Homeಸುದ್ದಿಗಳು'ಸಮಕಾಲೀನ ಪರಿಸರ ಬಿಕ್ಕಟ್ಟಿನ ಸಂದರ್ಭದಲ್ಲಿ ಗಾಂಧೀ ಚಿಂತನೆ' ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

‘ಸಮಕಾಲೀನ ಪರಿಸರ ಬಿಕ್ಕಟ್ಟಿನ ಸಂದರ್ಭದಲ್ಲಿ ಗಾಂಧೀ ಚಿಂತನೆ’ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಗಾಂಧೀ ಅಧ್ಯಯನ ವಿಭಾಗ ರಾಷ್ಟ್ರೀಯ ಸೇವಾ ಯೋಜನೆಯ ಕೋಶ, ಕ.ವಿ.ವಿ. ಹಾಗೂ ‘ಪರಿಸರಕ್ಕಾಗಿ ನಾವು’ ಸಂಘಟನೆ ಧಾರವಾಡ ಜಿಲ್ಲೆ, ಇವರ ಸಹಯೋಗದಲ್ಲಿ 156 ನೇ ಜಯಂತಿ ಅಂಗವಾಗಿ ಅಂತರ್ರಾಷ್ಟ್ರೀಯ ಅಹಿಂಸಾ ದಿನಾಚರಣೆಯ ಕಾರ್ಯಕ್ರಮದ ಅಂಗವಾಗಿ “ಸಮಕಾಲೀನ ಪರಿಸರ ಬಿಕ್ಕಟ್ಟಿನ ಸಂದರ್ಭದಲ್ಲಿ ಗಾಂಧೀ ಚಿಂತನೆ” ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕರ್ನಾಟಕ ವಿಶ್ವವಿದ್ಯಾಲಯದ ಸಿನೆಟ್ ಹಾಲಿನಲ್ಲಿ ಜರುಗಿತು.

ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಡಾ. ಬಿ.ಎಮ್.ಪಾಟೀಲ ಪ್ರಭಾರಿ ಕುಲಪತಿಗಳು, ಕ.ವಿ.ವಿ.ಧಾರವಾಡ, ಖ್ಯಾತ ಪರಿಸರವಾದಿ ಸುರೇಶ ಹೆಬ್ಳಿಕರ, ಗಾಂಧೀ ಅಧ್ಯಯನ ವಿಭಾಗದ ಆ್ಯಡ್ಜಂಟ್ ಪ್ರೊಫೆಸ್ಸರ್ ಡಾ. ಶಿವಾನಂದ ಶೆಟ್ಟರ, ಎನ್.ಎಸ್.ಎಸ್. ಘಟಕದ ಮುಖ್ಯಸ್ಥ ಡಾ. ಎಂ.ಬಿ. ದಳಪತಿ, ಭಾಲಚಂದ್ರ ಜಾಬಶೆಟ್ಟಿ ಡಾ. ಎಸ್.ಬ. ಬಸೆಟ್ಟಿ, ನ್ಯಾಯವಾದಿ ಸರಸ್ವತಿ ಪೂಜಾರ ರವರ ಉಪಸ್ಥಿತಿಯಲ್ಲಿ ಜರುಗಿತು.

ಮಹಾತ್ಮಾ ಗಾಂಧೀಜಿವರ ಭಾವ ಚಿತ್ರಕ್ಕೆ ಪುಷ್ಪ ನಮನ ಅರ್ಪಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

ಮೊದಲ ಗೋಷ್ಠಿಯಲ್ಲಿ ಸುರೇಶ ಹೆಬ್ಳೀಕರ ವಿಷಯ ಮಂಡಿಸಿದರು. ಹರ್ಷ ಶೀಲವಂತ ಪ್ರತಿಕ್ರಿಯೆ ನೀಡಿದರು, ಪ್ರೊ. ಗೋಪಾಲ ಕಡೇಕೋಡಿಯವರು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಎರಡನೇ ಗೋಷ್ಠಿಯಲ್ಲಿ ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಿಷಯ ಮಂಡಿಸಿದರು, ಗಾಂಧೀಜಿಯವರ ಪರಿಸರ ಸ್ನೇಹಿ ಜೀವನ ಶೈಲಿ ಯಿಂದ ಪ್ರಭಾವಿತರಾಗಿ ಇಂದು ಅನೇಕ ಜನಪರ, ಪ್ರಕೃತಿಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದೇ ಸಾಕ್ಷಿಯಾಗಿದೆಯೆಂದರು. ಗಾಂಧಿಯವರ ಸತ್ಯಮಾರ್ಗದಲ್ಲಿ ನಡೆಯಬೇಕಾದರೆ ನೂರೆಂಟು ವಿಘ್ನಗಳನ್ನು ಎದುರಿಸಿ ಮುನ್ನುಗ್ಗಬೇಕಾಗುತ್ತದೆ. ಕಪ್ಪತಗುಡ್ಡದ ಸಂರಕ್ಷಣೆಗಾಗಿ ತಾವು ಎದುರಿಸಿದ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿದರು, ಗಾಂಧಿಯವರ ಸತ್ಯಮಾರ್ಗದ ಪ್ರೇರಣೆಯಿಂದಲೇ ಕಪ್ಪತಗುಡ್ಡ ಸಂರಕ್ಷಣೆ ಕಾರ್ಯ ಸಾಧ್ಯವಾಯಿತು. ಕಾರಣ ಮಹಾತ್ಮಾ ಗಾಂಧೀಜಿಯವರ ಪರಿಸರ ತತ್ವಾದರ್ಶಗಳನ್ನು ಮುಂದಿಟ್ಟುಕೊಂಡು ನಾನು ಕಪ್ಪತಗುಡ್ಡದ ಕಾವಲುಗಾರನಾಗಿ ಕ್ರಿಯಾಶೀಲನಾಗಿದ್ದು ಎಲ್ಲ ಕನ್ನಡಿಗರು ಈ ಕಾಯಕದಲ್ಲಿ ನಮ್ಮ ಜೊತೆ ಕೈಜೊಡಿಸಲು ಕೋರಿಕೊಳ್ಳುತ್ತೇನೆಂದರು.

ಪ್ರತಿಕ್ರಿಯೆ ನೀಡಿದ ರಾಮದುರ್ಗದ ಪರಿಸರ ಚಿಂತಕ ಬಾಲಚಂದ್ರ ಜಾಬಶೆಟ್ಟಿ ಯವರು, ಪರಿಸರ ಸಂರಕ್ಷಣೆಯನ್ನು ಸಮಗ್ರ ದೃಷ್ಟಿಕೋನದಿಂದ ಹಾಗೂ ಎಲ್ಲ ಆಯಾಮಗಳಿಂದ ಅನುಸಂಧಾನ ಗೊಳಿಸುವ ಅವಶ್ಯಕತೆ ಇದೆ, ನಮ್ಮ ಕಾರ್ಯಚಟುವಟಿಕೆಗಳನ್ನು ಕೇವಲ ಗಿಡ ನೆಡುವುದು, ಪ್ಲಾಷ್ಟಿಕ್ ಬಳಕೆ ನಿಯಂತ್ರಿಸುವುದಕ್ಕೆ ಸೀಮಿತಗೊಳಿಸದೇ ಸೂಕ್ತ ತ್ಯಾಜ್ಯ ನಿರ್ವಹಣೆ, ಇಂಗಾಲದ ಹೆಜ್ಜೆಗಳನ್ನು ಅಳಿಸುವುದಕ್ಕಾಗಿ, ಪಳಿಯುಳಿಕೆಯಾಧಾರಿತ ಇಂಧನ ಬಳಕೆಯನ್ನು ಶಾಶ್ವತವಾಗಿ ನಿಲ್ಲಿಸಿ ಪರ್ಯಾಯ ಇಂಧನಗಳಾದ, ಸೌರಶಕ್ತಿ ಬಳಕೆ, ಗಾಳಿಯಂತ್ರಗಳಿಂದ ವಿದ್ಯುಚ್ಛಕ್ತಿ ಉತ್ಪಾದನೆ, ಹಸಿರು ಜಲಜನಕದ ಉತ್ಪಾದನೆ ಹಾಗೂ ಬಳಕೆ, ಹಸಿರು ಅಮೋನಿಯಾ ಉತ್ಪಾದಿಸಿ ಯುರಿಯಾ ಸಿದ್ದಪಡಿಸಿ ಕೃಷಿಗೆ ಸಂಬಂಧಿಸಿದ ಹೊಸ ಆಯಾಮ ಸೃಷ್ಟಿಸುವುದು ಇಂದಿನ ಪರಿಸರ ಸಂರಕ್ಷಣೆಯಲ್ಲಿ ಗಮನ ಹರಿಸಿ ಅನುಷ್ಠಾನಗೊಳಿಸಬಹುದಾದ ಅತೀ ಅವಶ್ಯಕವಾದ ಚಟುವಟಿಕೆಗಳಿಗೆ ಕಾರ್ಯವ್ಯಾಪ್ತಿ ವಿಸ್ತರಿಸಿ ಸಮಗ್ರ ಪರಿಸರ ಸಂರಕ್ಷಣೆ ಗಾಗಿ ಸನ್ನದ್ಧಗೊಳ್ಳಲು ಕರೆ ನೀಡಿದರು.

ಪಕ್ಷಿ ಸಂಕುಲದ ಸಂರಕ್ಷಕ ಡಾ. ಆರ.ಜಿ.ತಿಮ್ಮಾಪೂರರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಸಮಾರೋಪ ಸಮಾರಂಭದಲ್ಲಿ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸುರೇಶ ಹೆಬ್ಳೀಕರ, ಡಾ. ಶಿವಾನಂದ ಶೆಟ್ಟರ, ಭಾಲಚಂದ್ರ ಜಾಬಶೆಟ್ಟಿ, ಡಾ. ಎಸ.ಬಿ.ಬಸೆಟ್ಟಿ, ಡಾ.ಎಮ್.ಬಿ.ದಳಪತಿ ಹಾಗೂ ಆರ್.ಜಿ.ತಿಮ್ಮಾಪೂರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಬಹುಮಾನ ವಿಜೇತರಿಗೆ ಪ್ರಮಾಣ ಪತ್ರ ವಿತರಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು

RELATED ARTICLES

Most Popular

error: Content is protected !!
Join WhatsApp Group