ಸಿಂದಗಿ: ಶಿಕ್ಷಕರು ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ತಮ್ಮ ಅನುಭವ ಮತ್ತು ಬೋಧನೆಗಳೊಂದಿಗೆ ಹೊಸ ಹೊಸ ಅವಿಷ್ಕಾರಗಳನ್ನು ಸಾಹಿತ್ಯ ಪಾಂಡಿತ್ಯಕ್ಕೆ ಮಾರ್ಗ ಮಾಡಿಕೊಡಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆಯ್ .ಎಸ್. ಟಕ್ಕೆ ಸಲಹೆ ನೀಡಿದರು.
ಪಟ್ಟಣದ ಬಸವ ನಗರದ ಜ್ಞಾನ ಭಾರತಿ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ಜಿಲ್ಲಾ ಪಂಚಾಯತ ಹಾಗೂ ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಪ್ರೌಢ ಶಾಲಾ ಶಿಕ್ಷಕರ ಮತ್ತು ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಾಲಾ ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ದಗೊಳಿಸುತ್ತಲೇ ತಾವೂ ಪಠ್ಯೇತರ ಚಟುವಟಿಕೆಯಲ್ಲಿ ಶಿಕ್ಷಕರು ಪ್ರತಿಭೆ ಗಳಿಸಬೇಕು. ಅಲ್ಲದೆ ಪ್ರತಿ ವರ್ಷ ತಮ್ಮ ಭೋಧನೆಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಪರಿಣಾಮಕಾರಿ ಭೋಧನೆ ಮಾಡುವುದರಿಂದ ಪ್ರತಿಭೆ ಅರಿವಿಲ್ಲದಂತೆ ಹೊರ ಬರುತ್ತದೆ. ಇಂತಹ ಸ್ಪರ್ಧಾ ಕಾರ್ಯಕ್ರಮದಲ್ಲಿ ಶಿಕ್ಷಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಶಿಕ್ಷಣ ಸಂಯೋಜಕ ಆನಂದ ಮಾಡಗಿ ಮಾತನಾಡಿ, ಶಿಕ್ಷಕರ ಪಠ್ಯೇತರ ಚಟುವಟಿಕೆಗಳ ಲ್ಲಿನ ಪ್ರತಿಭೆಯುಳ್ಳವರನ್ನು ಗುರುತಿಸಿ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟಕ್ಕೆ ಕಳಿಸುವುದಾಗಿದೆ. ಪಠ್ಯಗಳಿಗೆ ಸಂಬಂಧಿಸಿದಂತೆ ಕಲಿಕೋಪಕರಣಗಳನ್ನು ತಯಾರಿಸಬೇಕು. ಚಿತ್ರಕಲೆ ಸಹಶಿಕ್ಷಣ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿರಬೇಕು. ಇಂತಹ ಕೆಲ ಮಾನದಂಡಗಳನ್ನು ಅನುಸರಿಸಿದರೆ ಮಾತ್ರ ಸ್ಪರ್ಧೆಗೆ ಅರ್ಥ ಬರುತ್ತದೆ. ಶಿಕ್ಷಕರು ತಮ್ಮಲ್ಲಿರುವ ಪ್ರತಿಭೆ ತೋರಲು ಇದು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರಾಯಪ್ಪ ಇವಣಗಿ, ಜ್ಞಾನ ಭಾರತಿ ಶಾಲೆಯ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಜಗದೀಶ ಪಾಟೀಲ, ರವಿ ಹೊಸಮನಿ, ಜಗನಾಥ ಅಲ್ದಿಮಠ, ಎಫ್ ಆರ್ ಕಾಜೂರ, ಎಸ್.ಬಿ.ಕಮತಗಿ, ಜಯಶ್ರೀ ಕುಲಕರ್ಣಿ, ಬಸವರಾಜ ಶಿರವಳಕರ್, ಬಿ.ಎಸ್ ಅಗಸಬಾಳ, ಶಿಕ್ಷಕ ಬಸವರಾಜ ಅಗಸರ, ಸಂಗು ಮಲ್ಲೇದ ಇದ್ದರು. ಶಿಕ್ಷಕ ಮನೋಹರ ರೂಗಿ ಸ್ಪರ್ಧಾಳುಗಳಿಗೆ ಶುಭಕೋರಿದರು.