚಿಕೊಂಡು ಹೆಚ್ಚಿಸಿಕೊಂಡಿದ್ದರಿಂದಲೇ ಇಂದು ೮ ಜನ ಸಾಹಿತಿಗಳು ಜ್ಞಾನಪೀಠ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಓದುಗರೇ ತಾವು ಓದುವ ನಶೆ ಮಾತ್ರ ಏರಿಸಿಕೊಳ್ಳದಿರಿ , ಬರೆಯುವ ನಶೆಯನ್ನೂ ಸ್ವಲ್ಪ ಏರಿಸಿಕೊಳ್ಳಿ ಎಂಬುದೇ ನನ್ನ ಕಳಕಳಿ. ಮುಂದೊಂದು ದಿನ ನಾವಿಲ್ಲದಿದ್ದರೂ ನಮ್ಮ ಬರಹ ನಮ್ಮ ಉತ್ತರಾಧಿಕಾರಿಯಾಗಿ ಮುಂದಿನ ಪೀಳಿಗೆಗೆ ದಾರಿದೀಪವಾಗುವುದು. ಮಾತು ಗರ್ಭಪಾತ, ಬರಹ ಪ್ರಸವ. ಪ್ರಸವದಲ್ಲಿ ನಮಗೆ ಉತ್ತರಾಧಿಕಾರಿ ಸಿಗುವನು, ಆದರೆ ಗರ್ಭಪಾತದಲ್ಲಿ ಸಿಗುವುದಿಲ್ಲ.
ಬರೀ ಮಾತಾಡಬೇಡಿ. ಮಾತು ವೇದಿಕೆಗೆ ಸೀಮಿತ .ಅಲ್ಲಿರುವ ಕೆಲವೇ ಪ್ರೇಕ್ಷಕರು ಅದಕ್ಕೆ ಸಾಕ್ಷ್ಯ ನೀಡಬಲ್ಲರು. ಆಡುವ ಮಾತು ಗಾಳಿಯಲ್ಲಿ ಹಾರಿ ಹೋದಾಗ ಅಲ್ಲಿ ಏನೂ ಉಳಿಯದು. ಒಂದು ವೇಳೆ ಅದನ್ನೇ ನೀ ಬರೆಯುವೆಯಾದರೆ ಅದು ಬಹುಕಾಲ ಜನ ಮಾನಸದಲ್ಲಿ ಉಳಿಯುವುದು.ಅದರ ಜೊತೆಗೆ ನೀನೂ ಉಳಿಯುವೆ. ನೀನು ಗತಿಸಿ ಹೋದರೂ, ಬರಹ ರೂಪದ ನಿನ್ನ ವಿಚಾರ ಚಿರಕಾಲ ಉಳಿಯುವುದು. ಮುಂಬರುವ ನಿನ್ನ ಮುಂದಿನ ಪೀಳಿಗೆಯ ಹಲವರಿಗೆ ಮಾರ್ಗ ತೋರಬಲ್ಲುದು. .ಓದುವಿರಿ ತಾನೇ ..? ಬರೆಯುವಿರಿ ತಾನೇ…? ಓದು ಬರಹದ ನಶೆ ಏರಿಸಿಕೊಳ್ಳುವಿರಿ ತಾನೇ….? ಚಿಯರ್ಸ್ … ಲೆಟ್ ಅಸ್ ಸ್ಟಾರ್ಟ್ ಓನ್ಲಿ ಒನ್ ಪೆಗ್ ನೌ..ಲೇಟರ್ ಆನ್ ಮೋರ್ ಆ್ಯಂಡ ಮೋರ್…
ಶಿವಪಾರ್ವತಿಸುತ(ಬಿಎಸ್ ಪಾಟೀಲ)