ಗಾಂಧೀಜಿಯವರನ್ನು ಮಹಾತ್ಮ ಎಂದು ಕರೆದ ಟ್ಯಾಗೋರ್ ಅಪ್ಪಟ ದೇಶಾಭಿಮಾನಿ, ವಿಶ್ವಕವಿ, ನಾಟಕಕಾರ, ಕಥೆಗಾರ, ಕಾದಂಬರಿಕಾರ, ವರ್ಣಚಿತ್ರಕಾರರು ಆಗಿದ್ದ ಬಹುಮುಖ ಪ್ರತಿಭೆ ಎಂದು ಕವಯಿತ್ರಿ ನೀಲಾವತಿ ತಿಳಿಸಿದರು.
ಹಾಸನದ ವಿದ್ಯಾನಗರದಲ್ಲಿ ಚಿತ್ರಕಲಾ ಶಿಕ್ಷಕರು ಬಿ.ಎಸ್.ದೇಸಾಯಿ ಅವರ ನಿವಾಸದಲ್ಲಿ ನಡೆದ ಮನೆ ಮನೆ ಕವಿಗೋಷ್ಠಿ 317ನೇ ತಿಂಗಳ ಸಾಹಿತ್ಯ ಕಾರ್ಯಕ್ರಮದಲ್ಲಿ ಬಂಗಾಳಿ ಕವಿ ರವೀಂದ್ರನಾಥ ಟ್ಯಾಗೋರ್ ಬದುಕು ಮತ್ತು ಅವರ ಸಾಹಿತ್ಯ ಕುರಿತು ಉಪನ್ಯಾಸ ನೀಡಿ ರವೀಂದ್ರನಾಥರ ಕವಿತೆಗಾಗಿ ಇಡೀ ಜಗತ್ತೇ ಕಾಯುತ್ತಿದೆ ಎಂದು ಕವಿ ಯೀಟ್ಸ್ ಆಗಲೇ ಹೇಳಿದ್ದರು. ರವೀಂದ್ರರ ಗೀತಾಂಜಲಿ ಕವನ ಸಂಕಲನಕ್ಕೆ 1913ರಲ್ಲಿ ನೊಬೆಲ್ ಪ್ರಶಸ್ತಿ ಬಂದ ಹಣವನ್ನು ಅವರು ಶಾಂತಿನಿಕೇತನಕ್ಕಾಗಿ ಬಳಸಿದರು. 1923ರಲ್ಲಿ ಶಾಂತಿನಿಕೇತನವನ್ನು ರಾಷ್ಟ್ರಕ್ಕಾಗಿ ಸಮರ್ಪಣೆ ಮಾಡಿದ ಅವರ ಜನಗಣಮನ ಭಾರತದ ರಾಷ್ಟ್ರಗೀತೆಯಾಗಿದೆ ಎಂದರು.
ಮಾನವ ಮೊದಲು ನಾನು ಎನ್ನುವ ಸ್ವಾರ್ಥ ಭಾವವನ್ನು ತೊರೆದಲ್ಲಿ ಆನಂದ ಸ್ವರೂಪವಾದ ಭಗವಂತನ ದರ್ಶನವಾಗುವುದು ಅದುವೇ ಬ್ರಹ್ಮಜ್ಞಾನ ಎಂದು ಹೇಳುತ್ತಿದ್ದ ರವೀಂದ್ರನಾಥ ಟ್ಯಾಗೋರ್ ಭಕ್ತಿಯೋಗ ಕರ್ಮಯೋಗ ಸೌಂದರ್ಯಯೋಗ ಕುರಿತು ಬೋಧನೆ ಮಾಡುತ್ತಿದ್ದರು ಎಂದರು.
ಹಾಸನದ ಡಾಕ್ಟರ್ ಸಿ.ನ್.ಜಗದೀಶ್ ಅವರು ಗೀತಾಂಜಲಿ ಕೃತಿ ಕುರಿತು ಮಾತನಾಡಿದರು. ಚಿತ್ರ ಕಲಾವಿದ ಬಿ.ಎಸ್.ದೇಸಾಯಿ ಟ್ಯಾಗೋರ್ರವರ ಅಮೂರ್ತ ಚಿತ್ರಕಲೆಯ ಕುರಿತು ವ್ಯಾಖ್ಯಾನಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಜೆ.ಆರ್.ರವಿಕುಮಾರ್, ಸರೋಜ ಟಿ.ಎಂ. ವಾಣಿ ಮಹೇಶ್, ಎನ್.ಎಲ್. ಚನ್ನೇಗೌಡ, ರತ್ನ ಜಿ.ಟಿ. ಗೊರೂರು ಅನಂತರಾಜು, ವೆಂಕಟೇಶ್, ವಿಜಯ ಕಿರೇಸೂರು ಗದಗ ಸ್ವರಚಿತ ಕವಿತೆ ವಾಚಿಸಿದರು. ರಾಣಿ ಚರಾಶ್ರೀ, ನಂದಿನಿ ಟಿ. ನಳಿನಿ ಟಿ. ಚಂದ್ರಮ್ಮ ಎಚ್.ವಿ. ಜಯಲಕ್ಷ್ಮಿ ಆರ್. ಠಾಗೋರ್ ತಂಡ ದೇಶಭಕ್ತಿ ಹಾಡಿ ಮೆಚ್ಚುಗಗೆ ಪಾತ್ರರಾದರು. ಸಾವಿತ್ರಿ ಬಿ. ಗೌಡ ಅವರು ರವೀಂದ್ರರ ಸೂಕ್ತಿ ವಾಕ್ಯ ಓದಿದರು. ಕಲಾವಿದರಾದ ಯಾಕೂಬ್, ಚಂದ್ರಕಾಂತ ನಾಯರ್, ಎನ್.ಕೆ.ಶ್ರೀನಿವಾಸ ಶೆಟ್ಟಿ ಮೊದಲಾದವರು ಇದ್ದರು. ಇದೇ ಸಂದರ್ಭ ಕಲಾವಿದ ವಿಜಯ ಕಿರೇಸೂರು ಬಾವಚಿತ್ರ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಉಪನ್ಯಾಸ ನೀಡಿದ ನೀಲಾವತಿ ಸಿ.ಎನ್. ಹಾಗೂ ಬಿ.ಎಸ್.ದೇಸಾಯಿ ಬಾವಚಿತ್ರ ರಚಿಸಿದ ವಿಜಯ ಕಿರೇಸೂರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.