Homeಸುದ್ದಿಗಳುಅದ್ದೂರಿ ಸಮ್ಮೇಳನದ ನೆನಪಿಗೆ ಸಿಹಿ ಭೋಜನ

ಅದ್ದೂರಿ ಸಮ್ಮೇಳನದ ನೆನಪಿಗೆ ಸಿಹಿ ಭೋಜನ

ಸರ್ವ ಸದಸ್ಯರ ಶ್ರಮದಿಂದಾಗಿ ಅದ್ದೂರಿ ಸಮ್ಮೇಳನ ನಡೆಯಿತು- ಸರ್ವಾಧ್ಯಕ್ಷ ಸಂಗಮೇಶ ಗುಜಗೊಂಡ ಅಭಿಮತ

ಮೂಡಲಗಿ – ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಸದಸ್ಯರ ಸಹಕಾರ ಹಾಗೂ ಪ್ರಯತ್ನಗಳ ಫಲವಾಗಿ ಸಾಹಿತ್ಯ ಸಮ್ಮೇಳನ ನ ಭೂತೋ ನ ಭವಿಷ್ಯತಿ ಎಂಬಂತೆ ಅತ್ಯಂತ ವಿಜೃಂಭಣೆಯಿಂದ ಜರುಗಿತು ಎಂದು ಮೂಡಲಗಿ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ ಹೇಳಿದರು.

ಕಳೆದ ವರ್ಷ ಮೂಡಲಗಿ ತಾಲೂಕಿನ ಕಸಾಪ ವತಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಜರುಗಿದ ಹಿನ್ನೆಲೆಯಲ್ಲಿ ಸದಸ್ಯರಿಗೆ ಆತ್ಮೀಯ ಸಿಹಿ ಭೋಜನ ಕೂಟ ಏರ್ಪಡಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಮೊದಲು ತಾಲೂಕಿನ ಸುಣಧೋಳಿಯಲ್ಲಿ ನಡೆಯಬೇಕಾದ ಸಮ್ಮೇಳನ ಕೆಲವು ಕಾರಣಗಳಿಂದ ರದ್ದಾಯಿತು, ಮತ್ತೆ ಮೂಡಲಗಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಸಾಹಿತ್ಯ ಸಮ್ಮೇಳನ ಕೊರೋನಾ ದೆಸೆಯಿಂದಾಗಿ ಕೊನೆಯ ಘಳಿಗೆಯಲ್ಲಿಯೇ ರದ್ದಾಗಿ ತುಂಬಾ ನಿರಾಸೆ ಮೂಡಿಸಿತು. ಅನಂತರ ತಾಲೂಕಾ ಸಮ್ಮೇಳನವೊಂದು ಇಷ್ಟೊಂದು ಅದ್ದೂರಿಯಾಗಿ ಜರುಗಿದ್ದು ಅಭೂತಪೂರ್ವವಾದದ್ದು. ಎರಡು ಸಲ ಸಮ್ಮೇಳನ ಮುಂದೆ ಹಾಕಲ್ಪಟ್ಟರೂ ಕಸಾಪ ಸದಸ್ಯರು ತಾಳ್ಮೆ ಕಳೆದುಕೊಳ್ಳದೆ ಭಾಗವಹಿಸಿ ಮೂರನೆಯ ಸಲ ಯಶಸ್ವಿಗೊಳಿಸಿದರು.ನಾನು ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳುವ ಯೋಗ್ಯತೆ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೂ ನನ್ನನ್ನು ಸರ್ವಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದು ಈ ಜನ್ಮದಲ್ಲಿಯೇ ಮರೆಯಲಾಗದ್ದು. ತಮ್ಮ ಶ್ರಮದ ದ್ಯೋತಕವಾಗಿ ಸಮ್ಮೇಳನ ಅದ್ದೂರಿಯಾಗಿ ಜರುಗಿತು ಅದಕ್ಕಾಗಿ ನಾನು ತಮಗೆಲ್ಲ ಕೃತಜ್ಞತೆ ಹೇಳಲೇಬೇಕಾಗಿದೆ. ನಿಮ್ಮೊಡನೆ ಕಲೆಯಲು ಇದೊಂದು ಕಾರಣ ಮಾತ್ರ ಅದರ ನಿಮಿತ್ತ ಈ ಭೋಜನ ಕೂಟ ಏರ್ಪಡಿಸುವ ಮನಸಾಗಿತ್ತು ಅದಕ್ಕೆ ಇಂದು ಕಾಲ ಕೂಡಿ ಬಂದಿದೆ. ಹಲವು ಕಾರಣಗಳಿಂದಾಗಿ ಭೋಜನ ಕೂಟ ಏರ್ಪಾಟು ತುಂಬಾ ತಡವಾಯಿತು ಎಂದರು.

ಬರುವ ದಿನಮಾನಗಳಲ್ಲಿ ಮೂಡಲಗಿಯಲ್ಲಿ ಹೆಚ್ಚು ಹೆಚ್ಚು ಸಾಹಿತ್ಯ ಕೃಷಿ ನಡೆಯಲಿ. ಯಾರಲ್ಲಿ ಯಾವ ಪ್ರತಿಭೆ ಇದೆಯೋ ಅದು ಹೊರಬರಲಿ. ನಾವೆಲ್ಲ ಸಾಹಿತ್ಯದ ನೆರಳಲ್ಲಿ ನಾವು ಇನ್ನೂ ಹೆಚ್ಚಿನ ಆನಂದ ಪಡೆಯೋಣ ಎಂದು ಗುಜಗೊಂಡ ಹೇಳಿದರು.

ಮೂಡಲಗಿ ಕಸಾಪ ತಾಲೂಕಾ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಮಾತನಾಡಿ, ಸಮ್ಮೇಳನ ಎಂಬುದು ಒಬ್ಬರೇ ಮಾಡುವ ಕಾರ್ಯವಲ್ಲ. ಎಲ್ಲರೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲ ಕೊಟ್ಟಿದ್ದರಿಂದ ತಾಲೂಕಾ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಜರುಗಿತು ಎಂದರು.

ಸಮ್ಮೇಳನದ ಅಧ್ಯಕ್ಷರಾಗಿದ್ದ ಸಾಹಿತಿ ಸಂಗಮೇಶ ಗುಜಗೊಂಡ ಅವರು ಇನ್ನೂ ಸಾಹಿತ್ಯ ಕಾರ್ಯ ಮುಂದುವರೆಸಲಿ ಅವರು ರಾಜ್ಯ ಮಟ್ಟದ ಸಮ್ಮೇಳನದ ಅಧ್ಯಕ್ಷತೆ ವಹಿಸುವಂತಾಗಲಿ ಎಂದು ದ್ಯಾಗಾನಟ್ಟಿ ಹಾರೈಸಿದರು.

ಸಿಹಿ ಭೋಜನ ಕೂಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಚಿದಾನಂದ ಹೂಗಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group