ಮೂಡಲಗಿ: ಪ್ರಸಕ್ತ ಸಾಲಿನ ೨೦೨೨ ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ೮೧ ಪ್ರೌಢ ಶಾಲೆಗಳ ೨೬ ಪರೀಕ್ಷಾ ಕೇಂದ್ರಗಳಲ್ಲಿ ಮೂಡಲಗಿ ವಲಯದ ೭೦೪೧ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದು, ಪರೀಕ್ಷೆಗಳು ಸುಗಮ ರೀತಿಯಲ್ಲಿ ಸಾಗುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅವರು ಗುರುವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಪೂರ್ವ ತಯಾರಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರೀಕ್ಷೆಗಳು ಸುಗಮ ರೀತಿಯಲ್ಲಿ ನಡೆಯುವಂತೆ ಪರೀಕ್ಷಾ ಮಂಡಳಿಯ ಮಾರ್ಗದರ್ಶನದಂತೆ ಅಧಿಕ್ಷಕರು, ಉಪ ಅಧೀಕ್ಷಕರು, ಸ್ಥಾನಿಕ ಜಾಗೃತದಳ, ಅನ್ಯ ಇಲಾಖೆಯ ಜಾಗೃತದಳಗಳು, ಪ್ರಶ್ನೆ ಪತ್ರಿಕೆ ಸರಬರಾಜು ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಷ್ಟೇ ಅಲ್ಲದೆ ಮೊಬೈಲ್ ಸ್ವಾಧಿನ ಅಧಿಕಾರಿಗಳನ್ನು ನಿಯಮಿಸಿದ್ದು ಅನಗತ್ಯ ಅಡಚಣೆಗಳನ್ನು ನಿವಾರಿಸಲಾಗಿದೆ. ಒಟ್ಟು ೩೫೩ ಪರೀಕ್ಷಾ ಕೊಠಡಿಗಳಿದ್ದು ಅಗತ್ಯ ಪೋಲಿಸ್ ಬಂದೋಬಸ್ತ ನಿಯಮಿಸಲಾಗಿದೆ ಎಂದರು.
ಕೋವಿಡ್-೧೯ ಅನುಸಾರ ೨೬ ಜನ ದೈಹಿಕ ಶಿಕ್ಷಕರನ್ನು ಎಸ್.ಒ.ಪಿ ನಿಯಮಗಳ ಪಾಲನೆಗೆ ನಿಯೋಜಿಸಲಾಗಿದೆ. ಆರೋಗ್ಯದ ಹಿತದೃಷ್ಟಿಯಿಂದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯಮಿಸಲಾಗಿದೆ. ಅನ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಪರೀಕ್ಷಾ ಸಂದರ್ಭದಲ್ಲಿ ಸೆಕ್ಷನ್ ೧೪೪ ಜಾರಿಯಲ್ಲಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದ ಅವರು, ಪರೀಕ್ಷಾ ಕೊಠಡಿಯಲ್ಲಿ ಕುಡಿಯುವ ನೀರು, ಶೌಚಾಲಯ, ಆಸನ ವ್ಯವಸ್ಥೆ, ಗಾಳಿ ಬೆಳಕಿನ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಪರೀಕ್ಷೆಗಳಲ್ಲಿ ಯಾವದೇ ಅಹಿತಕರ ಘಟನೆ ಜರುಗದಂತೆ ಪರೀಕ್ಷಾ ಮಂಡಳಿಯ ನಿಯಮಾನುಸಾರ ಕ್ರಮವಹಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ದೈಹಿಕ ಪರಿವೀಕ್ಷಣಾಧಿಕಾರಿ ಜುನೇದ ಪಟೇಲ್, ಎಸ್.ಎಸ್.ಎಲ್.ಸಿ ತಾಲೂಕಾ ನೋಡಲ್ ಅಧಿಕಾರಿ ಸತೀಶ್.ಬಿ,.ಎಸ್, ಇಸಿಒ ಟಿ ಕರಿಬಸವರಾಜು, ಕಛೇರಿ ಸಿಬ್ಬಂದಿ ವರ್ಗದವರು ಹಾಜರಿದ್ದರು.
ನಮ್ಮ ಶೈಕ್ಷಣಿಕ ಜಿಲ್ಲೆಯಲ್ಲಿ ಮಕ್ಕಳನ್ನು ಹುರಿದುಂಬಿಸಲು ಶಾಸಕರಾದಿಯಾಗಿ ಹಲವು ಗಣ್ಯರು ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ ಎಂದು ತಿಳಿಸಿದ ಮನ್ನಿಕೇರಿಯವರು, ಶಾಸಕರು ಕಳೆದ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ೧೦ ಸಾವಿರ ರೂ. ನೀಡಿದ್ದರು. ನಗರದ ಎಸ್ ಆರ್ ಸೋನವಾಲಕರ ಅವರು ಕೂಡ ಐದು ಲಕ್ಷ ರೂ. ಠೇವಣಿ ವಿದ್ಯಾರ್ಥಿಗಳಿಗಾಗಿ ಇಟ್ಟಿದ್ದಾರೆ ಎಂದರು.
ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಉದ್ವೇಗಕ್ಕೆ ಒಳಗಾಗದೆ ಸರಿಯಾದ ಆಹಾರ ಸೇವಿಸಿ, ಚೆನ್ನಾಗಿ ನಿದ್ರೆ ಮಾಡಿ ಉಲ್ಲಾಸದಿಂದ ಇರಬೇಕು ಯಾವುದೇ ರೀತಿಯ ಭಯಕ್ಕೆ ಒಳಗಾಗುವುದು ಬೇಡ ಎಂದು ಬಿಇಓ ಮನ್ನಿಕೇರಿ ಕರೆ ನೀಡಿದರು.