ಸಿಂದಗಿ: ಬಸವಾದಿ ಶರಣರು ನೀಡಿದ ವಚನ ಸಾಹಿತ್ಯ ನಮ್ಮೆಲ್ಲರ ಬದುಕಿಗೆ ದಾರಿ ದೀಪವಾಗಿದೆ ಎಂದು ರಾಷ್ಟ್ರೀಯ ಬಸವದಳ ತಾಲೂಕಾ ಘಟಕದ ನಿಕಟಪೂರ್ವ ಅಧ್ಯಕ್ಷ, ಕಲಬುರ್ಗಿ ಫೌಂಡೇಶನ್ ನಿರ್ದೇಶಕ ಶಿವಾನಂದ ಕಲಬುರ್ಗಿ ಹೇಳಿದರು.
ಪಟ್ಟಣದ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕ್ರಿಯೇಟಿವ್ ಕಿಡ್ಸ್ ಹೋಮ್ ಪೂರ್ವ ಪ್ರಾಥಮಿಕ ಶಾಲೆ ಸಭಾಭವನದಲ್ಲಿ ಶನಿವಾರ ಚಿಣ್ಣರ ವಚನಸಿರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, 12ನೇ ಶತಮಾನದಲ್ಲಿಯೇ ಸಮಾಜದ ಎಲ್ಲರಿಗೂ ನ್ಯಾಯ, ಸಮಾನ ಅವಕಾಶ ಸಿಗಬೇಕು ಎಂದು ಹೋರಾಟ ಮಾಡಿದ ಹಾಗೂ ಕಾಯಕದ ಮಹತ್ವ ಸಾರಿದ ಬಸವಣ್ಣನವರ ಒಂದೊಂದು ವಚನಗಳೂ ಬದುಕಿನ ಪಾಠ ಹೇಳುತ್ತವೆ. ಹಾಗಾಗಿ ಬಸವಣ್ಣನವರ ಹಾಗೂ ಶರಣ-ಶರಣೆಯರ ವಚನಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟಲ್ಲಿ ಸದ್ಗುಣಗಳು ಮೈಗೂಡುತ್ತವೆ ಎಂದು ತಿಳಿಸಿದರು.
ರಾಷ್ಟ್ರೀಯ ಬಸವದಳ ತಾಲೂಕಾ ಘಟಕದ ಮಾಜಿ ಅಧ್ಯಕ್ಷ ಆರ್.ಆರ್. ಪಾಟೀಲ, ಪದಾಧಿಕಾರಿಗಳಾದ ದಾನಪ್ಪ ಜೋಗೂರ, ಶಿವುಕುಮಾರ ಶಿವಸಿಂಪಿಗೇರ, ಸಿ.ಎಂ. ಮನಗೂಳಿ ಕಾಲೇಜಿನ ಗ್ರಂಥಪಾಲಕ ಆರ್.ಪಿ. ಬಿರಾದಾರ ಅವರು ಮಾತನಾಡಿ, ಕ್ರಿಯೇಟಿವ್ ಕಿಡ್ಸ್ ಹೋಮ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಚಿಣ್ಣರ ವಚನಸಿರಿ ಕಾರ್ಯಕ್ರಮ ಮಾದರಿಯಾಗಿದೆ. ಚಿಣ್ಣರು ತಮ್ಮ ತೊದಲ ನುಡಿಯಿಂದ ವಚನಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಚಿಣ್ಣರ ವಚನಸಿರಿ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಮಕ್ಕಳು ತಮ್ಮ ತೊದಲ ನುಡಿಯಿಂದ ವಚನಗಳನ್ನು ಹೇಳಿದರು. ಕೆಲ ವಿದ್ಯಾರ್ಥಿಗಳು ಶರಣರ ವೇಷಭೂಷಣದೊಂದಿಗೆ ಭಾಗವಹಿಸಿದ್ದರು. ಈ ಎಲ್ಲಾ ಮಕ್ಕಳಿಗೆ ವಿಜಯಪುರದ ಕಲಬುರ್ಗಿ ಪೌಂಡೇಶನ್ ವತಿಯಿಂದ ವಚನ ಹೇಳಿದ ಪ್ರತಿ ಮಗುವಿಗೂ ಒಂದು ವಚನ ಪುಸ್ತಕದೊಂದಿಗೆ ಪ್ರಶಸ್ತಿ ಪತ್ರವನ್ನು ರಾಷ್ಟ್ರೀಯ ಬಸವದಳ ತಾಲೂಕಾ ಘಟಕದ ನಿಕಟಪೂರ್ವ ಅಧ್ಯಕ್ಷ, ಕಲಬುರ್ಗಿ ಫೌಂಡೇಶನ್ ನಿರ್ದೇಶಕ ಶಿವಾನಂದ ಕಲಬುರ್ಗಿ ಅವರು ನೀಡಿದರು.
ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಪೂಜಾರ ಮಾತನಾಡಿ, ಬಸವಣ್ಣನವರ ವಚನಗಳನ್ನು ಮಕ್ಕಳಿಗೆ ತಿಳಿಸಿದರೆ ಅದರಲ್ಲಿರುವ ವಿಚಾರಗಳು ಪ್ರಸ್ತುತ ಸಮಾಜವನ್ನು ಆರೋಗ್ಯಕರವಾಗಿ ಉಳಿಯುವಂತೆ ಮಾಡುತ್ತವೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಚಿಣ್ಣರ ವಚನಸಿರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಜ್ಯೋತಿ ಪೂಜಾರ ಮಾತನಾಡಿ, ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಶರಣರು ರಚಿಸಿದ ಒಂದು ವಚನವೇ ಸಾಕು. ವಚನಗಳು ಎಲ್ಲಾ ಧರ್ಮೀಯರಿಗೆ ಅನ್ಯಯವಾಗುತ್ತವೆ. ಅದಕ್ಕಾಗಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ವಚನಗಳು ಎಲ್ಲರೂ ಅರಿಯಬೇಕು ಎಂದು ಹೇಳಿದರು.
ಶಿಕ್ಷಕಿಯರಾದ ಅಶ್ವಿನಿ ಲೋಣಿ, ಮಂಗಳಾ ಬಮ್ಮಣ್ಣಿ, ಸಾಧನಾ ಇಮಡೆ, ಗೌರಿ ಪಾಟೀಲ, ಶಾಂತಾ ಮೋಸಲಗಿ, ಅಂಬಿಕಾ ಹೂಗಾರ ಸೇರಿದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು