ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಹೆಸರಾಗಿದ್ದು ,ರಾಜಮಹಾರಾಜರ ಆಳ್ವಿಕೆಯ ಕಾಲದಿಂದಲೂ ಕನ್ನಡ ನಾಡು-ನುಡಿಯ ಪ್ರತೀಕವಾಗಿದೆ.ಆದರೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಡೆದಿರುವ ಫನ್ ವರ್ಲ್ಡ್ ವಸ್ತುಪ್ರದರ್ಶನದಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯಿಂದ ಕನ್ನಡ ಬಳಕೆಗೆ ಹಕ್ಕೊತ್ತಾಯ ಮಂಡಿಸಲಾಗಿದೆ.
ಪ್ರವೇಶದ್ವಾರದಲ್ಲಿಯೇ ಫನ್ ವರ್ಲ್ಡ್ ಎಂಬ ಬೃಹತ್ ಆಂಗ್ಲ ಭಾಷೆಯ ನಾಮಫಲಕವನ್ನು ಹಾಕಲಾಗಿದೆ.ಜೊತೆಗೆ ಈ ವಸ್ತು ಪ್ರದರ್ಶನಕ್ಕೆ ಪ್ರವೇಶ ನೀಡಲು ತೆಗೆದುಕೊಳ್ಳುವ ಚೀಟಿಯೂ ಸಹ ಆಂಗ್ಲ ಭಾಷೆಯಲ್ಲಿದೆ. ಫನ್ ವರ್ಲ್ಡ್ ಗೆ ಆಗಮಿಸುವ ಸಾರ್ವಜನಿಕರು ತಮ್ಮ ವಾಹನ ನಿಲುಗಡೆ ಮಾಡಲು ಹೋದರೆ ಅಲ್ಲಿ ನೀಡುವ ರಶೀದಿ ಹಾಗೂ ಮನರಂಜನಾ ಪ್ರವೇಶ ರಶೀದಿಯಲ್ಲೂ ಸಂಪೂರ್ಣ ಆಂಗ್ಲಮಯವಾಗಿದೆ. ಇನ್ನು ಈ ವಸ್ತು ಪ್ರದರ್ಶನದಲ್ಲಿನ ಅತ್ಯಂತ ಹೆಚ್ಚು ಸಂಖ್ಯೆಯ ಮಳಿಗೆಗಳ ನಾಮಫಲಕ ತಮಿಳು,ಹಿಂದಿ,ತೆಲುಗು,ಇಂಗ್ಲೀಷ್ ಹೀಗೆ ಪರಭಾಷೆಗಳಲ್ಲಿದೆ. ಈ ವಸ್ತು ಪ್ರದರ್ಶನ ಒಳಕ್ಕೆ ಕಾಲಿಡುತ್ತಿದ್ದಂತೆ ನಾವು ಕರ್ನಾಟಕದಲ್ಲಿ ಇದ್ದೇವೆಯೇ ಎಂಬ ಸಂದೇಹ ಎಂಥವರನ್ನೂ ಕಾಡುತ್ತದೆ.
ಕನ್ನಡ ಭಾಷೆಯನ್ನು ಫನ್ ವರ್ಲ್ಡ್ ವಸ್ತುಪ್ರದರ್ಶನದಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕರ್ನಾಟಕ ಸರ್ಕಾರವು ಪ್ರಸ್ತುತ ವರ್ಷವನ್ನು ಕನ್ನಡ ಕಾಯಕ ವರ್ಷವೆಂದು ಘೋಷಣೆ ಮಾಡಿದ್ದು, ಇಂತಹ ಸಂದರ್ಭದಲ್ಲಿ ಯೇ ಕನ್ನಡಕ್ಕೆ ನಿರ್ಲಕ್ಷ್ಯ ತೋರಿಸಿರುವುದು ಕ್ಷಮಿಸಲಾರದ ತಪ್ಪಾಗಿದೆ.ತಾವು ಕೂಡಲೇ ಸೂಕ್ತ ಕ್ರಮ ಕೈಗೊಂಡು, ಸದರಿ ಫನ್ ವರ್ಲ್ಡ್ ವಸ್ತುಪ್ರದರ್ಶನದಲ್ಲಿ ಕನ್ನಡ ನಾಮಫಲಕಗಳನ್ನು ಪ್ರದರ್ಶಿಸುವಂತೆ ಕ್ರಮಕೈಗೊಳ್ಳಬೇಕು. ವಸ್ತುಪ್ರದರ್ಶನದ ಪ್ರವೇಶ ಚೀಟಿಯಲ್ಲಿ ಹಾಗೂ ವಾಹನ ನಿಲುಗಡೆಯ (ಪಾರ್ಕಿಂಗ್) ಚೀಟಿಯಲ್ಲಿ ಹಾಗೂ ಮನರಂಜನಾ ಪ್ರವೇಶ ರಶೀದಿಯಲ್ಲೂ ಕನ್ನಡ ಭಾಷೆ ಬಳಕೆಯಾಗುವಂತೆ ಸೂಚಿಸಬೇಕು.ಸದರಿ ವಸ್ತುಪ್ರದರ್ಶನದ ಮುಂಭಾಗದಲ್ಲಿ ಹಾಕಿರುವ ಬೃಹತ್ ಸ್ವಾಗತ ಫಲಕದಲ್ಲಿ ಅಗ್ರಸ್ಥಾನದಲ್ಲಿ ಕನ್ನಡ ಬಳಸುವಂತೆ ಕೂಡಲೇ ಆದೇಶಿಸಬೇಕೆಂದು ಎಂದು ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಹಾಗೂ ಮೈಸೂರು ಮಹಾನಗರಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಅರವಿಂದ್ ಶರ್ಮ ಇಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಕ್ಕೊತ್ತಾಯ ಮಾಡಿದರು.
ಹಕ್ಕೊತ್ತಾಯ ಪತ್ರ ಸ್ವೀಕರಿಸಿದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವ್ಯವಸ್ಥಾಪಕ ಅಧಿಕಾರಿಯಾದ ಎಸ್ ಸಿದ್ದೇಗೌಡ ಅವರು ಮಾತನಾಡಿ, ಕೂಡಲೇ ಗುತ್ತಿಗೆ ನೀಡಿರುವ ಫನ್ ವರ್ಲ್ಡ್ ವಸ್ತುಪ್ರದರ್ಶನ ವ್ಯವಸ್ಥಾಪಕರಿಗೆ ಈ ಬಗ್ಗೆ ಸೂಚನೆ ನೀಡಿ ವಸ್ತುಪ್ರದರ್ಶನ ಆವರಣದಲ್ಲಿರುವ ಎಲ್ಲಾ ಮಳಿಗೆಗಳ ನಾಮಫಲಕಗಳು ಹಾಗೂ ಮನರಂಜನ ಪ್ರವೇಶ ರಶೀದಿ , ವಾಹನ ನಿಲುಗಡೆ ರಶೀದಿ , ಮುಖ್ಯ ಪ್ರವೇಶ ರಶೀದಿಯಲ್ಲಿ ಅಗ್ರ ಸ್ಥಾನದಲ್ಲಿ ಕನ್ನಡ ಭಾಷೆಯನ್ನು ಬಳಸುವಂತೆ ಸೂಚಿಸಲಾಗುವುದು ಹಾಗೂ ಮುಂದೆ ಈ ರೀತಿಯ ಯಾವುದೇ ಖಾಸಗಿ ಸಂಸ್ಥೆಗಳಿಗೆ ಕಾರ್ಯಕ್ರಮಗಳಲ್ಲಿ ಅಗ್ರಸ್ಥಾನದಲ್ಲಿ ಕನ್ನಡ ಭಾಷೆ ಬಳಸುವಂತೆ ವಸ್ತುಪ್ರದರ್ಶನ ಪ್ರಾಧಿಕಾರದ ಷರತ್ತು ವಿಧಿಸಲಾಗುವುದು ಎಂದು ಸಮಿತಿ ಸದಸ್ಯರಿಗೆ ತಿಳಿಸಿದರು.